ಸಿಎಂ ಸಿದ್ದು ತವರಲ್ಲಿ ಕಣ್ಣೀರು ಹಾಕಿದ ದೇವೇಗೌಡರು!
ಮೈಸೂರು, ಫೆ.9 : ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರ ಮೈಸೂರಿನಲ್ಲಿ ಭಾನುವಾರ ಜೆಡಿಎಸ್ ಹಿಂದುಳಿದ ವರ್ಗಗಳ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದೆ. ಸಮಾವೇಶ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹಿಂದಿನ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಪಕ್ಷ ಬಿಟ್ಟರೂ ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿ ಕುಗ್ಗಿಲ್ಲ ಎಂಬುದನ್ನು ಸಾರಲು ಜೆಡಿಎಸ್ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ಏರ್ಪಡಿಸಿತ್ತು. ಸಮಾವೇಶದ ಉಸ್ತುವಾರಿಯನ್ನು ಖುದ್ದು ಎಚ್.ಡಿ.ದೇವೇಗೌಡ ವಹಿಸಿಕೊಂಡಿದ್ದರು. [ಜೆಡಿಎಸ್ ಸಮಾವೇಶದ ಚಿತ್ರಗಳು]

ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ, ಶಾಸಕರಾದ ಜಿ.ಟಿ.ದೇವೇಗೌಡ, ಚಿಕ್ಕಮಾದು, ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಸಂದೇಶ ನಾಗರಾಜ್ ಮುಂತಾದ ನಾಯಕರು ಭಾಗವಹಿಸಿದ್ದರು. [ಫೆ.12ರಂದು ದೇವೇಗೌಡರ ಪ್ರತಿಮೆ ಅನಾವರಣ]
ಸಮಾವೇಶ ಉದ್ದೇಶಿಸಿ ಮಾತನಾಡಿದ ಎಚ್.ಡಿ.ದೇವೇಗೌಡ ತಮ್ಮ ಹಳೆಯ ದಿನಗಳನ್ನು ನೆನೆದು ಕಣ್ಣೀರಿಟ್ಟರು. ತಾವು ಜೈಲಿಗೆ ಹೋದ ಸಮಯದಲ್ಲಿ ಕುಟುಂಬ ಸಂಕಷ್ಟದಲ್ಲಿತ್ತು. ಆಗ ರೇವಣ್ಣ ತಾಯಿಯನ್ನು ಚೆನ್ನಾಗಿ ನೋಡಿಕೊಂಡರು ಎಂದು ಗೌಡರು ಗಳಗಳನೆ ಕಣ್ಣೀರು ಹಾಕಿದರು. ತಮ್ಮ ಪತ್ನಿಗೆ ಅನಾರೋಗ್ಯ ಸಮಸ್ಯೆ ಇತ್ತು. ಅದನ್ನು ಕಡೆಗಣಿಸಿ ನಾವು ಹೋರಾಟದಲ್ಲಿ ತೊಡಗಿಕೊಂಡೆವು. ಆಗ ನಾವು ಜೈಲು ಸೇರುವಂತಾಯಿತು.
ಆದರೆ, ರೇವಣ್ಣ ಅವರು ತಾಯಿಯನ್ನು ಚೆನ್ನಾಗಿ ನೋಡಿಕೊಂಡರು ಎಂದು ಹೇಳುವ ಮೂಲಕ ದೇವೇಗೌಡರು ಕರ್ನಾಟಕ ರಾಜ್ಯಕ್ಕೆ ತಮ್ಮ ಕೊಡುಗೆ ಏನೆಂದು ನೆನಪು ಮಾಡಿಕೊಟ್ಟರು. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಗೌಡರು ಮನವಿ ಮಾಡಿದರು.
ರಾಷ್ಟ್ರೀಯ ಪಕ್ಷಗಳಿಂದ ಜನರಿಗೆ ಅನ್ಯಾಯ : ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಎರಡು ರಾಷ್ಟ್ರೀಯ ಪಕ್ಷಗಳಿಂದ ದೇಶದ ಜನರಿಗೆ ಅನ್ಯಾಯವಾಗಿದೆ. ರಾಷ್ಟ್ರೀಯ ಪಕ್ಷಗಳು ಜನರ ಭವಿಷ್ಯವನ್ನು ಕೊಲ್ಲುತ್ತಿವೆ ಎಂದು ಗೌಡರು ವಾಗ್ದಾಳಿ ನಡೆಸಿದರು. ಸಿಎಂ ಸಿದ್ದರಾಮಯ್ಯ ಆಡಳಿತದ ಬಗ್ಗೆ ಕಿಡಿಕಾರಿದ ಗೌಡರು, ರಾಜ್ಯದಲ್ಲಿ ಜನರಿಗೆ ಕುಡಿಯಲು ಸರಿಯಾದ ನೀರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications