ಮಾಜಿ ಬಾಸ್ ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಬಹಿರಂಗ ಸವಾಲ್
ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತರೆ ರಾಜಕೀಯವಾಗಿ ಸನ್ಯಾಸ ಸ್ವೀಕರಿಸುತ್ತೇನೆ. ಕಾಂಗ್ರೆಸ್ ಸೋತರೆ ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಅಂತ ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಸವಾಲ್ ಹಾಕಿದ್ದಾರೆ.
ನಂಜನಗೂಡು, ಫೆಬ್ರವರಿ 15: ಸದ್ಯದಲ್ಲೇ ನಡೆಯಲಿರುವ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತರೆ ರಾಜಕೀಯವಾಗಿ ಸನ್ಯಾಸ ಸ್ವೀಕರಿಸುತ್ತೇನೆ. ಕಾಂಗ್ರೆಸ್ ಸೋತರೆ ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಸವಾಲ್ ಹಾಕಿದ್ದಾರೆ.
ಮಂಗಳವಾರ ನಂಜನಗೂಡು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸ್ಪರ್ಧೆ ಇರುವುದು ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ. ಹೀಗಾಗಿ ನಾನು ಸೋತರೆ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಸೋತರೆ ನೀವು ಸಿಎಂ ಹುದ್ದೆಗೆ ರಾಜೀನಾಮೆ ನೀಡುತ್ತೀರಾ? ಎಂದು ಬಹಿರಂಗ ಸವಾಲ್ ಹಾಕಿದರು.[ನಂಜನಗೂಡಲ್ಲಿ ಕಾಂಗ್ರೆಸಿಗೆ ಅಭ್ಯರ್ಥಿಗಳೇ ಇಲ್ವಾ? ಎಚ್.ವಿಶ್ವನಾಥ್ ಪ್ರಶ್ನೆ]
ನಿವೃತ್ತಿ ಬಯಸಿದ್ದೆ
ನಾನು ನಿಜವಾಗಿಯೂ ರಾಜಕೀಯ ನಿವೃತ್ತಿ ಬಯಸಿದ್ದೆ. ಆದರೆ ನನ್ನ ವಿರುದ್ದ ಪಿತೂರಿ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕೆಂಬ ಕಾರ್ಯಕರ್ತರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನಾನು ರಾಜೀನಾಮೆ ನೀಡಿದ ಬಳಿಕ ಸಿದ್ದರಾಯ್ಯರವರನ್ನು ನೇರವಾಗಿ ಟೀಕಿಸಿ, ಹಲವಾರು ಪ್ರಶ್ನೆಗಳನ್ನು ಕೇಳಿದ್ದೇನೆ ಅದಕ್ಕೆ ಅವರು ಉತ್ತರ ನೀಡಿಲ್ಲ. ನನ್ನ ಸ್ವಾಭಿಮಾನ ಮತ್ತು ಆತ್ಮ ಗೌರವವನ್ನು ಪಣಕ್ಕಿಟ್ಟಿದ್ದು, ಸ್ವತಃ ರಾಹುಲ್ ಗಾಂಧಿಯವರೇ ಬಂದು ಪ್ರಚಾರ ನಡೆಸಿದರೂ ಜನರ ಮೇಲೆ ನನಗೆ ವಿಶ್ವಾಸವಿದ್ದು ನನ್ನ ಗೆಲುವು ನಿಶ್ಚಿತ ಎಂದರು.[ನಂಜನಗೂಡು ಉ.ಚು: 'ತೆನೆ' ಬಿಟ್ಟು 'ಕೈ' ಹಿಡಿದ ಕಳಲೆ ಕೇಶವಮೂರ್ತಿ]
ಕಳಲೆಗೆ 25 ಕೋಟಿ?
ಸಂಸದ ಆರ್ ಧ್ರುವನಾರಾಯಣ್ ಅವರು ಪೊಲೀಸ್ ಮಾಹಿತಿದಾರರಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಮುಖ್ಯ ಮಂತ್ರಿಗಳು ಅವರನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸುತ್ತಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಗಂಭೀರ ಆರೋಪ ಮಾಡಿದರು. ಸಿದ್ದರಾಮಯ್ಯ ಕೇಶವ ಮೂರ್ತಿ ಬಳಿ ನಿಮ್ಮ ಸಾಲವನ್ನು ತೀರಿಸಿ ಚುನಾವಣೆಗೆ 25 ಕೋಟಿ ಖರ್ಚು ಮಾಡುತ್ತೇನೆಂದು ಹೇಳಿದ್ದಾರೆ ಅದು ಜನರ ತೆರಿಗೆ ಹಣವೆಂಬುದನ್ನು ಮರೆಯಬೇಡಿ ಎಂದು ಹೊಸದೊಂದು ಬಾಂಬ್ ಸಿಡಿಸಿದರು ಪ್ರಸಾದ್.
ಶವಪೆಟ್ಟಿಗೆಗೆ ಕೊನೆಯ ಮೊಳೆ
ಚುನಾವಣೆ ಬಂದೊಡನೆ ನನ್ನ ಮೇಲಿನ ಹೆದರಿಕೆಯಿಂದಾಗಿ ಕ್ಷೇತ್ರದ ಜನರಿಗೆ 15 ಸಾವಿರ ಸಾಲ ನೀಡುತ್ತಿದ್ದಾರೆ ಮತ್ತು ಎಚ್.ಸಿ.ಮಹದೇವಪ್ಪ ಮತ್ತು ಧ್ರುವನಾರಾಯಣ್ ಹಾರೆ ಪಿಕಾಸಿ ಹಿಡಿದು ಗುದ್ದಲಿ ಪೂಜೆಗೆ ತೆರಳುತ್ತಿದ್ದಾರೆ. ಮುಖ್ಯಮಂತ್ರಿಗಳ ಭ್ರಷ್ಟಾಚಾರ ಹಾವಭಾವ ಮತ್ತು ದುರಾಡಳಿತದ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವಲ್ಲಿ ಸಿದ್ದರಾಮಯ್ಯ ಶವಪೆಟ್ಟಿಗೆಯ ಕೊನೆಯ ಮೊಳೆ ಹೊಡೆಯುತ್ತಿದ್ದಾರೆ. ಅದು ಇಲ್ಲಿನ ಉಪ ಚುನಾವಣೆಯಿಂದಲೇ ಆಗಲಿದೆ ಎಂದರು.
ಕಾಂಗ್ರೆಸ್ ಗೆ ಶನಿ ಕಾಟ
ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ ವಿ.ಶ್ರೀನಿವಾಸ ಪ್ರಸಾದ್ ಅವರ ರಾಜೀನಾಮೆಯಿಂದ ಕಾಂಗ್ರೆಸ್ಗೆ ಶನಿಕಾಟ ಶುರುವಾಗಿದ್ದು ಎಸ್.ಎಂ.ಕೃಷ್ಣರಂತಹ ಹಿರಿಯರನ್ನೇ ಸರಿಯಾಗಿ ನಡೆಸಿಕೊಳ್ಳದೆ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಹೇಳಿದರು.
ಸಾವಿರಾರು ಕೋಟಿ ಅನುದಾನ
ಶ್ರೀನಿವಾಸಪ್ರಸಾದ್ ರಾಜೀನಾಮೆಯ ನಂತರ ಕ್ಷೇತ್ರಕ್ಕೆ ಸಾವಿರ ಕೋಟಿ ಅನುದಾನ ಘೋಷಿಸಿದ್ದಾರೆ ಈ ವೇಳೆಯಲ್ಲಿ ಕಾಂಗ್ರೇಸ್ನ ಶಾಸಕರೆಲ್ಲರೂ ರಾಜೀನಾಮೆ ನೀಡಿದರೆ ಅವರ ಕ್ಷೇತ್ರಕ್ಕೂ ಸಾವಿರಾರು ಕೋಟಿ ಅನುದಾನ ದೊರೆತು ಕ್ಷೇತ್ರ ಉದ್ದಾರವಾಗಲಿದೆ ಎಂದು ವ್ಯಂಗ್ಯವಾಡಿದರು.
ಶಾಸಕರಾದ ಅರಂವಿಂದ ಲಿಂಬಾವಳಿ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಎಸ್. ಮಹದೇವಯ್ಯ ಸೇರಿದಂತೆ ಹಲವು ಮುಖಂಡರು ಮಾತನಾಡಿ ಸಿಎಂ ವಿರುದ್ಧ ಕಿಡಿಕಾರಿದರು.