ರೆಸಾರ್ಟ್ ನಲ್ಲಿ ಡ್ರಗ್ಸ್ ಪತ್ತೆಯಾದರೆ ಮಾಲೀಕರೇ ಹೊಣೆ: ಮೈಸೂರು ಎಸ್ಪಿ
ಮೈಸೂರು, ಸೆಪ್ಟೆಂಬರ್ 14: ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಕೇರಳ-ಕರ್ನಾಟಕ ಗಡಿಯ ಚೆಕ್ ಪೋಸ್ಟ್ ಗಳಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಹೇಳಿದರು.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾ ಎಲ್ಲೆಡೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ವಿಚಾರವಾಗಿ ಜಿಲ್ಲೆಯ ಎಲ್ಲಾ ರೆಸಾರ್ಟ್ ಗಳಿಗೂ ನೋಟಿಸ್ ನೀಡಲಾಗಿದೆ. ರೆಸಾರ್ಟ್ ಆವರಣದಲ್ಲಿ ಡ್ರಗ್ ಸಿಕ್ಕರೆ ರೆಸಾರ್ಟ್ ಮಾಲೀಕರೇ ನೇರ ಹೊಣೆಯಾಗಲಿದ್ದಾರೆ. ಅಪರಾಧಿಯಷ್ಟೇ ಮಾಲೀಕರು ಸಹ ಹೊಣೆಯಾಗಲಿದ್ದಾರೆ.
ಹೊರ ಜಿಲ್ಲೆಗಳಿಂದ ಇಲ್ಲಿನ ರೆಸಾರ್ಟ್ ಗೆ ಬಂದು ಡ್ರಗ್ಸ್ ಸೇವನೆ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲೀಕರುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ಕಬಿನಿ ಹಾಗೂ ಬೈಲುಕುಪ್ಪೆಯ ರೆಸಾರ್ಟ್ ಗಳ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಡ್ರಗ್ಸ್ ವಿಚಾರವಾಗಿ ವಿಶೇಷ ತಂಡ ರಚನೆಯಾಗಿದೆ. ಆಯಾ ಸರ್ಕಲ್ ಇನ್ ಸ್ಪೆಕ್ಟರ್ ಇದರ ಜವಾಬ್ದಾರಿ ಹೊಂದಿರುತ್ತಾರೆ ಎಂದರು.

ಅಂತರಾಜ್ಯ ಡ್ರಗ್ ಮಾರಾಟ ವಿಚಾರವಾಗಿ ಮಾಹಿತಿ ಇದೆ. ಆದರೆ ಅದನ್ನು ಪ್ರಕರಣ ತನಿಖೆ ಹಂತದಲ್ಲಿರುವ ಕಾರಣ ಹೇಳಲು ಸಾಧ್ಯವಿಲ್ಲ. ಆದರೆ ಆಂಧ್ರದ ನಂಟಿರುವ ಒಂದು ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ತಿಳಿಸಿದರು.












Click it and Unblock the Notifications