ಜನರಿಗೆ ವಿಧಾನಸೌಧಕ್ಕೆ ಮುಕ್ತ ಪ್ರವೇಶ : ಕುಮಾರಸ್ವಾಮಿ
ಮೈಸೂರು, ಜನವರಿ 08 : 'ನಾನು ಆಡಳಿತದ ವಿಚಾರದಲ್ಲಿ ಯಾರಿಗೂ ಮಣೆ ಹಾಕುವುದಿಲ್ಲ. ನಾನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾದರೆ, ರಾಜ್ಯದ ಆರುವರೆ ಕೋಟಿ ಜನ ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯ ಕೊಠಡಿಗೆ ಯಾವುದೇ ಅನುಮತಿ ಪಡೆಯದೆ ಬರಬಹುದು' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸೋಮವಾರ ಮೈಸೂರಿನ ಕಲಾ ಮಂದಿರದಲ್ಲಿ ಸೋಮವಾರ 'ಬಲ್ಲವರೊಡನೆ ಬೌದ್ಧಿಕ ಚಿಂತನೆ' ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೌಲ್ಯಯುತ ರಾಜಕಾರಣ ಮಾಡಿ : 'ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತುಂಬಿದೆ ಆಡಳಿತದಲ್ಲಿ ಉತ್ತಮರಿಗೆ ಅವಕಾಶ ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿಯೂ ಫುಡ್ ಪಾರ್ಕ್ ನಿರ್ಮಾಣವಾಗಬೇಕು. ನಿಮ್ಮ ಪಕ್ಷದಲ್ಲಿ ಹಣವಂತರಿಗೆ ಅವಕಾಶ ನೀಡದೆ, ಗುಣವಂತರಿಗೆ ಅವಕಾಶ ನೀಡಿ' ಎಂದು ಕಾರ್ಯಕ್ರಮವದಲ್ಲಿ ಸಲಹೆ ನೀಡಿದರು.

ಕುಮಾರಸ್ವಾಮಿ ಮಾತನಾಡಿ, 'ರಾಜಕೀಯ ವ್ಯವಸ್ಥೆ ಬದಲಾವಣೆ ಹಿನ್ನೆಲೆಯಲ್ಲಿ ಚಿಂತನೆ ಏರ್ಪಡಿಸಲಾಗಿದೆ. ರಾಜ್ಯದಲ್ಲಿನ ಬೆಳವಣಿಗೆಗಳಲ್ಲಿ ನಾನು ಮುಖ್ಯಮಂತ್ರಿಯಾದೆ. ಐದು ಕೋಟಿ ಜನರ ಆಶೀರ್ವಾದ ಸಿಕ್ಕಿರಲಿಲ್ಲ. ಅನುಭವ ಇಲ್ಲದಿದ್ದರೂ ನಾಡಿನ ಸಮಸ್ಯೆ ಹೇಳಿಕೊಳ್ಳಲು ಬಂದ ಜನರಿಂದ ರಾಜಕೀಯ ಅನುಭವ ಪಡೆದೆ'. ಎಂದರು.
'ಜನರಲ್ಲಿ ಒಂದು ನಂಬಿಕೆ ಇದೆ. ಕುಮಾರಸ್ವಾಮಿಗೆ ಅವಕಾಶ ನೀಡಬೇಕು ಎಂದು ಬಯಸಿದ್ದಾರೆ. ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಹಿರಿಯ ಅನುಭವಿಗಳನ್ನು ವಿಧಾನಸೌಧಕ್ಕೆ ಕರೆಸಿಕೊಂಡು ಮಾರ್ಗದರ್ಶನ ಪಡೆಯುತ್ತೇನೆ. ಅನುಭವ ಇರುವ ಕೃಷಿಕರನ್ನು ವಿಧಾನಸೌಧಕ್ಕೆ ತಿಂಗಳಿಗೊಮ್ಮೆ ಆಹ್ವಾನಿಸಿ ಮಾರ್ಗದರ್ಶನ ಪಡೆಯುತ್ತೇನೆ' ಎಂದು ಹೇಳಿದರು.

'ನಾನು ಯಾವುದೇ ರಾಜಕೀಯ ಪಕ್ಷಗಳ ಒತ್ತಡಗಳಿಗೆ ಒಳಗಾಗುವುದಿಲ್ಲ. ನಾನು ನಿರ್ಣಯ ತೆಗೆದುಕೊಳ್ಳುವ ವೇಳೆ ಕಠಿಣ ನಿರ್ಧಾರ ಕೈಗೊಳ್ಳುತ್ತೇನೆ. ಕುಟುಂಬ ರಾಜಕಾರಣ ಸಂಬಂಧಿಗಳಿಗೆ ಮಣೆ ಹಾಕುವುದಿಲ್ಲ' ಎಂದರು.
ನನಗೆ ಮರು ಜನ್ಮ : 'ಹೃದಯ ಶಸ್ತ್ರ ಚಿಕಿತ್ಸೆ ಮೂಲಕ ನನಗೆ ಈಗ ಮರು ಜನ್ಮ ಸಿಕ್ಕಿದೆ. ಹಣ ಮಾಡಬೇಕು, ಸಂಪಾದನೆ ಮಾಡಬೇಕು ಯಾವ ಕೆಟ್ಟ ಉದ್ದೇಶವು ನನಗಿಲ್ಲ. ನಾನು ಬದುಕಿರುವಷ್ಟು ದಿನ ರಾಜ್ಯದ ಒಳಿತಿಗಾಗಿ, ಜನರ ಶ್ರೇಯಸ್ಸಿಗಾಗಿ ದುಡಿಯಬೇಕು ಎಂಬುದೇ ತುಡಿತ' ಎಂದು ಕುಮಾರಸ್ವಾಮಿ ಹೇಳಿದರು.
'ಸಮಾಜದ ವಿವಿಧ ವರ್ಗದ ಜನರ ಜತೆ ಸಂವಾದ ನಡೆಸುತ್ತಿದ್ದೇನೆ. ಆ ಮೂಲಕ ಅವರು ನೀಡುವ ಸಲಹೆ, ಸೂಚನೆಗಳ ಸಹಾಯದಿಂದ ನಮ್ಮ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಿ ಅದರಂತೆಯೇ ಆಡಳಿತ ನಡೆಸುವುದು ಉದ್ದೇಶ' ಎಂದು ತಿಳಿಸಿದರು.
'ನಾನು ಮುಖ್ಯಮಂತ್ರಿಯಾದಲ್ಲಿ ಯಾವುದೇ ಐಎಎಸ್, ರಾಜಕಾರಣಿಗಳ ಸಲಹೆಯಂತೆ ಆಡಳಿತ ನಡೆಸುವುದಿಲ್ಲ. ಯಾವುದೇ ಮುಲಾಜಿಗೂ ಒಳಗಾಗುವುದಿಲ್ಲ. ಈ ರಾಜ್ಯದ ಜನರ ಅಣತಿಯಂತೆ, ಸಲಹೆ, ಸೂಚನೆಯಂತೆ ಆಡಳಿತ ನಡೆಸುವೆ' ಎಂದು ಭರವಸೆ ನೀಡಿದರು.












Click it and Unblock the Notifications