ಕಾಂಗ್ರೆಸ್ ನಾಯಕರು ಅ.11ರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ: ಕುಮಾರಸ್ವಾಮಿ
ಮೈಸೂರು, ಅಕ್ಟೋಬರ್. 10 : ಇದೇ ಅಕ್ಟೋಬರ್ 17 ಹಾಗೂ 18 ಕೊಡಗಿನಲ್ಲಿ ವಾಸ್ತವ್ಯ ಹೂಡಲಿದ್ದು, ಅಲ್ಲಿನ ನೆರೆ ಸಂತ್ರಸ್ತರ ಕಷ್ಟಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಕ್ಟೋಬರ್ 17ರಂದು ದೊಡ್ಡ ಮಟ್ಟದ ಸಭೆ ಕರೆದು ಜನರಿಂದ ಮಾಹಿತಿ ಪಡೆದು, ಕೊಡಗಿನ ಅಭಿವೃದ್ಧಿಗೆ ಪಣ ತೊಡುತ್ತೇನೆ.
ಕೇರಳದಲ್ಲಿ ಆಗಿರುವ ಮಳೆಯ ಅವಾಂತರದ ವಿಡಿಯೋವನ್ನು, ಅದೇ ಕೊಡಗಿನ ಅವಾಂತರವೆಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಬಾರದು. ಕೊಡಗಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರವಾಸಿಗರನ್ನು ಸೆಳೆಯೋಣ ಎಂದರು.

ಸಂತ್ರಸ್ತರು ಕೊಡಗು ಪ್ರವಾಹದ ನಂತರ ಮರುಜೀವ ಜೀವನ ಕಟ್ಟಿಕೊಳ್ಳಲು ಪ್ರಯತ್ನಪಡುತ್ತಿದ್ದು, ಅದರಂತೆ ಅ. 18ರಂದು ಎಂದಿನಂತೆ ದಸರಾ ಆಚರಣೆ ಮಾಡುತ್ತಿದ್ದಾರೆ. ಅವರೊಂದಿಗೆ ನಾನಿರುತ್ತೇನೆ. ರಾಜ್ಯದ 30 ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಹೊಣೆ ಸರ್ಕಾರದ್ದು. 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದು ಸುಲಭ ಅಲ್ಲ.
ಆ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಆದರೆ ಅಭಿವೃದ್ಧಿ ಮಾಡಲು ಸಮಯ ಬೇಕು.
ಇನ್ನು ಪ್ರತಾಪ್ ಸಿಂಹ ಟಿಪ್ಪು ಜಯಂತಿ ಕೈ ಬಿಡಿ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ಇಂತಹ ಕಾಂಟ್ರವರ್ಸಿ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅಚ್ಚುಕಟ್ಟಾಗಿ ದಸರಾ ಮಾಡುವುದಷ್ಟೇ ನಮ್ಮ ಕೆಲಸ ಎಂದರು.

ದಸರಾ ಮಹೋತ್ಸವದಲ್ಲಿ ಕಾಂಗ್ರೆಸ್ ನಾಯಕರ ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಜಯಮಾಲಾ ಯಾವ ಪಕ್ಷದವರು ಎಂಬ ಮರು ಪ್ರಶ್ನೆ ಹಾಕಿದರು. ಇವತ್ತಿನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ಕೆಲ ನಾಯಕರು ಬಂದಿಲ್ಲ. ಆದರೆ ನಾಳಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಕಾಂಗ್ರೆಸ್ ನವರಿಗೆ ಯಾವುದೇ ಮನಸ್ತಾಪ ಇಲ್ಲ ಎಂದರು.












Click it and Unblock the Notifications