ಮೈಸೂರಿನಲ್ಲಿ ನಡೆದ ನಾವಿಕೋತ್ಸವದಲ್ಲಿ ಕನ್ನಡ ಡಿಂಡಿಮ ಬಾರಿಸಿದ ವಿದೇಶಿ ಕನ್ನಡಿಗರು
ಮೈಸೂರು, ಆಗಸ್ಟ್ 06 : ಮೈಸೂರಿನ ಕಲಾಮಂದಿರದಲ್ಲಿ ಕಲಾರಂಗು ಮನೆಮಾಡಿತ್ತು. ನಮ್ಮ ನಾಡಿನ ವಿದೇಶಿಗರ ಕನ್ನಡಾಭಿಮಾನ ನಿಜವಾದ ಕನ್ನಡಿಗನನ್ನೇ ಬಡಿದೆಬ್ಬಿಸುವಂತಿತ್ತು. ಇದು ಮೈಸೂರಿನಲ್ಲಿ ಭಾನುವಾರ ಸಂಪನ್ನಗೊಂಡ ನಾವಿಕೋತ್ಸವ - 2018ರ ಚಿತ್ರಣ.
ಹೌದು, ನಮ್ಮ ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಇಲ್ಲಿನ ಸಂಸ್ಕೃತಿ, ಸಂಸ್ಕಾರಗಳನ್ನು ವಿದೇಶಿಗರು ಅನುಸರಿಸುತ್ತಿದ್ದಾರೆ ಎಂಬುದಕ್ಕೆ ಉತ್ಸವದಲ್ಲಿ ಪಾಲ್ಗೊಂಡ ನೂರಾರು ವಿದೇಶಿ ಕಲಾಭಿಮಾನಿಗಳೇ ಸಾಕ್ಷಿಯಾಗಿದ್ದರು.
ಎರಡು ದಿನಗಳ ಉತ್ಸವದಲ್ಲಿ ಫ್ಲೋರಿಡಾ, ನ್ಯೂಯಾರ್ಕ್, ಯು. ಕೆ., ಕ್ಯಾಲಿಫೋರ್ನಿಯಾ, ಮಿಚಿಗನ್, ಟೆಕ್ಸಾಸ್ ದೇಶಗಳಿಂದ ಬಹು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಬೆಂಗಳೂರಿಗೆ ಬಂದು ಮೈಸೂರಿನಲ್ಲಿ ನಡೆದ ನಾವಿಕೋತ್ಸವದಲ್ಲಿ ಭಾಗವಹಿಸಿ ಆನಂದಿತರಾದರು.

ಸಂಗೀತ, ನೃತ್ಯಗಳ ಸಮ್ಮಿಲನದೊಂದಿಗೆ ನಡೆದ ಈ ಎರಡು ದಿನಗಳ ನಾವಿಕೋತ್ಸವವು ಕಲಾಭಿಮಾನಿಗಳಿಗೆ ವಿಶೇಷ ಅನುಭವವನ್ನು ನೀಡಿತ್ತು.
ಬೆಳಗ್ಗೆ 9.30ಕ್ಕೆ ಆರಂಭವಾದ ಕಾರ್ಯಕ್ರಮ ಕನ್ನಡ ಕಲಿ ಶಾಲಾ ಮಕ್ಕಳ ನೃತ್ಯದಿಂದ ಬೆಳಗಿತು. ಇದಾದ ಬಳಿಕ ದಾಸೋಹಂ ನೃತ್ಯ ಆರ್ ಐ ಕಲಾವಿದರಿಂದ ನಡೆದಿದ್ದು, ನೋಡುಗನ ನಿಬ್ಬೆರಗಾಗಿಸಿತು. ದಿ. ಶಿಕಾರಿಪುರ ಹರಿಹರೇಶ್ವರ ಕುರಿತಂತೆ ನಡೆದ ನುಡಿ ನಮನವು ತಲೆದೂಗಿಸಿತು.
ಸಾಹಿತ್ಯ ಗೋಷ್ಠಿಯಲ್ಲಿ ಡಾ. ವೆಂಕಟಾಚಲ ಶಾಸ್ತ್ರಿ, ವಸಂತ್ ಭಾರಧ್ವಾಜ್ , ಪ್ರೊ. ಹರಿಶಂಕರ್ ಸೇರಿದಂತೆ ಮತ್ತಿರರು ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಂಡರು. ಇದಾದ ಬಳಿಕ ಸಂಜೆ ಮೈಸೂರು ಆನಂದ್ ರವರಿಂದ ವಿಶೇಷ ಹಾಸ್ಯ ಸಂಜೆ ಕಾರ್ಯಕ್ರಮ ಸಂಪನ್ನಗೊಂಡಿತು.

ಎಂ.ಎನ್ ಸತ್ಯು ನಿರ್ದೇಶನದ ನಾಟಕ ಗುಲೇಬಕಾವಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಲ್ಲಿ ಎರಡು ಮಾತಿಲ್ಲ. ಒಟ್ಟಾರೆ ಎರಡು ದಿನಗಳ ನಾವಿಕೋತ್ಸವ - 2018 ಮಾತ್ರ ಸಾಂಸ್ಕೃತಿಕ ನಗರಿ ಮೈಸೂರಿನ ಹಿರಿಮೆಯನ್ನು ಆಳೆತ್ತರಕ್ಕೆ ಕೊಂಡಯ್ದುದರಲ್ಲಿ ಸಂಶಯವಿಲ್ಲ.












Click it and Unblock the Notifications