ಬಿಸಿಲ ಬೇಗೆಗೆ ಮೈಸೂರಿನಲ್ಲೀಗ ರಾಗಿ ಅಂಬಲಿ ಟ್ರೆಂಡ್
ಮೈಸೂರು, ಮಾರ್ಚ್ 15 : ಈ ಬಾರಿ ಬೇಸಿಗೆ ಅವಧಿಗಿಂತ ಮುಂಚಿತವಾಗಿ ಬಂದಿದ್ದು, ಮೈಸೂರಿಗರನ್ನು ಹೈರಾಣಾಗಿಸಿದೆ. ಬಿಸಿಲ ಬೇಗೆಗೆ ನಗರದ ಜನ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಆದರೆ ಈ ಬಾರಿ ಎಲ್ಲೆಡೆ ಟ್ರೆಂಡ್ ಆಗುತ್ತಿರುವುದು ಮಾತ್ರನೀರು ಮಜ್ಜಿಗೆ, ರಾಗಿ ಗಂಜಿ, ಎಳನೀರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ರಸ್ತೆ ಬದಿಯಲ್ಲಿ ಕಲರ್ ಕಲರ್ ಕೊಡಗಳು ಕಾಣಿಸುತ್ತವೆ. ನೋಡ ನೋಡುತ್ತಿದ್ದಂತೆ ರಸ್ತೆಯ ಮೇಲೆ ಭರ್ರನೆ ಸಾಗುತ್ತಿರುವ ವಾಹನಗಳು ಈ ಗಾಡಿಗಳ ಬಳಿ ಒಂದು ಕ್ಷಣ ನಿಂತು ನಗೆ ಬೀರುತ್ತವೆ. ಜನರು ಇಳಿದು, ತಣ್ಣಗೆ ಒಂದು ಲೋಟ ಮಜ್ಜಿಗೆ, ರಾಗಿ ಅಂಬಲಿ ಕುಡಿದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ನಿಟ್ಟುಸಿರು
ಸಾಫ್ಟ್ ಡ್ರಿಂಕ್ಸ್ ಗಳನ್ನು ಕುಡಿಯೋಕ್ಕಿಂತ ಆರೋಗ್ಯಕ್ಕೆ ಒಳ್ಳೆಯದಾದ ರಾಗಿ ಗಂಜಿ, ಮಜ್ಜಿಗೆ ಕಾಂಬಿನೇಷನ್ ಸಾವಿರ ಪಾಲು ಉತ್ತಮ. ಕೇವಲ 10-15 ರುಪಾಯಿಗಳಿಗೆ ಒಂದು ದೊಡ್ಡ ಲೋಟ ರಾಗಿ ಗಂಜಿ ದೊರೆಯುತ್ತಿದ್ದು, ಬಿಸಿಲ ಬೇಗೆಯನ್ನು ನಿವಾರಿಸುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.
ಬಿಸಿಲ ಬೇಗೆಗೆ ಜನರು ಹಣ್ಣಿನ ರಸ, ಐಸ್ ಕ್ರೀಂ, ಎಳನೀರು, ಕಲ್ಲಂಗಡಿ ಜತೆಗೆ ನೀರಿನಾಂಶ ಹೆಚ್ಚಿರುವ ಸೌತೆಕಾಯಿ, ದ್ರಾಕ್ಷಿಯ ಮೊರೆ ಹೋಗಿದ್ದಾರೆ.

ಪಕ್ಕದ ಜಿಲ್ಲೆ, ರಾಜ್ಯಗಳಿಂದಲೂ ಹಣ್ಣು- ಎಳನೀರು ಮೈಸೂರಿಗೆ
ನಗರದ ಪ್ರಮುಖ ವೃತ್ತಗಳಲ್ಲಿ , ರಸ್ತೆಗಳಲ್ಲಿ ದಿಢೀರನೆ ಒಂದಷ್ಟು ಹಣ್ಣಿನ ರಸದ ಅಂಗಡಿಗಳು ತಲೆ ಎತ್ತಿವೆ. ಕೇವಲ 10 ರುಪಾಯಿಗೆ ಸಿಗುವ ತಾಜಾ ಹಣ್ಣಿನ ರಸಕ್ಕೆ ಜನ ಮುಗಿಬೀಳುತ್ತಿದ್ದಾರೆ. ಬೇಡಿಕೆಗೆ ಅನುಸಾರವಾಗಿ ಮಾರುಕಟ್ಟೆಯಲ್ಲಿ ವಹಿವಾಟು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಭರ್ಜರಿ ಮಾರಾಟವಾಗುತ್ತಿದೆ. ಕೇಜಿ ಕಲ್ಲಂಗಡಿಗೆ 20-25 ರು., ಕರಬೂಜಕ್ಕೆ 20 ರು. ಬೆಲೆ ಇದೆ. ಎಳನೀರು 25ರಿಂದ 30 ರುಪಾಯಿಗೆ ಮಾರಾಟವಾಗುತ್ತಿದೆ. ಸುತ್ತಮುತ್ತಲ ಜಿಲ್ಲೆಗಳಾದ ಮಂಡ್ಯ, ಚಾಮರಾಜನಗರ, ಪಕ್ಕದ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಎಳನೀರು ಮತ್ತು ಕಲ್ಲಂಗಡಿ ಲಾರಿಗಟ್ಟಲೆ ಬರುತ್ತಿವೆ.

ಬಡವರ ಫ್ರಿಜ್ ನ ವ್ಯಾಪಾರ ಬಲು ಜೋರು
ದಾಹ ತಣಿಸಲು ಜನರು ತಂಪು ಪಾನೀಯ ಮತ್ತು ಹಣ್ಣುಗಳ ಮೊರೆ ಹೋಗುತ್ತಿದ್ದರೆ, ಇನ್ನೊಂದೆಡೆ ಧಗೆಯ ನಡುವೆಯೂ ನೀರನ್ನು ತಣ್ಣಗೆ ಇಡುವ 'ಬಡವರ ಫ್ರಿಜ್' (ಮಣ್ಣಿನ ಮಡಿಕೆ)ಗಳ ವ್ಯಾಪಾರ ಗರಿಗೆದರುತ್ತಿದೆ. ಸದ್ಯ ನಗರದ ಪಾದಚಾರಿ ಮಾರ್ಗ ಮತ್ತು ಹೆದ್ದಾರಿ ಇಕ್ಕೆಲಗಳಲ್ಲಿ ಮಡಿಕೆ ಮಾರಾಟ ಮಾಡುತ್ತಿರುವ ದೃಶ್ಯಗಳು ಕಾಣಸಿಗುತ್ತವೆ. ಬೇಸಿಗೆಯಲ್ಲಿ ಮುಖ್ಯ ವ್ಯಾಪಾರಗಳಲ್ಲಿ ಇದು ಒಂದಾಗಿದೆ. ಮಾರ್ಚ್ ಆರಂಭದಲ್ಲೇ ನೆತ್ತಿ ಸುಡುವ ಬಿಸಿಲಿರುವ ಕಾರಣ ಈ ಬಾರಿ ಮಡಿಕೆ ವ್ಯಾಪಾರಿಗಳು ಒಳ್ಳೆಯ ವಹಿವಾಟಿನ ನಿರೀಕ್ಷೆಯಲ್ಲಿದ್ದಾರೆ.

ಗಗನಕ್ಕೇರಿದ ಎಳನೀರಿನ ಬೆಲೆ
ಇನ್ನು ಜನ ಸಾಮಾನ್ಯರ ಜೇಬಿಗೆ ಕತ್ತರಿ ಎನ್ನುವಂತೆ ದಾಹ ತೀರಿಸಲು ಎಳನೀರಿನ ಕುಡಿಯಲು ಹೋದರೆ ನಾಲಿಗೆ ಸುಡುವಂತಾಗಿದೆ. ಹೌದು , ಕೇವಲ 15 ರುಪಾಯಿಗೆ ಸಿಗುತ್ತಿದ್ದ ಎಳನೀರು ಈಗ ಶುರುವಿನ ಮೊತ್ತವೇ 25 ರುಪಾಯಿ. ಸಾಮಾನ್ಯವಾಗಿ ಮಧ್ಯವರ್ತಿಗಳು ಬೆಲೆ ಹೆಚ್ಚಿಸುವುದರಿಂದ ಇಷ್ಟು ಸಮಯ ಎಳನೀರಿನ ಬೆಲೆ ವರ್ಷಕ್ಕೆ ಒಮ್ಮೆ ಹೆಚ್ಚಳ ಆಗುತ್ತಿತ್ತು. ಆದರೆ ತೀವ್ರ ಬರ, ತೆಂಗು ಬೆಳೆ ನಷ್ಟ, ಪೂರೈಕೆಯಲ್ಲಿ ಕೊರತೆ ಆಗಿರುವುದರಿಂದ ಈ ವರ್ಷ ಎರಡು ತಿಂಗಳಲ್ಲಿ ಎರಡನೇ ಸಾರಿ ಬೆಲೆ ಹೆಚ್ಚಳ ಆಗಿದೆ. ಈಗ ಎಳನೀರು ಕೊರತೆ ಎದುರಾಗಿದ್ದು, ಮಾರಾಟ ಬೆಲೆಯಲ್ಲಿ 5 ರುಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಅದನ್ನು ಖರೀದಿ ಮಾಡಿ, ಬೆಂಗಳೂರು ನಗರದಲ್ಲಿ ವ್ಯಾಪಾರ ಮಾಡುವವರು ಬೆಲೆ ಹೆಚ್ಚಿಸಿದ್ದಾರೆ.

ಝೂನಲ್ಲಿರುವ ಪ್ರಾಣಿಗಳಿಗೂ ಬೇಸಿಗೆಯ ಬೇಗೆ
ಇನ್ನು ಯುವಕರು, ಮಧ್ಯವಯಸ್ಕರರು ಹತ್ತಿರದ ತೋಟ- ಜಮೀನುಗಳಲ್ಲಿ ಬಾವಿಯಲ್ಲಿ ನೀರಿರುವ ಕಡೆ ಹೋಗುತ್ತಿದ್ದಾರೆ. ಅಲ್ಲಿ ಗುಂಪಾಗಿ ತೆರಳಿ ಈಜಾಡಿ ವಾಪಸಾಗುತ್ತಿದ್ದಾರೆ. ಇದರ ಜತೆಗೆ ಬೆವರಿನಿಂದ ಆಗುವ ಚರ್ಮದ ಸಮಸ್ಯೆಗಳಿಂದ ಬಚಾವಾಗಲು ಪೌಡರ್ ಗಳಿಗೂ ಸಹ ಹಾಗೇ ಬೇಡಿಕೆ ಹೆಚ್ಚಿದೆ. ಈಗ ಚಿಂತೆಗೆ ಕಾರಣವಾಗಿರುವುದು ಇಲ್ಲಿನ ಝೂನಲ್ಲಿರುವ ಪ್ರಾಣಿಗಳ ಬಗ್ಗೆ. ಬೇಸಿಗೆ ತಾಪ ಅವುಗಳಿಗೂ ತಟ್ಟುತ್ತಿದೆ.












Click it and Unblock the Notifications