ಯೋಧರ ವಿಚಾರದಲ್ಲಿ ರಾಜಕೀಯ ಮಾಡಬಾರದು: ಸಿದ್ದರಾಮಯ್ಯ
Recommended Video

ಮೈಸೂರು, ಮಾರ್ಚ್ 1: ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಸರ್ಕಾರ ಬಿಡುಗಡೆ ಮಾಡಲೇಬೇಕು. ಇಲ್ಲವಾದರೆ ಪರಿಣಾಮ ನೆಟ್ಟಗಿರುತ್ತಿರಲಿಲ್ಲ. ಬಿಡುಗಡೆ ಸ್ವಾಗತಾರ್ಹ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಅಭಿನಂದನ್ ಅವರನ್ನು ಬಿಡುಗಡೆ ಮಾಡದೆ ಇದ್ದಲ್ಲಿ ದುಷ್ಪರಿಣಾಮ ಬೀರುತ್ತಿತ್ತು. ಅದಕ್ಕಾಗಿ ಪಾಕಿಸ್ತಾನದವರು ಬಿಡುಗಡೆ ಮಾಡುತ್ತಿದ್ದಾರೆ. ಅವರ ಬಿಡುಗಡೆಯನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಪಾಕ್ ದಾಳಿ ಹಾಗೂ ವಿಂಗ್ ಕಮಾಂಡರ್ ಘಟನೆಯಿಂದ 22 ಸೀಟು ಗೆಲುತ್ತೇವೆ ಎಂಬ ಯಡಿಯೂರಪ್ಪ ಹೇಳಿಕೆಗೆ ಸಿದ್ದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಯಡಿಯೂರಪ್ಪ ಮಾತನಾಡುವುದನ್ನು ನೋಡಿದರೆ ರಾಜಕೀಯ ಮಾತು ಎಂಬ ಸಂಶಯ ಬರುತ್ತದೆ. ಅವರು ಮುಖ್ಯಮಂತ್ರಿ ಆಗಿದ್ದವರು, ಈ ರೀತಿ ಮಾತನಾಡಬಾರದು ಎಂದು ತಿಳಿಸಿದರು.

ಯಡಿಯೂರಪ್ಪ ಹೇಳಿಕೆಗೆ ಪಾಕಿಸ್ತಾನದವರೂ ಪ್ರತಿಕ್ರಿಯಿಸಿದ್ದಾರೆ. ಆದರೆ ನಾನು ದೇಶದ ಭದ್ರತೆ ದೃಷ್ಟಿಯಿಂದ ರಾಜಕೀಯವಾಗಿ ಮಾತನಾಡುವುದಿಲ್ಲ. ಯೋಧರು ತಮ್ಮ ಪ್ರಾಣವನ್ನು ಪಣಕಿಟ್ಟು ದೇಶ ರಕ್ಷಣೆ ಮಾಡುತ್ತಾರೆ. ದೇಶದ ಜನರ ರಕ್ಷಣೆ ಮುಖ್ಯ ಹಾಗೂ ಯೋಧರ ರಕ್ಷಣೆಯೂ ಮುಖ್ಯ. ಅದಕ್ಕಾಗಿ ನಾನು ಇದರಲ್ಲಿ ರಾಜಕೀಯ ಮಾತನಾಡಲು ಇಷ್ಟ ಪಡುವುದಿಲ್ಲ. ಇಂದಿರಾಗಾಂಧಿ ಪ್ರಧಾನಮಂತ್ರಿ ಆಗಿದ್ದಾಗ ಯುದ್ಧಗಳು ಆಗಿವೆ. 1971 ರಲ್ಲಿ ಪಾಕಿಸ್ತಾನ ನಡುವೆ ಯುದ್ಧ ನಡೆದಿತ್ತು. ಆಗ ಪಾಕಿಸ್ತಾನ ಶರಣಾಯಿತು. ಆದ್ದರಿಂದ ದೇಶದ ವಿಚಾರದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ ಎಂದರು.
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದು ಮನೆಗೆ ಕೈ ನಾಯಕರು ದೌಡಾಯಿಸಿದ್ದಾರೆ. ಸಿದ್ದರಾಮಯ್ಯ ಮನೆ ಮುಂದೆ ಕೈ ಲೋಕಸಭಾ ಟಿಕೆಟ್ ಆಕಾಂಕ್ಷಿಗಳಾದ ಸಿ. ಎಚ್ ವಿಜಯಶಂಕರ್ ಹಾಗೂ ಸೂರಜ್ ಹೆಗಡೆ ಪರೇಡ್ ಮಾಡುತ್ತಿದ್ದಾರೆ. ಸೂರಜ್ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೊಮ್ಮಗ. ಏಕಕಾಲದಲ್ಲಿ ಇಬ್ಬರು ಆಕಾಂಕ್ಷಿಗಳು ಸಿದ್ದರಾಮಯ್ಯನವರ ಮನೆಯಲ್ಲೇ ಪ್ರತ್ಯಕ್ಷರಾಗಿದ್ದು, ಭಾರೀ ಕುತೂಹಲ ಮೂಡಿಸಿದೆ.












Click it and Unblock the Notifications