ಮೈಸೂರಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ ಜೋರು
ಮೈಸೂರು, ಜನವರಿ 14: ಸುಗ್ಗಿ ಹಬ್ಬ ಎಂದೇ ಜನಜನಿತವಾಗಿರುವ ಮಕರ ಸಂಕ್ರಾಂತಿ ಆಚರಣೆಗೆ ನಾಡಿನ ಜನತೆ ಸಜ್ಜಾಗಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಯಲ್ಲಿ ಕಬ್ಬು, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಹೂ, ಹಣ್ಣು ಖರೀದಿ ಭರಾಟೆ ಜೋರಾಗಿದೆ.
ಮನೆ ಮನೆಗಳಲ್ಲಿ ಆಚರಿಸುವ ಹಬ್ಬದ ಸಂಭ್ರಮಕ್ಕೆ ಕಳೆದ ಕೆಲವು ದಿನಗಳಿಂದ ಎಳ್ಳು ಮಿಶ್ರಣಕ್ಕೆ ಪದಾರ್ಥಗಳನ್ನು ಕೊಳ್ಳುವ ಕಾರ್ಯ ನಡೆದಿದ್ದು, ಶನಿವಾರ ಮತ್ತು ಭಾನುವಾರ ಇದರ ಭರಾಟೆ ಹೆಚ್ಚಾಗಿತ್ತು. ದೇವರಾಜ ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ದರ ಸ್ವಲ್ಪ ಹೆಚ್ಚಾಗಿದೆ. ಹೂ, ಹಣ್ಣು ಮಾರುಕಟ್ಟೆಗೆ ಹೆಚ್ಚಾಗಿ ಬಂದಿದೆ. ಕಬ್ಬಂತೂ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಗರದಲ್ಲಿ ಕಾಣಿಸಿಕೊಂಡಿದೆ.
ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಗರದ ದೇವರಾಜ ಮಾರುಕಟ್ಟೆ, ಗಡಿಯಾರದ ವೃತ್ತ, ವಾಣಿವಿಲಾಸ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ನಗರದ ವಿವಿಧ ವೃತ್ತಗಳು, ಪ್ರಮುಖ ವಾಣಿಜ್ಯ ಕೇಂದ್ರಗಳು, ಬಡಾವಣೆಗಳ ಪ್ರಮುಖ ಸ್ಥಳಗಳಲ್ಲಿ ಕಬ್ಬು ಜಲ್ಲೆ, ಹೂ, ಹಣ್ಣುಗಳ ಮಾರಾಟ ಭರದಿಂದ ಸಾಗಿದೆ. ಅಂಗಡಿಗಳಲ್ಲಿ ಸಿದ್ಧಪಡಿಸಿದ ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳ ಖರೀದಿಯೂ ಜೋರಾಗಿದೆ.

ರಸ್ತೆ ಬದಿಗಳಲ್ಲಿ ವ್ಯಾಪಾರ ಜೋರು
ಕಳೆದ ವರ್ಷಕ್ಕೆ ಹೋಲಿಸಿದರೆ ವಿವಿಧ ಬಗೆಯ ತರಕಾರಿಗಳು, ಹಣ್ಣುಗಳು, ದವಸ ಧಾನ್ಯಗಳು ಹೆಚ್ಚಾಗಿ ಮಾರುಕಟ್ಟೆಗೆ ಆವಕವಾಗಿವೆ. ತಮಿಳುನಾಡಿನಿಂದ ಕರಿಕಬ್ಬು ಯಥೇಚ್ಛವಾಗಿ ನಗರಕ್ಕೆ ಬಂದಿದ್ದು, ವಿವಿಧ ದರಗಳಲ್ಲಿ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಇಂತಹ ಕಬ್ಬು ಒಂದು ಜಲ್ಲೆಗೆ 40ರವರೆಗೂ ಇದೆ. ಸಾಮಾನ್ಯ ಕಬ್ಬು 20ರಿಂದ 30 ರೂ ವವರೆಗೆ ಮಾರಾಟವಾಗುತ್ತಿದೆ.

ಬೆಲ್ಲ ಸೇರಿಸಿದ ಎಳ್ಳು ಕೆ.ಜಿಗೆ 140 ರೂ.
ಕತ್ತರಿಸಿದ ಬೆಲ್ಲ, ಕಡಲೆ, ಜೀರಿಗೆ ಕೆ.ಜಿಗೆ 120 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಬೆಲ್ಲ ಸೇರಿಸಿದ ಎಳ್ಳು ಕೆ.ಜಿಗೆ 140 ರೂ. ಆಜುಬಾಜಿನಲ್ಲಿದೆ. ಮಲ್ಲಿಗೆ ಹೂ ಮೀಟರ್ವೊಂದಕ್ಕೆ 60 ರೂ.ಗೆ ಸಿಗುತ್ತಿದೆ.

ತರಕಾರಿಗಳ ಬೆಲೆಯಲ್ಲಿ ಹೆಚ್ಚಳ
ಸಾಮಾನ್ಯವಾಗಿ ಸಂಕ್ರಾಂತಿಗೆ ಎಲ್ಲ ತರಕಾರಿಗಳನ್ನು ಹಾಕಿ ಸಾಂಬಾರ್ ಮಾಡುವುದು ವಾಡಿಕೆ. ಇದರಿಂದ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಕುಂಬಳಕಾಯಿ, ಅವರೆಕಾಯಿ, ಸೋರೆಕಾಯಿ, ಬದನೆ, ಟೊಮೆಟೊ, ಕ್ಯಾರೇಟ್, ಬೀನ್ಸ್, ಹಸಿಮೆಣಸಿನಕಾಯಿ ಹೀಗೆ ಬಹುತೇಕ ತರಕಾರಿಗಳ ಬೆಲೆಗಳು ಸಗಟು ಮಾರುಕಟ್ಟೆಯಲ್ಲಿ ಏರಿಕೆ ಕಾಣದಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ತುಸು ಏರಿಕೆ ಕಂಡಿವೆ.

ನಾಲ್ಕು ದಿನಗಳ ಹಬ್ಬವಿದು
ಇತ್ತ ನಗರದಲ್ಲಿರುವ ತಮಿಳರ ಮನೆಗಳಲ್ಲಿ ಸಂಕ್ರಾಂತಿಗೆ ಎರಡು ದಿನವಿರುವಾಗಲೇ ಹಬ್ಬದ ಕಳೆ ಬರುತ್ತದೆ. ಯಾಕೆಂದರೆ ಅವರಿಗೆ ನಾಲ್ಕು ದಿನಗಳ ಹಬ್ಬವಿದು. ವರ್ಷದುದ್ದಕ್ಕೂ ಬರುವ ಹಬ್ಬಗಳನ್ನು ಸಂಕ್ರಾಂತಿಯ ಜೊತೆಗೆ ಸಡಗರದಿಂದ ಆಚರಿಸುವುದು ಅವರ ವಿಶೇಷ. ಮೊದಲ ದಿನ ಬೋಗಿ ಹಬ್ಬ. ಮನೆಯಲ್ಲಿರುವ ಹಳೆಯ ಚಾಪೆ, ಪೊರಕೆ ಮತ್ತಿತರ ಹಳೆಯ ವಸ್ತುಗಳನ್ನು ಹೊರಹಾಕಿ ಸುಡಲಾಗುತ್ತದೆ. ಮಾಂಸಾಹಾರಿಗಳ ಮನೆಯಲ್ಲಿ ಅಂದು ಕರಿಮೀನಿನ ಸಾರು ಕಡ್ಡಾಯ. 'ಹಳೆಯ ಚಾಪೆ, ಪೊರಕೆ ಸುಡುವುದೆಂದರೆ ಇಡೀ ವರ್ಷ ನಾವು ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವುದರ ಸಂಕೇತ. ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂಬ ಪ್ರತಿಜ್ಞೆಯೊಂದಿಗೆ ಸುಟ್ಟುಬಿಡುತ್ತೇವೆ' ಎನ್ನುತ್ತಾರೆ ವಿಜಯನಗರದ ನಿವಾಸಿ ವಸುಧಾ.












Click it and Unblock the Notifications