ನಾನು ಕೂಡ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ:ಮಾಜಿ ಶಾಸಕ ವಾಸು
ಮೈಸೂರು, ಜನವರಿ 30:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ನಾನೂ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು , ಟಿಕೆಟ್ ಸಿಗಬಹುದೆಂದು ಉತ್ಸುಕನಾಗಿದ್ದೇನೆ ಎಂದು ಮಾಜಿ ಶಾಸಕ ವಾಸು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರೂವರೆ ದಶಕಗಳಿಂದ ಪಕ್ಷ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಾಡಿರುವ ಸೇವೆಯ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಅರ್ಜಿ ಆಹ್ವಾನಿಸಿದಾಗ ನಾನು ಕೂಡ ಅರ್ಜಿ ಸಲ್ಲಿಸುತ್ತೇನೆ ಎಂದರು.
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮತ್ತು ತಳ ಅಭ್ಯರ್ಥಿಯಾಗಿ ನಾನು ಆಕಾಂಕ್ಷಿಯಾಗಿದ್ದು, ನಾನು ಸ್ಪರ್ಧೆ ಮಾಡುವ ಬಯಕೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದರೆ ನಾನು ಹತ್ತು ಹೆಜ್ಜೆ ಹಿಂದೆ ಇಡುತ್ತೇನೆ. ಹಿರಿಯ ನಾಯಕರು ಸ್ಪರ್ಧಿಸಿದರೆ ನಾವು ಪ್ರಚಾರ ಮಾಡುತ್ತೇವೆ. ಇಲ್ಲದಿದ್ದರೆ ನಮಗೆ ಆದ್ಯತೆ ಕೊಡಲಿ ಎಂದು ತಿಳಿಸಿದರು.

ನಾನು ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತಿರಬಹುದು. ಆದರೆ ನಾನು ಶಾಸಕನಾಗಿದ್ದಾಗ ಐದು ವರ್ಷ ಮಾಡಿರುವ ಕಾರ್ಯ ಐದಾರು ಜಿಲ್ಲೆಗಳಿಗೆ ಸಂಬಂಧಪಟ್ಟಿದ್ದು. ಮೈಸೂರು - ಕೊಡಗು ಕ್ಷೇತ್ರದಲ್ಲಿ ನಾನು ಸೇವೆ ಸಲ್ಲಿಸಿದ್ದೇನೆ. ಪ್ರಬಲ ಆಕಾಂಕ್ಷಿಯಂತೂ ಹೌದು. ಆದರೆ ಅದು ಪಕ್ಷದ ಅಂತಿಮ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದರು.
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಿಂದ ಲಿಂಗಾಯಿತರಿಗೆ ಟಿಕೆಟ್ ನೀಡಬೇಕೆಂಬ ಮನವಿ ಇದೆ. ಕೊಡಗಿನ ಚಂದ್ರಮೌಳಿ ಕೂಡ ಆಕಾಂಕ್ಷಿಯಾಗಿದ್ದಾರೆ, ಒಕ್ಕಲಿಗ ಕೋಟಾದಲ್ಲಿ ಟಿಕೆಟ್ ಕೇಳದಿದ್ದರೂ, ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ ಟಿಕೆಟ್ ಕೇಳುತ್ತಿದ್ದೇನೆ ಎಂದು ಹೇಳಿದರು.












Click it and Unblock the Notifications