ತಿಮಿಂಗಿಲ ಯಾರು ಎನ್ನುವುದು ಗೃಹಸಚಿವರಿಗೆ ಗೊತ್ತು: ಎಚ್ಡಿ ಕುಮಾರಸ್ವಾಮಿ
ತಿಮಿಂಗಿಲ ಯಾರು ಎನ್ನುವುದು ಪರಮೇಶ್ವರ್ಗೂ ಚೆನ್ನಾಗಿ ಗೊತ್ತಿದೆ. ಆ ತಿಮಿಂಗಿಲನ್ನು ಹಿಡಿಯುವುದು ಬಿಟ್ಟು ನನ್ನನ್ನು ಕೇಳಿದರೆ ಹೇಗೆ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ಡ್ರೈವ್ ಪ್ರಕರಣದ ಎಸ್ಐಟಿ ತನಿಖೆಯ ದಾರಿಯನ್ನು ನೋಡಿದರೆ ಕಾಣದ ಕೈ ಗೃಹ ಇಲಾಖೆಯನ್ನು ನಿಯಂತ್ರಿಸುವುದು ತಿಳಿಯುತ್ತದೆ. ಎಸ್ಐಟಿ ಅಧಿಕಾರಿಗಳು ಅನವಶ್ಯಕವಾಗಿ ಕೆಲವರನ್ನು ಬಂಧಿಸಿದ್ದಲ್ಲದೆ, ದಾಳಿ ಮಾಡಿದ್ದಾರೆ. ವಕೀಲ ದೇವರಾಜೇಗೌಡರ ವಿರುದ್ಧ ಪ್ರಕರಣ ದಾಖಲಾಗಿ ಒಂದು ತಿಂಗಳ ನಂತರ ಬಂಧಿಸಿದ್ದು ಯಾಕೆ? ಎಂದು ಪ್ರಶ್ನೆ ಮಾಡಿದರು.

ಎಸ್ಐಟಿಯವರಿಗೆ ದೇವರಾಜೇಗೌಡರಿಂದ ಏನು ಮಾಹಿತಿ ಬೇಕಿದೆ? ಪ್ರಜ್ವಲ್ ರೇವಣ್ಣ ವಿಡಿಯೊ ವೈರಲ್ ಮಾಹಿತಿನಾ? ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿನಾ? ಅಥವಾ ಪ್ರಕರಣದ ಆಡಿಯೊ ತುಣುಕು ಬಿಡುಗಡೆಯಾಗಿತ್ತಲ್ಲಾ? ಅದರ ಉಳಿದಿರುವ ತುಣುಕುಗಳು ಎಲ್ಲಿವೆ ಎನ್ನುವ ಮಾಹಿತಿಯಾ?, ಎಂದು ಕೇಳಿದರು.
ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಗೊತ್ತಿಲ್ಲ
ಸಂಸದ ಪ್ರಜ್ವಲ್ ರೇವಣ್ಣ ಮೊದಲು ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ಸಂಸದನಾದ ಮೇಲೂ ನಮ್ಮ ಸಂಪರ್ಕದಲ್ಲಿ ಇಲ್ಲದೆ ಇದ್ದಾಗ ಈಗ ಸಿಗುತ್ತಾರಾ? ಈ ಪ್ರಕರಣ ಆಗುವ ಹಿಂದೆಯೂ ನನ್ನ ಜತೆ ಇರಲಿಲ್ಲ. ವಿದೇಶಕ್ಕೆ ಹೋದ ಮೇಲೆ ಹೇಗೆ ನನ್ನ ಸಂಪರ್ಕದಲ್ಲಿ ಇರುತ್ತಾರೆ? ಎಂದು ಕೇಳಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಇದುವರೆಗೂ ಅವರು ಕುಟುಂಬಸ್ಥರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಲ್ಲದೇ ರಾಜ್ಯ ಸರಕಾರವೇ ಬ್ಲೂ ಕಾರ್ನರ್ ನೊಟೀಸ್ ನೀಡಿದೆ. ಎಸ್ಐಟಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲ್ಲ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ ಎಂದರು.
ಟಿಕೆಟ್ ಹಂಚಿಕೆ ಗೊಂದಲ
ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಅವರು, ಕೆ.ಟಿ.ಶ್ರೀಕಂಠೇಗೌಡರು ಜೆಡಿಎಸ್ ಕಟ್ಟಾಳು, ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಅವರ ಅಪ್ಪಟ ಶಿಷ್ಯ. ಅನುಮಾನ ಪಡುವ ಅಗತ್ಯವಿಲ್ಲ. ಸಣ್ಣ ವ್ಯತ್ಯಾಸದಿಂದ ಡಾ.ಈ.ಸಿ.ನಿಂಗರಾಜೇ ಗೌಡರಿಗೆ ಟಿಕೆಟ್ ಘೋಷಣೆ ಆಗಿತ್ತು. ಈಗ ವಿವೇಕಾನಂದ ಪರ ಎಲ್ಲರೂ ಕೆಲಸ ಮಾಡುತ್ತಾರೆ. ಶ್ರೀಕಂಠೇಗೌಡರೇ ಚುನಾವಣೆ ಜವಾಬ್ದಾರಿ ತೆಗೆದುಕೊಂಡು ವಿವೇಕಾನಂದರನ್ನು ಗೆಲ್ಲಿಸುತ್ತಾರೆ ಎಂದರು.












Click it and Unblock the Notifications