ಎಲ್ಲಾ ಮರೆತು ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಜಿಟಿಡಿ ಪುತ್ರ
ಮೈಸೂರು, ಏಪ್ರಿಲ್ 11: ಮೈಸೂರಿನಲ್ಲಿ ಮೈತ್ರಿ ನಾಯಕರಲ್ಲಿ ಹುಳುಕಿದೆ. ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಮಾತಿನ ಬೆನ್ನಲ್ಲೇ ನಿಧಾನವಾಗಿ ಒಬ್ಬೊಬ್ಬರೆ ಚುನಾವಣೆಗೆ ಇನ್ನು 6 ದಿನ ಬಾಕಿ ಉಳಿದಿರುವಾಗ ದಾಂಗುಡಿ ಇಡುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಮತ್ತು ಸಚಿವ ಜಿ.ಟಿ.ದೇವೇಗೌಡ ಪುತ್ರ ಹರೀಶ್ ಗೌಡ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಪರ ಪ್ರಚಾರ ಮಾಡುತ್ತಿದ್ದಾರೆ. ಅವರು ಮೈಸೂರಿನ ಜನತಾ ನಗರದ ಮಹದೇಶ್ವರ ದೇವಾಲಯದಿಂದ ಪ್ರಚಾರ ಆರಂಭಿಸಿದರು.
ಇದೇ ವೇಳೆ ಮಾತನಾಡಿದ ಹರೀಶ್ ಗೌಡ, ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿದೆ. ಹೀಗಾಗಿ ನಾವು ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದೇವೆ. ನಮ್ಮ ತಂದೆ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಎಲ್ಲರೂ ಮೈತ್ರಿ ಅಭ್ಯರ್ಥಿ ಪರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ತಂದೆ ಸಿದ್ದರಾಮಯ್ಯ ಅವರು ವಿರುದ್ಧವಾಗಿ ಸ್ಪರ್ಧೆ ಮಾಡಿದ್ದರು. ಈಗ ಮೈತ್ರಿ ಅಭ್ಯರ್ಥಿ ಪರ ಮಾಡಬೇಕು ಎಂದು ವರಿಷ್ಠರು ತೀರ್ಮಾನ ಮಾಡಿದ್ದಾರೆ. ನಾವು ಎಲ್ಲವನ್ನು ಮರೆತು ಈ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಅಲ್ಲಿನ ಮಹಿಳೆಯರು ಮೊದಲು ನೀರು ಕೊಡಿ, ಆಮೇಲೆ ವೋಟು ಕೇಳಿ ಎಂದು ಯತೀಂದ್ರ ಹಾಗೂ ಹರೀಶ್ ಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.ಅಲ್ಲದೇ, ಈ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದೆ. ಆದ್ರೆ ಜನಪ್ರತಿನಿಧಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನೀವು ನಮ್ಮ ಸಮಸ್ಯೆ ಬಗೆಹರಿಸಿ, ಆ ಮೇಲೆ ವೋಟು ಕೇಳೋದಕ್ಕೆ ಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಹರೀಶ್ ಗೌಡ, ನನಗೆ ಸಮಸ್ಯೆ ತಿಳಿದಿದೆ. ಸೆಪ್ಟೆಂಬರ್ ವರೆಗೆ ಕಾಲಾವಕಾಶ ಕೊಡಲು ಕೇಳಿದ್ದಾರೆ. ಅಲ್ಲದೇ ಇನ್ನೂ ಎರಡು ವರ್ಷದಲ್ಲಿ ಉಂಡವಾಡಿ ಯೋಜನೆಯಡಿ ದಿನದ 24 ಗಂಟೆ ನೀರು ಸಿಗುತ್ತದೆ. ಸಮಯ ಕೊಟ್ಟರೆ ಅರ್ಧ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.












Click it and Unblock the Notifications