International Tiger Day: ಮೈಸೂರು ಮಹಾರಾಜರ ಹುಲಿ ಪ್ರೀತಿ ನಿಮಗೆ ಗೊತ್ತಾ?
ಮೈಸೂರು, ಜುಲೈ 29: ಹುಲಿ ಸಂತತಿಯನ್ನು ಸಂರಕ್ಷಿಸುವ ಕೆಲಸ ದೇಶ ಮಾತ್ರವಲ್ಲದೆ, ವಿಶ್ವವ್ಯಾಪಿ ಮಾಡಲಾಗುತ್ತಿದೆ. ಹೀಗಾಗಿಯೇ ಹುಲಿಯನ್ನು ಸಂರಕ್ಷಿಸುವ ಸಲುವಾಗಿ ಪ್ರತಿವರ್ಷ ಜುಲೈ 29ನ್ನು ಅಂತರಾಷ್ಟ್ರೀಯ ಹುಲಿದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಹಲವು ಕಾರಣಗಳಿಗಾಗಿ ಹುಲಿಯ ಸಂತತಿ ಕ್ಷೀಣವಾಗುತ್ತಿರುವುದನ್ನು ಗಮನಿಸಿ ಅವುಗಳ ಸಂರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇನ್ನು ಹುಲಿ ದಿನದ ಈ ಸಂದರ್ಭ ಹುಲಿಗೂ ಮೈಸೂರು ಮಹಾರಾಜರಿಗೂ ಇದ್ದ ಸಂಬಂಧಗಳ ಬಗ್ಗೆ ಹೇಳಲೇ ಬೇಕಾಗುತ್ತದೆ.
ಹಾಗೆ ನೋಡಿದರೆ ಮೈಸೂರನ್ನು ಆಳಿದ ಮಹಾರಾಜರುಗಳು ಪ್ರಾಣಿಪ್ರಿಯರು ಎಂಬುದಕ್ಕೆ ನಗರದಲ್ಲಿರುವ ಮೃಗಾಲಯ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೆ ಆನೆಗಳ ಬಗ್ಗೆಯೂ ಹೆಚ್ಚಿನ ಪ್ರೀತಿ ತೋರುತ್ತಿದ್ದರು ಎಂಬುದಕ್ಕೆ ದಸರಾ ವೇಳೆ ನಡೆಯುವ ಜಂಬೂ ಸವಾರಿ ನಿದರ್ಶನವಾಗಿದೆ. ಹಾಗೆಯೇ ಹುಲಿಗಳನ್ನು ಎಷ್ಟೊಂದು ಪ್ರೀತಿಸುತ್ತಿದ್ದರು ಎಂಬುದನ್ನು ಮೈಸೂರು ಅರಮನೆಯಲ್ಲಿರುವ ಹುಲಿಗಳ ಕಂಚಿನ ಪ್ರತಿಮೆಗಳು ಹೇಳುತ್ತವೆ.

ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಹುಲಿಗಳನ್ನು ಕ್ರೂರ ಪ್ರಾಣಿ ಎಂದೇ ಗುರುತಿಸಲಾಗುತ್ತಿದೆ. ಕೃಷಿ ಮಾಡಿಕೊಂಡು, ಜಾನುವಾರುಗಳನ್ನು ಸಾಕಿ ಸಲಹಿಕೊಂಡು ಜೀವನ ಸಾಗಿಸುತ್ತಿದ್ದ ಮನುಷ್ಯ ಜಾನುವಾರು ಸೇರಿದಂತೆ ಸಾಕುಪ್ರಾಣಿಗಳನ್ನು ರಕ್ಷಿಸುವ ಸಲುವಾಗಿ ಹುಲಿಯನ್ನು ಬೇಟೆಯಾಡಿ ಕೊಲ್ಲುತ್ತಿದ್ದನು.
ಬೇಟೆ ನಿಷೇಧಗೊಂಡ ಬಳಿಕ ಎಲ್ಲ ರೀತಿಯ ಪ್ರಾಣಿಗಳ ಜೀವ ಉಳಿಯುವಂತಾಗಿದೆ. ಹಾಗೆಂದು ಬೇಟೆಗೆ ಸಂಪೂರ್ಣವಾಗಿ ಕಡಿವಾಣ ಬಿದ್ದಿಲ್ಲ. ಅಕ್ರಮ ಬೇಟೆಗಳು ನಡೆಯುತ್ತಲೇ ಇವೆ. ಅದು ಆಚೆಗಿರಲಿ. ಇದೆಲ್ಲದರ ನಡುವೆ ಹುಲಿ ಸಂತತಿ ವಿನಾಶದ ಅಂಚಿಗೆ ತಲುಪಿದ ವೇಳೆಯಲ್ಲಿಯೇ ಅದರ ರಕ್ಷಣೆಗೆ ಕೈಗೊಂಡ ಕ್ರಮಗಳು ಇವತ್ತು ಹುಲಿಯ ಸಂಖ್ಯೆ ಹೆಚ್ಚಳವಾಗಲು ಸಾಧ್ಯವಾಗಿದೆ. ಇದು ಖುಷಿಯ ವಿಚಾರವಾಗಿದೆ. ಆದರೆ ಮೈಸೂರು ಮಹಾರಾಜರ ಕಾಲದಲ್ಲಿಯೇ ಹುಲಿಗಳ ಬಗ್ಗೆ ಅವರು ಅಕ್ಕರೆ ತೋರುತ್ತಿದ್ದರಲ್ಲದೆ, ಅವುಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು ಎಂಬುದನ್ನು ಅದೊಂದು ಘಟನೆ ಇಂದಿಗೂ ಹೇಳುತ್ತಿದೆ.
ಅರಮನೆ ಬಳಿ ಬರುತ್ತಿದ್ದ ಹುಲಿಗಳು
ಸ್ವಾತಂತ್ರ್ಯ ಪೂರ್ವದ ಮೈಸೂರು ಸಂಸ್ಥಾನವನ್ನು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಳುತ್ತಿದ್ದ ಕಾಲದಲ್ಲಿ ಈಗಿದ್ದ ಅರಮನೆಗೂ ಹಿಂದೆ ಹಳೆಯ ಅರಮನೆಯಿತ್ತು. ಅಲ್ಲಿ ರಾಜಪರಿವಾರ ಸೇವಕರು ಇರುತ್ತಿದ್ದರು. ಅವತ್ತಿನ ಕಾಲದಲ್ಲಿ ಎಲ್ಲೆಡೆ ಕಾಡುಗಳಿದ್ದವು ಹೀಗಾಗಿ ಕಾಡು ಪ್ರಾಣಿಗಳು ಅರಮನೆ ಸುತ್ತಮುತ್ತ ಅಡ್ಡಾಡುತ್ತಿದ್ದವು. ಅವು ಯಾವುದೂ ಮಹಾರಾಜರಿಗೆ ಅಚ್ಚರಿ ಅನಿಸಲಿಲ್ಲ. ಇವುಗಳ ನಡುವೆ ಅವರನ್ನು ಹೆಚ್ಚಾಗಿ ಕಾಡಿದ್ದು ಅರಮನೆಯ ಹೊರ ಆವರಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಗಳು.

ಈ ಹುಲಿಗಳು ಹೊರ ಆವರಣದಲ್ಲಿ ಅಡ್ಡಾಡಿದರೂ ಯಾರಿಗೂ ತೊಂದರೆ ನೀಡುತ್ತಿರಲಿಲ್ಲವಂತೆ. ಸೌಮ್ಯತೆಯಿಂದ ವರ್ತಿಸುತ್ತಿದ್ದ ಹುಲಿಗಳನ್ನು ನೋಡಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಖುಷಿಪಡುತ್ತಾ ದಿನ ಕಳೆಯುತ್ತಿದ್ದರಂತೆ. ಆದರೆ ಕೆಲವು ವರ್ಷಗಳ ನಂತರ ಹುಲಿಗಳು ಬರುವುದನ್ನು ನಿಲ್ಲಿಸಿ ಬಿಟ್ಟವು. ಇದು ಅವರಿಗೆ ಅತೀವ ವೇದನೆಯನ್ನುಂಟು ಮಾಡಿತಂತೆ. ಮುಂದೆ ಈ ವಿಚಾರವನ್ನು ಅವರು ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಹೇಳಿದ್ದರಂತೆ. ಇದನ್ನು ಕೇಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅರಮನೆ ಆವರಣದಲ್ಲಿ ಹುಲಿಗಳು ಅಡ್ಡಾಡುತ್ತಿದ್ದ ನೆನಪಿಗಾಗಿ ಪ್ರತಿಮೆಗಳನ್ನು ನಿರ್ಮಿಸುವ ತೀರ್ಮಾನ ಮಾಡಿದರು.
ಹುಲಿ ಪ್ರೀತಿಗೆ ಪ್ರತಿಮೆ ನಿರ್ಮಾಣ
ಹುಲಿಗಳ ಪ್ರತಿಮೆ ನಿರ್ಮಾಣ ಮಾಡಲು ಶಿಲ್ಪಿಗಳನ್ನು ಹುಡುಕುತ್ತಿದ್ದರಂತೆ ಅದೇ ಸಂದರ್ಭ ಅರಮನೆ ವೀಕ್ಷಣೆಗೆ ಬಂದಿದ್ದ ಪ್ರಖ್ಯಾತ ಶಿಲ್ಪ ತಜ್ಞ ಬ್ರಿಟನ್ ನ ರಾಯಲ್ ಅಕಾಡೆಮಿಯ ರಾಬರ್ಡ್ ವಿಲಿಯಂ ಕಾಲ್ಟನ್ ಅವರೊಂದಿಗೆ ಮಾತನಾಡುತ್ತಾ ತಮ್ಮ ಮನದ ಇಂಗಿತವನ್ನು ತಿಳಿಸಿದರು. ಆಗ ರಾಬರ್ಡ್ ವಿಲಿಯಂ ಕಾಲ್ಟನ್ ಅವರು ಮೂರು ತಿಂಗಳ ಅವಧಿಯೊಳಗೆ ಹುಲಿಗಳ ಪ್ರತಿಮೆಯನ್ನು ಮಾಡಿಕೊಡಲು ಒಪ್ಪಿದರು.
ಅದರಂತೆ 1909ರ ಅವಧಿಯಲ್ಲಿ ಕಂಚಿನ ಹುಲಿಯ ಪ್ರತಿಮೆಗಳನ್ನು ಅರಮನೆಯ ಉತ್ತರ, ದಕ್ಷಿಣ ಹಾಗೂ ಪೂರ್ವ ದಿಕ್ಕು ಅಲ್ಲದೆ, ಜಯಮಾರ್ತಂಡ, ವರಾಹ, ಜಯರಾಮ ಮತ್ತು ಬಲರಾಮ ದ್ವಾರಕ್ಕೆ ಎದುರಾಗಿ ಹಾಗೂ ಕಲ್ಯಾಣ ಮಂಟಪ ಹತ್ತಿರವಿರುವ ತೆರೆದ ತೊಟ್ಟಿಯ ಭಾಗ (ಜಟ್ಟಿ ಕಾಳಗ ಸ್ಥಳ)ದಲ್ಲಿ ಹೀಗೆ ಒಟ್ಟು ಎಂಟು ಕಡೆ ಪ್ರತಿಷ್ಠಾಪಿಸಲಾಯಿತು.
ಇವತ್ತು ಅರಮನೆಯಲ್ಲಿ ಈ ಹುಲಿಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ಅದರಲ್ಲೂ ಮೊಬೈಲ್ ಬಂದ ಬಳಿಕ ಸೆಲ್ಫಿ ಯುಗದಲ್ಲಿ ದೂರದಿಂದ ಬರುವ ಪ್ರವಾಸಿಗರಿಗೆ ಇದರ ಬಳಿ ನಿಂತು ಫೋಟೋ ತೆಗೆದುಕೊಂಡು ಹೋಗುವ ಮನಸ್ಸು ಮಾಡುತ್ತಾರೆ. ಅದು ಏನೇ ಇರಲಿ ಹುಲಿ ದಿನಾಚರಣೆ ಸಂದರ್ಭ ಮೈಸೂರಿನ ಮಹಾರಾಜರ ಹುಲಿ ಪ್ರೀತಿಗೆ ಸಲಾಮ್ ಹೇಳಲೇ ಬೇಕಾಗುತ್ತದೆ.












Click it and Unblock the Notifications