ಉಪಚುನಾವಣೆ ಗೆದ್ದು ತಕ್ಕ ಉತ್ತರ ನೀಡುತ್ತೇವೆ: ಡಾ.ಜಿ.ಪರಮೇಶ್ವರ್
ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಶ್ರೀನಿವಾಸ್ ಪ್ರಸಾದ್ ಆರೋಪಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮೈಸೂರು, ಮಾರ್ಚ್ 18: ಉತ್ತಮ ಬಜೆಟ್ ಮಂಡನೆ ನಮಗೆ ವರದಾನವಾಗಿದ್ದು ನಂಜನಗೂಡು, ಗುಂಡ್ಲುಪೇಟೆ ಚುನಾವಣೆಯನ್ನು ನಾವು ಗೆದ್ದೇ ಗೆಲ್ಲುತ್ತೇವೆ. ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಶ್ರೀನಿವಾಸ್ ಪ್ರಸಾದ್ ಆರೋಪಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು ಯಾರೆಲ್ಲ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬೇಕೆನ್ನುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು. ನಂಜನಗೂಡಿನ ಅಭ್ಯರ್ಥಿ ಯಾರೆನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಕಾರ್ಯಕರ್ತರೊಂದಿಗೆ ಚರ್ಚಿಸಲಾಗುವುದು. ಹೈಕಮಾಂಡ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಬಳಿಕ ಬಿಫಾರಂ ವಿತರಿಸಲಾಗುವುದು ಎಂದರು.[ನಂಜನಗೂಡು ಉಪಚುನಾವಣೆ: ಕದನ ಕಲಿಗಳಿಗೆ ಪ್ರತಿಷ್ಠೆಯ ಕಣ]

ಸಚಿವ ಡಿ.ಕೆ.ಶಿವಕುಮಾರ್ ಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು ಕೇಂದ್ರ ಸರ್ಕಾರ ಮೊಬೈಲ್ ಟ್ಯಾಪ್ ಮಾಡಿದ್ದರೆ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ನಾವು ತನಿಖೆ ನಡೆಸಲೂ ಆಗುವುದಿಲ್ಲ. ರಾಜ್ಯದ ಯಾವುದೇ ಇಲಾಖೆಯಿಂದಲೂ ಟೆಲಿಪೋನ್ ಕದ್ದಾಲಿಕೆ ಆಗಿಲ್ಲ ಎಂದರು.
ಮಾಜಿ ಸಂಸದ ಎಚ್ ವಿಶ್ವನಾಥ್ ಗೆ ನೀಡಿದ್ದ ನೋಟೀಸ್ ಕುರಿತಂತೆ ಪ್ರತಿಕ್ರಿಯಿಸಿದ ಅವರು ಕೆಪಿಸಿಸಿ ನೀಡಿದ್ದ ನೋಟೀಸ್ ಗೆ ವಿಶ್ವನಾಥ್ ಉತ್ತರ ನೀಡಿದ್ದಾರೆ. ಈ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಪಕ್ಷದಲ್ಲಿ ವಿಶ್ವನಾಥ್ ರನ್ನು ಮೂಲೆಗುಂಪು ಮಾಡಿಲ್ಲ. ಅವರೂ ಸಹ ಪಕ್ಷದ ಪರವಾಗಿ ದುಡಿಯುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಪರ ಅವರು ಪ್ರಚಾರ ನಡೆಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಏಕಿಷ್ಟು ಮಹತ್ವ?!]
ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಕುರಿತು ಪ್ರತಿಕ್ರಿಯಿಸಿದ ಅವರು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ರೌಡಿಗಳ ಅಟ್ಟಹಾಸವನ್ನು ಗೃಹ ಇಲಾಖೆ ಮಟ್ಟ ಹಾಕುತ್ತಿದೆ. ಇದರ ನಡುವೆಯೂ ಕೆಲವು ಘಟನೆಗಳು ಮರುಕಳಿಸುತ್ತಿವೆ. ಇದರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.












Click it and Unblock the Notifications