ನರೇಂದ್ರ ಮೋದಿ ಮೈಸೂರು ಭಾಷಣದಲ್ಲಿನ ಕನ್ನಡ, ಪುಟ್ಟಣ್ಣಯ್ಯ, ಕಾಂಗ್ರೆಸ್
Recommended Video

ಮೈಸೂರಿನ ನನ್ನ ಪ್ರೀತಿಯ ಬಂಧು- ಭಗಿನಿಯರೇ ನಿಮಗೆಲ್ಲ ನನ್ನ ನಮಸ್ಕಾರಗಳು. ಚಾಮುಂಡೇಶ್ವರಿ ಮಾತೆಗೆ ನನ್ನ ಪ್ರಣಾಮಗಳು, ಮೈಸೂರಿನ ಸರ್ ಎಂ.ವಿಶ್ವೇಶ್ವರಯ್ಯ, ರಾಷ್ಟ್ರಕವಿ ಕುವೆಂಪು, ಸುತ್ತೂರಿನ ಸ್ವಾಮಿಗಳು, ಬಾಲಗಂಗಾಧರನಾಥ ಸ್ವಾಮಿಗಳಿಗೆ ವಂದನೆಗಳು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಸೂರಿನಲ್ಲಿ ಸೋಮವಾರ ಬಿಜೆಪಿ ಸಮಾವೇಶದಲ್ಲಿ ತಮ್ಮ ಭಾಷಣ ಆರಂಭಿಸಿದರು.
ಮೈಸೂರು ರೇಷ್ಮೆ, ಶ್ರೀಗಂಧ, ಮೈಸೂರು ದಸರಾ, ಮೈಸೂರು ಮಲ್ಲಿಗೆ, ಮೈಸೂರು ಪಾಕ್ ಎಲ್ಲವೂ ಜಗತ್ಪ್ರಸಿದ್ಧ ಎಂದು ಸ್ಥಳೀಯ ಉತ್ಪನ್ನಗಳ ಹೆಚ್ಚುಗಾರಿಕೆಯನ್ನು ಕೊಂಡಾಡಿದ ಅವರು, ಆ ನಂತರ ವೇದಿಕೆ ಮೇಲಿದ್ದ ಪ್ರಮುಖ ನಾಯಕರ ಒಬ್ಬೊಬ್ಬರ ಹೆಸರನ್ನು ಹೇಳಿದರು. ಆ ವೇಳೆ ಸಮಾವೇಶಕ್ಕೆ ಬಂದಿದ್ದವರಿಂದ ಬಹಳ ಮೆಚ್ಚುಗೆ ವ್ಯಕ್ತವಾಯಿತು.
ಇನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಮತ್ತೆ ಕಮಿಷನ್ ಆರೋಪ ಮಾಡಿದ ಅವರು, ಲಘು ದಾಟಿಯಲ್ಲಿ ಮತ್ತೆ ತಿವಿದರು. ಬೆಂಗಳೂರಿನಲ್ಲಿ ರಾಜ್ಯ ಸರಕಾರದ ವಿರುದ್ಧ ಹತ್ತು ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಕ್ಕೆ ಅನೇಕರು ಕರೆ ಮಾಡಿ, ಸಂದೇಶ ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರಕಾರಕ್ಕೆ ಸಿಗ್ತಾ ಇರೋದು ಹತ್ತು ಪರ್ಸೆಂಟ್ ಅಲ್ಲ. ಅದಕ್ಕಿಂತ ಹೆಚ್ಚಿದೆ ಎಂದರು ಎಂಬುದಾಗಿ ಹಾಸ್ಯ ಮಾಡಿದರು.
ಚಿತ್ರಗಳು : ಸಿದ್ದರಾಮಯ್ಯ ತವರಲ್ಲಿ ಮೋದಿ ಮೋಡಿ
ಮೈಸೂರಿನಲ್ಲಿ ನರೇಂದ್ರ ಮೋದಿ ಭಾಷಣದ ಮುಖ್ಯ ಹೇಳಿಕೆಗಳು ಇಲ್ಲಿವೆ.

ರೈಲ್ವೆ ಯೋಜನೆಗಳು ಬಲಿಷ್ಠವಾಗಬೇಕು
ಮೈಸೂರು- ಜೈಪುರ್ ಮಧ್ಯೆ ಹಮ್ ಸಫರ್ ರೈಲನ್ನು ಉದ್ಘಾಟನೆ ಮಾಡಿದ್ದೇವೆ. ನಮ್ಮ ದೇಶದ ಬಡವರಿಗೆ ಅನುಕೂಲ ಮಾಡಬೇಕು ಅಂದರೆ ರೈಲ್ವೆ ಯೋಜನೆಗಳು ಹೆಚ್ಚು ಬಲಿಷ್ಠವಾಗಿ ಆಗಬೇಕು. ಹೊಸ ರೈಲುಗಳು ಸಂಚರಿಸಬೇಕು. ಹೊಸ ಮಾರ್ಗಗಳ ಆರಂಭವಾಗಬೇಕು.

ಸಾವಿರದೈನೂರು ಯೋಜನೆಗಳು ಸಂಸತ್ ನಲ್ಲಿ ಘೋಷಣೆ ಆಗಿದ್ದವು
ಇಷ್ಟೊಂದು ಮಾಧ್ಯಮಗಳಿರಲಿಲ್ಲ, ಎನ್ ಜಿಒ ಇರಲಿಲ್ಲ. ಅವರನ್ನು ಕೇಳುವವರೇ ಇರಲಿಲ್ಲ. ಸಂಸತ್ ನಲ್ಲಿ ಬಜೆಟ್ ಯೋಜನೆಯ ಘೋಷಣೆಗಳು ಆಗುತ್ತಿದ್ದವು. ಬರೀ ಮಾತಿನಲ್ಲೇ ಆಗುತ್ತಿದ್ದವು. ಸಾವಿರದೈನೂರು ಯೋಜನೆಗಳು ಸಂಸತ್ ನಲ್ಲಿ ಘೋಷಣೆ ಆಗಿದ್ದವು. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಆರು ಪಥದ ರಸ್ತೆಗೆ 6400 ಕೋಟಿ
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಆರು ಪಥದ ರಸ್ತೆಯಾಗಿ ವಿಸ್ತರಣೆ ಮಾಡಲಾಗುವುದು. 117 ಕಿಲೋಮೀಟರ್ ರಸ್ತೆ 6400 ಕೋಟಿ ಖರ್ಚಿನಲ್ಲಿ ವಿಸ್ತರಣೆ ಮಾಡಲಾಗುವುದು. ಎರಡು ಹಂತದಲ್ಲಿ ಯೋಜನೆ ಜಾರಿ ಮಾಡಲಾಗುವುದು. ಮೊದಲ ಹಂತ ಬೆಂಗಳೂರಿನಿಂದ ನಿಡಘಟ್ಟ ಹಾಗೂ ನಿಡಘಟ್ಟದಿಂದ ಮೈಸೂರಿಗೆ ರಸ್ತೆ ವಿಸ್ತರಣೆ ಮಾಡಲಾಗುವುದು. ಮೈಸೂರಿಗೆ ವಿಶ್ವದರ್ಜೆಯ ರೈಲು ನಿಲ್ದಾಣ ರೂಪುಗೊಳಿಸುತ್ತೀವಿ. ಹೊಸ ರೈಲುಗಳು ಸಂಚಾರ ಕೂಡ ಆರಂಭಿಸಲಾಗುವುದು.

ಕೆ.ಎಸ್.ಪುಟ್ಟಣ್ಣಯ್ಯ ಶ್ರದ್ಧಾಂಜಲಿ
ಕೆ.ಎಸ್.ಪುಟ್ಟಣ್ಣಯ್ಯ ಅವರು ತಮ್ಮ ಜೀವನವನ್ನು ರೈತರಿಗೆ ಮೀಸಲಿಟ್ಟಿದ್ದರು. ಅವರ ಸಾವಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅವರ ಕೆಲಸಗಳು ಎಲ್ಲರಿಗೂ ಪ್ರೇರಣೆ ಆಗುತ್ತದೆ. ಅವರಿಂದ ಸ್ಫೂರ್ತಿಗೊಂಡವರು ಉತ್ತಮ ಕೆಲಸವನ್ನು ಮುಂದುವರಿಸುತ್ತಾರೆ.

ದಿಲ್ಲಿಯಲ್ಲಿರುವವರನ್ನು ಚೆನ್ನಾಗಿ ನೋಡಿಕೊಳ್ಳಬೇಕು
ಮೈಸೂರಿನಲ್ಲಿ ಹುಟ್ಟಿದ ವ್ಯಕ್ತಿ ತಪ್ಪಾದ ದಾರಿಯಲ್ಲಿ ಹೋಗಬಾರದಿತ್ತು. ಪ್ರತಿ ದಿನ ಒಂದಲ್ಲ ಹಗರಣ, ಭ್ರಷ್ಟಾಚಾರ ಕರ್ನಾಟಕ ರಾಜ್ಯ ಸರಕಾರದ ವಿರುದ್ಧ ಕೇಳಿಬರುತ್ತಲೇ ಇದೆ. ಕೇಂದ್ರ ಸರಕಾರ ನೀಡುವ ಅನುದಾನದ ಹಣ ಇಲ್ಲಿನ ಸರಕಾರ ಸರಿಯಾದ ಬಳಕೆ ಮಾಡುತ್ತಿಲ್ಲ. ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ದಿಲ್ಲಿಯಲ್ಲಿ ಇರುವ ತಮ್ಮ ಪಕ್ಷದವರನ್ನು ಚೆನ್ನಾಗಿ ಇರಿಸಿಕೊಳ್ಳುವ ಅಗತ್ಯವಿದೆ. ಒಂದು ಸರಕಾರ ಹೀಗೆ ನಡೆಯಬಾರದು.












Click it and Unblock the Notifications