Mysuru Rain: ಮೈಸೂರಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಧರೆಗುರುಳಿದ ಮರಗಳು
ಜಿಲ್ಲೆಯ ಹಲವೆಡೆ ಶುಕ್ರವಾರ ಸಿಡಿಲು ಮತ್ತು ಬಿರುಗಾಳಿ ಸಹಿತ ಜೋರು ಮಳೆಯಾಗಿದೆ. ನಗರದ ಕೆಲವೆಡೆ ಆಲಿಕಲ್ಲು ಕೂಡ ಬಿದ್ದಿವೆ. ಭಾರಿ ಮಳೆಗೆ ನಾನಾ ಕಡೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದು, ಆಸ್ತಿ ಪಾಸ್ತಿಗೆ ನಷ್ಟವಾಗಿದೆ. ಹಲವು ಮನೆಗಳ ಚಾವಣಿಗೆ ಅಳವಡಿಸಿದ್ದ ಕಬ್ಬಿಣದ ಶೀಟ್ಗಳು ತೂರಿ ಹೋಗಿವೆ.
ಮೈಸೂರಿನಲ್ಲಿ ಸಂಜೆ 5 ಗಂಟೆ ಸುಮಾರಿಗೆ ಮಳೆ ಆರಂಭವಾಯಿತು. 20 ನಿಮಿಷಗಳವರೆಗೂ ಧಾರಾಕಾರ ಮಳೆ ಸುರಿಯಿತು. ಸಂಜೆ ವೇಳೆಯಾಗಿದ್ದರಿಂದ ಕೆಲಸ ಮುಗಿಸಿ ಮನೆಗೆ ತೆರಳುವವರು ಪರದಾಡುವಂತಾಯಿತು. ಒಳಚರಂಡಿ ನೀರು ರಸ್ತೆ ಮೇಲೆ ಉಕ್ಕಿ ಹರಿಯಿತು. ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಹಲವು ದಿನಗಳ ಬಿರು ಬಿಸಿಲಿಗೆ ಕಾದ ಬಾಣಲೆಯಂತಾಗಿದ್ದ ಭೂಮಿಗೆ ಶುಕ್ರವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಮಳೆ ತಂಪೆರೆಯಿತು. ದೊಡ್ಡ ಪ್ರಮಾಣದ ಗಾಳಿ ಬೀಸಿದ್ದರಿಂದ ನಗರದಾದ್ಯಂತ ಸುಮಾರು 50 ರಿಂದ 60 ಕಡೆಗಳಲ್ಲಿ ಮರಗಳ ರಂಬೆಕೊಂಬೆಗಳು ಮುರಿದುಬಿದ್ದಿವೆ. ಮಾತ್ರವಲ್ಲದೇ ಕೆಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ಅವಾಂತರ ಸೃಷ್ಟಿಯಾಯಿತು.
ಒಂದೇ ಮಳೆಗೆ ತಂಪಾದ ಮೈಸೂರು
ಇಷ್ಟು ದಿನ ಮೈಸೂರಿನಲ್ಲಿ 38 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ ಶುಕ್ರವಾರ ಸಂಜೆ ಬಿದ್ದ ಮಳೆಯಿಂದಾಗಿ ಸಂಜೆ ವೇಳೆ ನಗರದ ತಾಪಮಾನ 25 ಡಿಗ್ರಿಗೆ ಇಳಿಕೆಯಾಯಿತು. ನಿತ್ಯವೂ ಬಿಸಿಲಿನ ಶಾಖವನ್ನು ಅನುಭವಿಸುತ್ತಿದ್ದ ಜನತೆ ಮೊದಲ ದೊಡ್ಡ ಮಳೆಯನ್ನು ಕಂಡು ನಿಟ್ಟುಸಿರು ಬಿಟ್ಟರು.
ಮುಖ್ಯವಾಗಿ ವಿಶ್ವಮಾನವ ಜೋಡಿ ರಸ್ತೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ಶ್ರೀರಾಂಪುರ, ಗ್ರಾಮಾಂತರ ಬಸ್ ನಿಲ್ದಾಣ, ಹಾಡಿಂಗ್ ವೃತ್ತ, ಜೆಸಿ ಕಾಲೇಜು ಬಳಿ, ಸುಭಾಷ್ ನಗರ, ಉದಯಗಿರಿಯಲ್ಲಿ ಬಿರುಗಾಳಿಯಿಂದ ಮರಗಳ ರಂಬೆ ಕೊಂಬೆ ಮುರಿದು ಬಿದ್ದು ದೊಡ್ಡ ಪ್ರಮಾಣದಲ್ಲಿ ಸಂಚಾರಕ್ಕೆ ತೊಂದರೆಯಾಯಿತು.
ಮರಳಗಳ ರಂಬೆ ಕೊಂಬೆಗಳು ರಸ್ತೆಯ ಮೇಲೆ ಬಿದ್ದಿರುವುದರಿಂದ ಸಂಚಾರಕ್ಕೆ ಧಕ್ಕೆಯಾಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಈ ಕುರಿತು ಪಾಲಿಕೆ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದರು. ಪಾಲಿಕೆ ಅಭಯ ತಂಡದವರು ಮೂರು ಪ್ರತ್ಯೇಕ ಗುಂಪಿನಲ್ಲಿ ಬಂದು ಮರಗಳನ್ನು ತೆರವುಗೊಳಿಸಿದ್ದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಯಿತು.












Click it and Unblock the Notifications