ಅರಗ ಜ್ಞಾನೇಂದ್ರ ಬೇಜವಾಬ್ದಾರಿ ಹೇಳಿಕೆ ಖಂಡಿಸಿದ ಡಾ.ಮಹದೇವಪ್ಪ
ಮೈಸೂರು, ಆಗಸ್ಟ್ 27: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಅರಗ ಜ್ಞಾನೇಂದ್ರ ಅವರ ಬೇಜವಾಬ್ದಾರಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
"ಗೃಹ ಇಲಾಖೆ ಎಂದರೆ ಒಂದು ರಾಜ್ಯದಲ್ಲಿ ವಾಸಿಸುತ್ತಿರುವವರ, ಹಕ್ಕು, ಮಾನ, ಪ್ರಾಣ,ಆಸ್ಥಿ-ಪಾಸ್ತಿಯ ರಕ್ಷಣೆ, ಸಮಾನತೆ ಮತ್ತು ಸೌಹಾರ್ದತೆಯನ್ನು ಕಾಪಾಡುವ ಕರ್ತವ್ಯವನ್ನು ಹೊಂದಿರುತ್ತದೆ"ಎಂದು ಮಹದೇವಪ್ಪ ಅಭಿಪ್ರಾಯ ಪಟ್ಟಿದ್ದಾರೆ.
"ಇದಕ್ಕೆ ಪೂರಕವಾಗಿಯೇ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿರುವ ಸಂದರ್ಭದಲ್ಲಿ ಚಾಮುಂಡಿ ಸಂಚಾರಿ ಸುರಕ್ಷತಾ ಪಡೆಗಳನ್ನು ನಿಯೋಜಿಸುವ ಮೂಲಕ ಸಮರ್ಪಕ ಸುರಕ್ಷತಾ ವಾತಾವರಣವನ್ನು ನಿರ್ಮಿಸುವ ಪ್ರಯತ್ನವನ್ನು ಮಾಡಿತ್ತು. ಇದು ರಾಜ್ಯದಲ್ಲಿ ರಕ್ಷಣಾ ವ್ಯವಸ್ಥೆಯ ದೃಷ್ಟಿಯಿಂದ ಮಾಡಿದ ಮೊದಲ ವಿನೂತನವಾದ ಪ್ರಯತ್ನವಾಗಿದ್ದು ಇದನ್ನು ಮೊದಲ ಬಾರಿಗೆ ಮೈಸೂರಿನಲ್ಲಿ ಪರಿಚಯಿಸಲಾಗಿತ್ತು" ಎಂದು ಮಹದೇವಪ್ಪ ಹೇಳಿದರು.

"ಆದರೆ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವರ ಹೇಳಿಕೆಯನ್ನು ಗಮನಿಸಿದರೆ ಇವರಿಗೆ ಜನ ಸಾಮಾನ್ಯರನ್ನು ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಯಾವುದೇ ಉದ್ದೇಶ ಇದ್ದಂತೆ ಕಾಣುತ್ತಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರ ವರ್ತನೆಗಳು ಸಂವಿಧಾನಾತ್ಮಕವಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ"ಎಂದು ಡಾ. ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದರು.
"ಇನ್ನು ಇಂತಹ ಅತ್ಯಾಚಾರ ಘಟನೆಗಳು ಸಾರ್ವಜನಿಕ ವ್ಯಕ್ತಿಗಳು ಮತ್ತು ಸಾರ್ವಜನಿಕವಾಗಿ ಬದ್ಧತೆ ಇರುವ ಯಾವುದೇ ವ್ಯಕ್ತಿಗಳು ಕೂಡಾ ತಲೆ ತಗ್ಗಿಸುವ ಸಂಗತಿಯಾಗಿದೆ. ಹೆಣ್ಣು ಮಕ್ಕಳು ಮಧ್ಯರಾತ್ರಿಯ ವೇಳೆ ನಿರ್ಭಿಡೆಯಿಂದ ಓಡಾಡಿದಾಗ ಮಾತ್ರವೇ ಸ್ವಾತಂತ್ರ್ಯದ ಆಶಯಗಳಿಗೆ ಹೆಚ್ಚು ಅರ್ಥ ಬರುತ್ತದೆ ಎಂಬ ಗಾಂಧೀಜಿಯವರ ಮಾತುಗಳನ್ನು ಮತ್ತೊಮ್ಮೆ ನೆನಪಿಸುತ್ತಾ ಆದಷ್ಟು ಬೇಗನೇ ಸರ್ಕಾರ ಅತ್ಯಾಚಾರಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿ ಎಂದು ಆಗ್ರಹಿಸುತ್ತೇನೆ"ಎಂದು ಡಾ.ಮಹದೇವಪ್ಪ ಹೇಳಿದರು.
ಯುವತಿ ಮತ್ತು ಯುವಕ ಆ ಸಮಯದಲ್ಲಿ ಅಲ್ಲಗೆ ಹೋಗಿದ್ದೇ ತಪ್ಪು, ಯುವತಿ ಸಂಜೆ 7.30 ಕ್ಕೆ ಅಲ್ಲಿಗೆ ಹೋಗಬಾರದಿತ್ತು ಎನ್ನುವ ಬೇಜವಾಬ್ದಾರಿಯುತವಾದ ಹೇಳಿಕೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದರು.
"ಘಟನೆ ನಡೆದು 24 ಗಂಟೆಯೊಳಗೆ ಎಫ್ಐಆರ್ ದಾಖಲಾಗಿದೆ. ವಿದ್ಯಾರ್ಥಿನಿ ಮೂಲತಃ ಮಹಾರಾಷ್ಟ್ರದವರು ಎನ್ನುವ ಮಾಹಿತಿ ಲಭ್ಯವಾಗಿದೆ ಎಂದರು.ಅತ್ಯಾಚಾರ ಆಗಿರುವುದು ಮೈಸೂರಿನಲ್ಲಿ. ಆದರೆ ಈ ಕಾಂಗ್ರೆಸ್ಸಿನವರು ನನ್ನನ್ನು ರೇಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಗೃಹ ಸಚಿವರು ಹೇಳಿದ್ದರು.












Click it and Unblock the Notifications