ಈ ಬಾರಿ ಬಿಟ್ಟರೆ ಮತ್ತೆಂದೂ ಬಿಎಸ್ ವೈ ಸಿಎಂ ಆಗಲಾರರಂತೆ!
ಮೈಸೂರು, ನವೆಂಬರ್ 27: ಚುನಾವಣೆಯಲ್ಲಿ ಯಾವುದೇ ಒಂದು ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಪಡೆಯದಿದ್ದರೆ ರಾಜ್ಯದ ಸ್ಥಿತಿ, ರಾಜಕೀಯ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ನಮ್ಮ ರಾಜ್ಯವೇ ಸಾಕ್ಷಿ. ಇಲ್ಲಿ ರಾಜ್ಯದ ಜನರ ಹಿತದೃಷ್ಟಿಗಿಂತ ಹೆಚ್ಚಾಗಿ ತಮ್ಮ ರಾಜಕೀಯ ಜೀವನದ ಮೇಲೇ ಪ್ರಮುಖ ಪಕ್ಷಗಳ ನಾಯಕರು ತಮ್ಮ ಗಮನ ಕೇಂದ್ರೀಕರಿಸಿದ್ದಾರೆ ಎನ್ನುವುದು ಇದೀಗ ಉಪಚುನಾವಣೆ ವೇಳೆ ಬಹಿರಂಗವಾಗುತ್ತಿದೆ.
ಇವತ್ತಿನ ಉಪಚುನಾವಣೆಗೆ ರಾಜಕೀಯ ನಾಯಕರ ಬಯಕೆ, ಹಟವೂ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಷ್ಟಕ್ಕೂ ಅತ್ಯಧಿಕ ಸ್ಥಾನವನ್ನು ಯಡಿಯೂರಪ್ಪ ಅವರು (ಬಿಜೆಪಿ ಪಕ್ಷ) ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದಿದ್ದರೂ ಅಧಿಕಾರ ಹಿಡಿಯಲು ಬೇಕಾಗುವ ಮ್ಯಾಜಿಕ್ ಸಂಖ್ಯೆ ಅವರಿಗೆ ದಕ್ಕಿರಲಿಲ್ಲ. ಈ ಅಂಶವೇ ಉಪಚುನಾವಣೆಗೆ ಕರೆದುಕೊಂಡು ಬಂದಿದೆ.
ಇವತ್ತಿನ ಉಪಚುನಾವಣೆಗೆ ಕಾರಣರಾರು?
ಮೊದಲಿನಿಂದಲೂ ಜೆಡಿಎಸ್ ಬಗ್ಗೆ ಮೆದುಧೋರಣೆ ತಾಳುತ್ತಾ ಬಂದಿದ್ದ ಬಿಜೆಪಿ ನಾಯಕರಿಗೆ ಕೊನೆ ಗಳಿಗೆಯಲ್ಲಿ ಶಾಕ್ ಕಾದಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿದ್ದರು. ಆದರೂ ನಾನೇ ಮುಖ್ಯಮಂತ್ರಿಯಾಗುತ್ತೇನೆ, ಬಹುಮತ ಸಾಬೀತು ಪಡಿಸುತ್ತೇನೆ ಎಂಬ ನಂಬಿಕೆಯಲ್ಲಿದ್ದ ಯಡಿಯೂರಪ್ಪ ಕೊನೆಗೂ ತನಗೆ ಬಹುಮತ ಸಿಗಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ರಾಜೀನಾಮೆ ನೀಡಿ ಹೊರಬಂದಿದ್ದರು. ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾದಾಗ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಿದರಾದರೂ ಮುಖ್ಯಮಂತ್ರಿಯಾಗಿಯೇ ತೀರುತ್ತೇನೆ ಎಂಬ ಶಪಥ ಮಾಡಿದ್ದ ಅವರು ಅದಕ್ಕಾಗಿ ಏನೆಲ್ಲ ತಂತ್ರಗಳನ್ನು ಮಾಡಬಹುದೋ ಅದೆಲ್ಲವನ್ನು ಮಾಡುತ್ತಾ ಬಂದಿದ್ದರು. ಅದರ ಪರಿಣಾಮವೇ ಇವತ್ತಿನ ಉಪಚುನಾವಣೆ ಎಂದರೆ ತಪ್ಪಾಗಲಾರದು.
ದೇವೇಗೌಡರ ಪ್ರಕಾರ 15ಕ್ಕೆ 15 ಗೆಲ್ಲುವ ಸಿಎಂ ಆತ್ಮವಿಶ್ವಾಸಕ್ಕೆ ಕಾರಣ ಏನು?
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ಒಂದು ರಾಜಕೀಯ ಪಕ್ಷ ಬಹುಮತ ಪಡೆದಿದ್ದರೆ ಇವತ್ತು ಉಪಚುನಾವಣೆ ನಡೆಯುತ್ತಿರಲಿಲ್ಲ. ಅಷ್ಟೇ ಅಲ್ಲ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಒಂದಾದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರು ಅಧಿಕಾರದ ಆಸೆಗೆ ಬೀಳದೆ, ಒಟ್ಟಾಗಿ ಆಡಳಿತ ನಡೆಸಿಕೊಂಡು ಹೋಗಿದ್ದರೂ ರಾಜಕೀಯ ಸಂದಿಗ್ಧತೆ ಎದುರಾಗುತ್ತಿರಲಿಲ್ಲ.
ಮೈತ್ರಿಗೆ ಎಳ್ಳು ನೀರು ಬಿಟ್ಟಾಗಿದೆ ಮುಂದೇನು?
ಇವತ್ತು ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಬಿಜೆಪಿ ಕಾರಣ ಎಂದು ಘಂಟಾನುಘೋಷವಾಗಿ ಹೇಳುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಾವು ಹೊಂದಾಣಿಕೆಯಿಂದ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಇದೀಗ ಉಪ ಚುನಾವಣೆ ನಡೆಯುತ್ತಿದೆ. ಇಲ್ಲಿ ಅನರ್ಹ ಶಾಸಕರು ಗೆದ್ದರೆ ಸ್ಥಿರ ಸರ್ಕಾರ ರಾಜ್ಯದಲ್ಲಿರುತ್ತದೆ. ಒಂದು ವೇಳೆ ಸೋತರೆ ಏನಾಗಬಹುದು ಎಂಬುದನ್ನು ಊಹಿಸುವುದೇ ಕಷ್ಟವಾಗುತ್ತದೆ. ಏಕೆಂದರೆ ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ನಡುವೆ ಮಾಡಿಕೊಂಡಿದ್ದ ಮೈತ್ರಿಗೆ ಎಳ್ಳು ನೀರು ಬಿಟ್ಟಾಗಿದೆ. ಹೀಗಾಗಿ ಮತ್ತೆ ಇವರು ಒಂದಾಗುವುದು ಕಷ್ಟವೇ. ಹೀಗಾಗಿ ಮತ್ತೆ ರಾಜ್ಯದಲ್ಲಿ ರಾಜಕೀಯ ದೊಂಬರಾಟ ಮುಂದುವರೆಯುವುದಂತು ನಿಜ. ಅದರಿಂದ ಮತ್ತೆ ಶ್ರೀಸಾಮಾನ್ಯ ತೊಂದರೆ ಅನುಭವಿಸುವುದು ತಪ್ಪಿದಲ್ಲ.
ಅನರ್ಹರಿಗೆ ತಕ್ಕ ಪಾಠ ಕಲಿಸ್ತಾರಾ ಎಚ್ಡಿಕೆ?
ಈ ವಿಚಾರ ಇದೀಗ ರಾಜ್ಯದ ಜನತೆಯನ್ನು ಕಂಗೆಡಿಸಿದೆ. ಸಮ್ಮಿಶ್ರ ಸರ್ಕಾರಾವಧಿಯಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳುವುದೇ ಅವತ್ತಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯವಾಗಿತ್ತು. ಸದಾ ಒಂದಲ್ಲ ಒಂದು ಗೊಂದಲದಲ್ಲಿಯೇ ಸುಮಾರು ಹದಿನಾಲ್ಕು ತಿಂಗಳ ಕಾಲ ರಾಜ್ಯಭಾರ ಮಾಡಿದ ಅವರಿಗೆ ರಾಜ್ಯದ ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಿಂತ ಹೆಚ್ಚು ಕಷ್ಟವಾಗಿದ್ದು, ತಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಶಮನಗೊಳಿಸುವುದು ಮತ್ತು ಆಪರೇಷನ್ ಕಮಲಕ್ಕೊಳಗಾಗಲಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಸಿಎಂ ಆಗುವುದು ಅಷ್ಟು ಸುಲಭವಲ್ಲ ಎಂಬುದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರು ಉಪಚುನಾವಣೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಆದರೆ ತಮ್ಮ ಸರ್ಕಾರದ ಪತನಕ್ಕೆ ಕಾರಣರಾದವರಿಗೆ ತಕ್ಕ ಪಾಠ ಕಲಿಸಬೇಕೆಂಬ ಹಠಕ್ಕೆ ಬಿದ್ದಿದ್ದಂತು ನಿಜ.
ಫಡ್ನವೀಸ್, ಬಿಎಸ್ವೈ; ಅಕ್ಕಪಕ್ಕ ರಾಜ್ಯಗಳ ನಾಯಕರ ಕಥೆ!
ಯಡಿಯೂರಪ್ಪರದು ಇದೇ ಕೊನೆ ಆಟನಾ?
ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತದಾರರ ಮುಂದೆ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಈ ಬಾರಿಯ ಅವಕಾಶ ಕೈ ತಪ್ಪಿ ಹೋದರೆ ಮುಂದೆಂದೂ ಅವರು ಮುಖ್ಯಮಂತ್ರಿಯಾಗಲ್ಲ ಎಂಬುದು ಗೊತ್ತಾಗುತ್ತಿದೆ. ಜತೆಗೆ ಸಿಎಂ ಆಗಲು ಅವರೆಷ್ಟು ಶ್ರಮ ಪಟ್ಟಿದ್ದಾರೆ ಏನೆಲ್ಲ ತಂತ್ರಗಳನ್ನು ಮಾಡಿದ್ದಾರೆ ಎಂಬುದು ಕೂಡ ಮನದಟ್ಟಾಗುತ್ತದೆ. ಅವರೇ ಹೇಳುತ್ತಿರುವಂತೆ ಅನರ್ಹ ಶಾಸಕರು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲೆಂದೇ ತಮ್ಮ ಶಾಸಕ ಸ್ಥಾನವನ್ನು ತ್ಯಜಿಸಿದ್ದಾರಂತೆ. ಹೀಗಾಗಿ ಅನರ್ಹ ಶಾಸಕರನ್ನು ಗೆಲ್ಲಿಸಿ ಯಡಿಯೂರಪ್ಪ ಅವರು ಮುಂದಿನ ಮೂರೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಮತದಾರರು ಅನುವು ಮಾಡಿಕೊಡಬೇಕು ಎಂದೂ ಕೇಳಿಕೊಂಡಿದ್ದಾರೆ.
ಸಿಎಂ ಕುರ್ಚಿ ಉಳಿವಿಗೆ ಪ್ರಾರ್ಥನೆ
ಇಷ್ಟೇ ಅಲ್ಲದೆ ಹುದ್ದೆಗೆ ಈ ಬಾರಿ ಬಿಟ್ಟರೆ ಮತ್ತೆಂದೂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಏರಲಾರರಂತೆ. ಹೀಗಾಗಿ ಇರುವ ಹುದ್ದೆಯನ್ನು ಉಳಿಸಿಕೊಳ್ಳಲು ಮತದಾರರು ಸಹಕಾರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಅವರ ಮಾತಿನಲ್ಲೇ ಹೇಳುವುದಾದರೆ, "ಹಿಂದೆ ಯಾವತ್ತೂ ಇಂತಹ ಸಂಕಷ್ಟದಲ್ಲಿ ನಾನಿರಲಿಲ್ಲ. ಈಗ ಸಂಕಷ್ಟದಲ್ಲಿ ಅಧಿಕಾರ ನಡೆಸುತ್ತಿದ್ದೇನೆ. ಆದ್ದರಿಂದ ಈಗ ನಿಮ್ಮಲ್ಲಿ ಮತಭಿಕ್ಷೆ ಕೇಳುತ್ತಿದ್ದೇನೆ. ದಯಮಾಡಿ ನಿಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ" ಎಂದು ಮತದಾರರಲ್ಲಿ ಕೇಳಿಕೊಂಡಿದ್ದಾರೆ.
ಎಲ್ಲವನ್ನು ಗಮನಿಸುತ್ತಿರುವ ಮತದಾರರು ಮತದಾನದ ದಿನ ಏನು ಮಾಡುತ್ತಾರೆ ಎಂಬುದರ ಮೇಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ನಿಂತಿದೆ ಎಂಬುದಂತೂ ನಿಜ. ಮುಂದೇನಾಗಬಹುದು ಎಂಬ ಆತಂಕ ಅವರದ್ದಾಗಿದ್ದರೆ, ಕಾತರ ಮಾತ್ರ ರಾಜ್ಯದ ಜನತೆಯದ್ದು.