ಒಕ್ಕಲಿಗರಿಗೆ 500 ಕೋಟಿಯಲ್ಲ, 5 ರೂಪಾಯಿ ಕೂಡ ಸಿಗಲ್ಲ: ಎಚ್ಡಿಕೆ ವ್ಯಂಗ್ಯ
ಮೈಸೂರು, ಮಾರ್ಚ್ 11: ಒಕ್ಕಲಿಗರ ನಿಗಮಕ್ಕೆ 500 ಕೋಟಿ ರೂಪಾಯಿಯಲ್ಲ, 5 ರೂಪಾಯಿಯೂ ಸಿಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ನಲ್ಲಿ ಹೈಕಮಾಂಡ್ ಅನ್ನುವ ಸಂಸ್ಕೃತಿಯೇ ಇಲ್ಲ ಎಂದು ಹೇಳಿದ ಅವರು, ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ ಕೇವಲ ಘೋಷಣೆ ಮಾತ್ರ. ಅದು ಬಿಡುಗಡೆಗೆ ಅದೆಷ್ಟು ವರ್ಷ ಬೇಕೋ ಗೊತ್ತಿಲ್ಲ ಎಂದು ಎಂದು ತಿಳಿಸಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಮಧು ಬಂಗಾರಪ್ಪ ಹೇಳಿದ್ದೇನು?
ಇಂತಹ ಅವಧಿಯಲ್ಲಿ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿಲ್ಲ, ಬಜೆಟ್ನಲ್ಲಿ 500 ಕೋಟಿ ರೂ ಹಣವನ್ನು ಹಂಚಿಕೆ ಮಾಡಿಲ್ಲ., ಕೇವಲ ಪುಸ್ತಕದಲ್ಲಿ ಬರೆದಿದ್ದಾರಷ್ಟೇ ಎಂದು ಹೇಳಿದರು.
ಇನ್ನು ಮಧುಬಂಗಾರಪ್ಪ ಕಾಂಗ್ರೆಸ್ಗೆ ಸೇರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಜೆಡಿಎಸ್ ಪಕ್ಷದ ಬಾಗಿಲು ತೆರೆದಿದೆ. ಯಾರು ಬೇಕಾದರೂ ಹೋಗಬಹುದು, ಯಾರು ಬೇಕಾದರೂ ಬರಬಹುದು. ಪಕ್ಷದಿಂದ ಪ್ರಯೋಜನ ಪಡೆದು ಸಾಕಷ್ಟು ಜನ ಚೂರಿ ಹಾಕುತ್ತಾರೆ. ಅವರಿಗೆ ಜನರೇ ಉತ್ತರ ಕೊಡುತ್ತಾರೆ ಎಂದರು.
ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಮಾತನಾಡಿ, ಮಾಜಿ ಸಿಡಿ ಪ್ರಕರಣವನ್ನು ಎಸ್ಐಟಿಗೆ ನೀಡಿರುವುದು ತನಿಖೆಗೆ ತಿಪ್ಪೆ ಸಾರಿಸಲು, ಇದು ಕೂಡ ನಕಲಿ ಸಿಡಿ ಎನ್ನುವ ವರದಿ ಬರುತ್ತದೆ ಎಂದು ಹೇಳಿದರು.