ಜೆಡಿಎಸ್ ಶಾಸಕರ ವಿರುದ್ಧವೇ ಕುಮಾರಸ್ವಾಮಿ ಗರಂ
ಮೈಸೂರು, ಅಕ್ಟೋಬರ್ 18: ತಮ್ಮ ಪಕ್ಷದ ಶಾಸಕರ ವಿರುದ್ಧವೇ ಕುಮಾರಸ್ವಾಮಿ ಅವರು ಗರಂ ಆಗಿದ್ದು, ಪಕ್ಷ ತ್ಯಜಿಸಿ ಹೊರನಡೆಯುವ ಮಾತನ್ನಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, 'ಜೆಡಿಎಸ್ ಶಾಸಕರು, ಎಂಎಲ್ಸಿ ಗಳಿಗೆ ನನ್ನ ಮೇಲೆ ವಿಶ್ವಾಸವಿಲ್ಲವೆಂದರೆ ನಾನು ಅಧಿಕಾರ ಬಿಟ್ಟು ಕೆಳಗೆ ಇಳಿಯುತ್ತೇನೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ ತಾವು ಪಕ್ಷದಲ್ಲಿ ಹಿನ್ನೆಲೆಗೆ ಸರಿಯುವುದಾಗಿ ಹೇಳಿದ್ದಾರೆ.
'ಜೆಡಿಎಸ್ ಶಾಸಕರಿಗೆ ನನ್ನ ಮೇಲೆ ನಂಬಿಕೆ ಇಲ್ಲವೆಂದರೆ, ಅವರನ್ನು ಗೌರವದಿಂದ ನಡೆಸಿಕೊಳ್ಳುವವರನ್ನು ಆರಿಸಿಕೊಳ್ಳಲಿ, ನನ್ನದೇನು ಅಭ್ಯಂತರವಿಲ್ಲ, ನಾನು ಹಿನ್ನೆಲೆಗೆ ಸರಿಯುತ್ತೇನೆ, ಗೂಟ ಹೊಡೆದುಕೊಂಡು ಕೂರುವುದಿಲ್ಲ' ಎಂದು ಹೇಳಿದರು.
'ಇದೇ ವಿಷಯವನ್ನು ದೇವೇಗೌಡ ಅವರ ಬಳಿಯೂ ನಾನು ಹೇಳುತ್ತೇನೆ, 13 ವರ್ಷಗಳಿಂದಲೂ ನಾನು ಇದನ್ನೆಲ್ಲಾ (ರಾಜಕೀಯ) ನೋಡಿದ್ದೇನೆ, ನಾನು ಯಾರನ್ನೂ ಮೆಚ್ಚಿಸಬೇಕಾಗಿಲ್ಲ, ನನ್ನ ಆತ್ಮಕ್ಕೆ ಉತ್ತರ ಕೊಟ್ಟುಕೊಂಡರೆ ಸಾಕು' ಎಂದು ಅವರು ಹೇಳಿದರು.

ಬಸವರಾಜ ಹೊರಟ್ಟಿ ವಿರುದ್ಧ ತೀವ್ರ ಅಸಮಾಧಾನ
ಬಸವರಾಜ ಹೊರಟ್ಟಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, 'ಸಚಿವ ಸ್ಥಾನ ಪಟ್ಟಿಯಲ್ಲಿ ಅವರ ಹೆಸರೇ ಇರಲಿಲ್ಲ, ಹೊರಟ್ಟಿ ಹೆಸರು ಸೇರಿಸಿ ಸಚಿವರಾಗುವಂತೆ ಮಾಡಿದ್ದು ನಾನು, ಈಗ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ' ಎಂದು ಏರಿದ ದನಿಯಲ್ಲಿ ಹೇಳಿದರು.

ಸಾ.ರಾ.ಮಹೇಶ್-ಎಚ್.ವಿಶ್ವನಾಥ್ ಕುರಿತು ಪ್ರತಿಕ್ರಿಯೆ
ಸಾ.ರಾ.ಮಹೇಶ್, ಎಚ್.ವಿಶ್ವನಾಥ್ ಅವರುಗಳ ಆಣೆ ಪ್ರಮಾಣದ ವಿಷಯ ಮಾತನಾಡಿದ ಅವರು, 'ಎಲ್ಲರಿಗೂ ಗೊತ್ತಿರುವ ವಿಷಯಕ್ಕೆ ಆಣೆ ಪ್ರಮಾಣ ಬೇಕಾ?, ದುಡ್ಡು ತೆಗೆದುಕೊಂಡಿರುವ ಯಾವುದೇ ವ್ಯಕ್ತಿ ನಾನು ದುಡ್ಡು ತೆಗೆದುಕೊಂಡಿಲ್ಲ ಎಂದು ಹೇಳುತ್ತಾನೆಯೇ? ವಿಶ್ವನಾಥ್ ಏನು ಆತನ ಮುಖವಾಡ ಏನು ಎಂಬುದು ಎಲ್ಲರಿಗೂ ಗೊತ್ತು' ಎಂದು ಎಚ್ಡಿಕೆ ಹೇಳಿದರು.

ಮಹಾರಾಷ್ಟ್ರ ನಮಗೆ ನೀರು ಕೊಟ್ಟಿರಲಿಲ್ಲ: ಕುಮಾರಸ್ವಾಮಿ
ಮಹಾರಾಷ್ಟ್ರಕ್ಕೆ ನೀರು ಕೊಡುವ ವಿಷಯ ಮಾತನಾಡಿದ ಅವರು, 'ಕಳೆದ ವರ್ಷ ಮಹಾರಾಷ್ಟ್ರದವರು ನಮಗೆ ನೀರು ಕೊಡಲಿಲ್ಲ, ಕಾರ್ಯದರ್ಶಿ, ಸಚಿವರ ನಿಯೋಗ ಎಲ್ಲವೂ ಹೋದರು ಅವರು ನೀರು ಕೊಡಲಿಲ್ಲ, ಹಾಗಿದ್ದ ಮೇಲೆ ನಾವೇಕೆ ನೀರು ಕೊಡಬೇಕು' ಎಂದು ಪ್ರಶ್ನೆ ಮಾಡಿದರು.

ರೈತರನ್ನು ಮೊದಲು ಭೇಟಿಯಾಗಿ: ಕುಮಾರಸ್ವಾಮಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿಚಾರವಾಗಿ ಸಿಎಂ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. 'ಪ್ರತಿಭಟನಾಕಾರರನ್ನು ಭೇಟಿ ಮಾಡುವ ಸೌಜನ್ಯ ಸರ್ಕಾರಕ್ಕೆ ಇಲ್ಲ. ನಾನು ರಾತ್ರಿ ಕೋನರೆಡ್ಡಿಗೆ ಕರೆ ಮಾಡಿ ಅವರಿಗೆ ಸಹಾಯ ಬೇಕಾ ಅಂತ ಕೇಳಿದೆ. ಸಹಾಯ ಮಾಡುವ ನನ್ನಂತವನನ್ನು ಅಲ್ಲಿಯ ಜನ ಸ್ವೀಕರಿಸಲಿಲ್ಲ. ನೀನಾದ್ರೂ ಹೋಗಿ ಸಹಾಯ ಮಾಡಪ್ಪ ಹೇಳಿದೆ. ಚಳಿ ಮಳೆಯಲ್ಲಿ ಕುಳಿತ ಪ್ರತಿಭಟನಾಕಾರರನನ್ನ ಮಾತನಾಡಿಸದೆ ಇರೋದು ಸರ್ಕಾರಕ್ಕೆ ಗೌರವ ತರಲ್ಲ. ಶೀಘ್ರದಲ್ಲೇ ಪ್ರತಿಭಟನಾಕಾರರ ಬೇಡಿಕೆ ಈಡೇರಿಸಲಿ' ಎಂದು ಆಗ್ರಹಿಸಿದರು.












Click it and Unblock the Notifications