ಬಿಜೆಪಿಗೆ ಸಿದ್ದರಾಮಯ್ಯಗಿಂತ ಹೆಚ್ಚು ಬೈದಿದ್ದು ನಾನು: ಮೈಸೂರಿನಲ್ಲಿ ಪ್ರಮೋದ್ ಮುತಾಲಿಕ್ ಕಿಡಿ
ಮೈಸೂರು, ನವೆಂಬರ್, 23: ನಾನು ಎಂದೂ ಬಿಜೆಪಿ ಪರವಾಗಿ ಮಾತನಾಡಿಲ್ಲ. ಸಾಫ್ಟ್ ಕಾರ್ನರ್ ತೋರಿಲ್ಲ. ಬಿಜೆಪಿಯನ್ನು ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಬೈದವನು ನಾನು ಎಂದು ಶ್ರಿರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮೈಸೂರಿನಲ್ಲಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಬಿಜೆಪಿಯನ್ನು ಮೊದಲಿನಿಂದಲೂ ಟೀಕಿಸುತ್ತಾ ಬಂದಿದ್ದೇನೆ. ಕೇವಲ ಹಿಂದುತ್ವದ ವಿಚಾರವಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡುತ್ತಿದ್ದೀನಿ. ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾಯಿದೆಯನ್ನು ರೂಪಿಸಬೇಕು. ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗೆ ವಿಶೇಷವಾಗಿ ಮನವಿಯನ್ನು ಮಾಡುತ್ತಿದ್ದೇನೆ. "ರಾಜ್ಯದಲ್ಲಿ ಲವ್ ಜಿಹಾದ್ ದಿನೇ ದಿನೇ ಹೆಚ್ಚುತ್ತಿದೆ. ಲವ್ ಜಿಹಾದ್ ವಿರುದ್ದ ಮೊದಲು ಧ್ವನಿ ಎತ್ತಿದವನೇ ನಾನು. 3 ಸಾವಿರ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ನಿಂದ ನಾವು ಪಾರು ಮಾಡಿದ್ದೇವೆ. ಹಿಂದೂ ಹೆಣ್ಣು ಮಕ್ಕಳು ಪ್ರೀತಿ ಮಾಡಬೇಕಾದರೆ ಅಬ್ದುಲ್ಲಾ-ಅಶೋಕ್ ಎಂಬ ವ್ಯತ್ಯಾಸ ಅರಿತು ಪ್ರೀತಿ ಮಾಡಬೇಕು. ಇಲ್ಲವಾದರೆ ದೆಹಲಿಯಲ್ಲಿ ನಡೆದಂತೆ ಹಿಂದೂ ಹೆಣ್ಣು ಮಕ್ಕಳು ತುಂಡು ತುಂಡಾಗಿ ಬಲಿ ಆಗುತ್ತಾರೆ. ನಿಮ್ಮ ಜೊತೆಗೆ ಹಿಂದೂ ಧರ್ಮವನ್ನೂ ಬಲಿ ಕೊಡಬೇಡಿ. ಲವ್ ಜಿಹಾದ್ ನಿಯಂತ್ರಣ ಆಗಬೇಕಾದರೆ ಪ್ರತ್ಯೇಕ ಕಾನೂನು ರೂಪಿಸಬೇಕು," ಎಂದರು.

ಪ್ರತಾಪ್ ಸಿಂಹ ಹೇಳಿಕೆಗೆ ನನ್ನ ಬೆಂಬಲವಿದೆ
"ಮೈಸೂರಿನಲ್ಲಿ ಉಗ್ರರು ಸ್ವಇಚ್ಚೆಯಿಂದ ಓಡಾಡುವಂತೆ ಆಗಿದೆ. ಉಗ್ರರ ಈ ಬಗೆಯ ಚಟುವಟಿಕೆ ವ್ಯಾಪಕವಾಗುತ್ತಿದೆ. ಮೈಸೂರಿನಲ್ಲಿ ಭಯೋತ್ಪಾದನಾ ನಿಗ್ರಹ ದಳದ ಘಟಕವನ್ನು ಸ್ಥಾಪಿಸಬೇಕು," ಎಂದರು. ಇನ್ನು ಎನ್.ಆರ್ ಕ್ಷೇತ್ರದಲ್ಲಿ ಕೂಂಬಿಂಗ್ ಆಪರೇಷನ್ ಆಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಪ್ರತಾಪ್ ಸಿಂಹ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎಂದು ತಿಳಿಸಿದರು.

ಕುಕ್ಕರ್ ಸ್ಫೋಟದ ಬಗ್ಗೆ ಹೇಳಿದ್ದೇನು?
ಮಂಗಳೂರು ಬಾಂಬ್ ಬ್ಲಾಸ್ಟ್ ಮಾಡಿದ ಶಾರಿಕ್ ಹಿಂದೂ ವೇಷ ಧರಿಸಿದ್ದ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, "ಉಗ್ರಗಾಮಿಗಳು ತಾವು ಮಾಡುವ ಕೃತ್ಯಗಳನ್ನು ಹಿಂದೂಗಳ ಮೇಲೆ ಹಾಕಲು ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ. ಹಿಂದೂಗಳು ಯಾವತ್ತೂ ಭಯೋತ್ಪಾದನಾ ಚಟುವಟಿಕೆ ಮಾಡುವುದಿಲ್ಲ. ಭಾರತದಲ್ಲಿ ಮಾತ್ರ ಅಲ್ಲ, ಇಡೀ ವಿಶ್ವದಲ್ಲೇ ಜಗಜ್ಜಾಹೀರಾಗಿರುವುದು ಇಸ್ಲಾಂ ಭಯೋತ್ಪಾದನೆ ಮಾತ್ರ. ಹಾಗಾಗಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು. ಹಿಂದೂಗಳು ಇರುವ ಪ್ರದೇಶಗಳಲ್ಲಿ ಯಾವ ಗೊಂದಲ, ಸಮಸ್ಯೆಗಳು ಇರುವುದಿಲ್ಲ. ಮುಸ್ಲಿಮರು ಇರುವ ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಅಂತಾರೆ. ಏಕೆಂದರೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅಂದರೆ ಅಲ್ಲಿ ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳಿವೆ ಎಂದರ್ಥ. ಅದೇ ಕಾರಣಕ್ಕೆ ಮುಸ್ಲಿಮರು ಅತೀ ಹೆಚ್ಚಿರುವ ಪ್ರದೇಶನವನ್ನು ಸೂಕ್ಷ್ಮ ಪ್ರದೇಶ ಅಂತಾರೆ," ಎಂದರು.

ಮೊಬೈಲ್ ಟ್ರೈನಿಂಗ್ ಪಡೆದಿದ್ದ ಶಾರಿಕ್
ಮಂಗಳೂರು ಆಟೋ ಸ್ಫೋಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಪೊಲೀಸರ ವಶದಲ್ಲಿರುವ ಶಂಕಿತ ಉಗ್ರ ಶಾರಿಕ್ ಮೈಸೂರಲ್ಲಿ ಮೊಬೈಲ್ ಟ್ರೈನಿಂಗ್ ಪಡೆದಿದ್ದ ಅನ್ನುವ ಅಂಶ ಬೆಳಕಿಗೆ ಬಂದಿತ್ತು. ನಂತರ ಮೈಸೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಈ ನಡುವೆ ಸಂಸದ ಪ್ರತಾಪ್ ಸಿಂಹ ಪ್ರಕರಣದ ಬಗ್ಗೆ ಪ್ರಯಿಕ್ರಿಯೆ ನೀಡಿದ್ದು, ಈ ಹಿಂದೆ ಮೈಸೂರಿನಲ್ಲಿ 2 ದುಷ್ಕೃತ್ಯಗಳು ಆಗಿದ್ದವು. ವಿಜಯನಗರದಲ್ಲಿ ಇಬ್ಬರು ಉಗ್ರರು ಸೆರೆ ಸಿಕ್ಕಿದ್ದರು. ಈ ಹಿಂದೆ ಪಾಕ್ ಮೂಲದ ಫಹಾದ್, ಆಲಿ ಹುಸೇನ್ ಸೆರೆ ಸಿಕ್ಕಿದ್ದರು. ಇನ್ನು ಅಮೆರಿಕದ ಡ್ಬ್ಲ್ಯೂಟಿಓ ಸ್ಫೋಟದ ರೂವಾರಿ ಮೈಸೂರಲ್ಲಿ ವ್ಯಾಸಂಗ ಮಾಡಿದ್ದ. ಹೀಗಾಗಿ ಮೈಸೂರಿನಲ್ಲಿ ಮತ್ತಷ್ಟು ಹದ್ದಿನ ಕಣ್ಣಿಡುವ ಅಗತ್ಯ ಇದೆ ಎಂದು ತಿಳಿಸಿದ್ದರು.

ಕೂಂಬಿಂಗ್ ಆಪರೇಷನ್ಗೆ ಸೂಚನೆ
ಮೈಸೂರಿನ ಎನ್ಆರ್ ಕ್ಷೇತ್ರದ ವ್ಯಾಪ್ತಿಯ ಗೌಸಿಯಾ ನಗರ , ಶಾಂತಿನಗರ, ರಾಜೀವ್ ನಗರ, ಉದಯಗಿರಿ ಸೇರಿದಂತೆ ಅನೇಕ ಕಡೆ ಉಗ್ರರ ಚಟುವಟಿಕೆ ನಡೆಯುತ್ತಿದೆ. ಬಡಾವಣೆಯೊಳಗೆ ಏನು ನಡೆಯುತ್ತಿದೆ ಅನ್ನುವುದು ಗೊತ್ತಿಲ್ಲ. ಈ ಭಾಗದಲ್ಲಿ ದೊಡ್ಡಮಟ್ಟದ ಕೂಂಬಿಂಗ್ ಆಪರೇಷನ್ ಆಗಬೇಕು. ಮೈಸೂರಿನ ಹಿತದೃಷ್ಟಿಯಿಂದ ಪೊಲೀಸರು ಸೂಕ್ತ ಕ್ರಮಗಳನ್ನು ಜರುಗಿಸಬೇಕು ಅಂತಾ ಪ್ರತಾಪ್ ಸಿಂಹ ಹೇಳಿದರು. ಮೈಸೂರಲ್ಲಿ ಮುಸ್ಲಿಮರು ಹೆಚ್ಚು ವಾಸಿಸುವ ಕಡೆ ತ್ವರಿತವಾಗಿ ಆಪರೇಷನ್ ಆಗಬೇಕು. ಒಳಗಡೆ ಏನು ನಡೆಯುತ್ತದೆ ಅನ್ನುವುದನ್ನು ಪತ್ತೆ ಹಚ್ಚಬೇಕು. ಮಂಗಳೂರು ಸ್ಫೋಟ ಪ್ರಕರಣ ಸಂಬಂಧ ಪೊಲೀಸರು ಉತ್ತಮ ರೀತಿ ಕಾರ್ಯ ನಿರ್ವಹಣೆ ಮಾಡಿದ್ದಾರೆ ಎಂದು ಹೊಗಳಿದ್ದರು.
ಮಹಾರಾಜರು ಕಟ್ಟಿದ ಮೈಸೂರು ಶಾಂತಿಯುತವಾಗಿತ್ತು . ಇತ್ತೀಚೆಗೆ ಅಶಾಂತಿ ಸೃಷ್ಟಿಸುವ ಕಾರ್ಯಗಳು ನಡೆಯುತ್ತಿವೆ. ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆ ಅನೇಕ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿ ಆಗಿದ್ದವು. ಇದೀಗ ಬಾಂಬ್ ಬ್ಲಾಸ್ಟ್ ಮಾಡುವ ಮಟ್ಟಕ್ಕೆ ಅವು ಬೆಳೆದು ನಿಂತಿವೆ. ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗಿರುವವರ ಮಟ್ಟ ಹಾಕುವ ಕೆಲಸ ಆಗಬೇಕು. ಈ ಬಗ್ಗೆ ಪೊಲೀಸರು ಮತ್ತಷ್ಟು ಚುರುಕಾಗಿ ತನಿಖೆ ಕೈಗೊಳ್ಳಬೇಕು ಎಂದು ಹೇಳಿದರು. ಪೊಲೀಸರು ಸಾಕ್ಷ್ಯ ಸಂಗ್ರಹಿಸಿ ಕುಕ್ಕರ್ ಆರೋಪಿ ಶಾರಿಕ್ನನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಇನ್ನಷ್ಟು ಆಳವಾಗಿ ಮಾಡಿ ಇದರ ಹಿಂದೆಯಿರುವ ಪ್ರಮುಖ ರುವಾರಿಗಳನ್ನು ಬಂಧಿಸಬೇಕು ಎಂದು ತಿಳಿಸಿದ್ದರು.












Click it and Unblock the Notifications