ಯಡಿಯೂರಪ್ಪ ಎಂಬ ಹೆಸರಿನವನಾದ ನಾನು ಬೂಕನಕೆರೆಯಿಂದ ಬಂದವನು...!
Recommended Video
ಮಂಡ್ಯ, ಜುಲೈ 26: ಜಿಟಿ ಜಿಟಿ ಮಳೆ, ಹಸಿರು ಹೊದ್ದ ಮರ ಗಿಡಗಳ ಮಧ್ಯೆ ಹಾದು ಹೋಗುವ ಕಾಂಕ್ರೀಟ್ ರಸ್ತೆ, ಅಲ್ಲಲ್ಲಿ ಹಂಚಿನ ಮನೆಗಳು, ಜೋಡಿಸಿಟ್ಟಂತೆ ಕಾಣುವ ಬಾಳೆ ಗಿಡಗಳು, ರಸ್ತೆಯಲ್ಲಿ ತಾಮುಂದು ನಾಮುಂದು ಎಂದು ಸಾಗುವ ಬಸ್ಗಳು, ಜನರನ್ನು ತುಂಬಿಕೊಂಡು ಹೋಗುತ್ತಿರುವ ಟಂ -ಟಂ ಆಟೋಗಳು...
ಇವೆಲ್ಲವೂ ಕಂಡುಬಂದದ್ದು ಕೆ.ಆರ್.ಪೇಟೆಯಿಂದ ಬೂಕನಕೆರೆಗೆ ಹೋಗುವ ದಾರಿಯ ಮಧ್ಯೆ.
ಬೂಕನಕೆರೆಯನ್ನು ಮತ್ತೆ ಪರಿಚಯಿಸಲು ಶುಕ್ರವಾರ ಕಾರಣವೊಂದು ಸಿಕ್ಕಿದೆ. ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ನೂತನ ಸಾರಥಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 2007, 2008 ಹಾಗೂ 2018ರಲ್ಲಿ ಮೂರು ಬಾರಿ, 'ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬುವವನಾದ ನಾನು...' ಎಂದು ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿ ಹಿರಿಯ ನಾಯಕ ಇದೀಗ ಮತ್ತೊಮ್ಮೆ ಇದೇ ಮಾತನ್ನು ಪುನರಾವರ್ತಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದು ಹೋದರೆ ಶುಕ್ರವಾರ ಸಂಜೆ ಹೊತ್ತಿಗೆ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ರಾಜಕೀಯ ನೆಲೆ, ಬದುಕು ಕಂಡುಕೊಂಡ ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಿಂದ 13 ಕಿ.ಮೀ ದೂರದಲ್ಲಿರುವ ಬೂಕನಕೆರೆ ಸಣ್ಣ ಊರು. ಇಲ್ಲೇ ಸಮೀಪದ ಭೂ ವರಾಹ ಸ್ವಾಮಿ ದೇವಸ್ಥಾನ ಪ್ರಮುಖ ಐತಿಹ್ಯ ಸ್ಥಳ. ಐದಾರು ಸಾವಿರ ಜನಸಂಖ್ಯೆಯಿರುವ ಬೂಕನಕೆರೆಯಲ್ಲಿ 500-600 ಕುಟುಂಬಗಳು ಸದ್ಯ ವಾಸವಾಗಿವೆ. ಇಲ್ಲಿನ ಶೇ. 60 ಜನ ರೈತಾಪಿ ವರ್ಗದವರು. ರಾಗಿ, ಹುರಳಿಕಾಳು, ತರಕಾರಿ, ಅಡಿಕೆ ಇಲ್ಲಿನ ಪ್ರಮುಖ ಬೆಳೆಗಳು.

ಸ್ವತಂತ್ರ ಸಿದ್ದಲಿಂಗೇಶ್ವರ ಗವಿಮಠ, ರಂಗನಾಥ ದೇಗುಲ, ಅಕ್ಕಮ್ಮ ತಾಯಿ, ಮೊದೂರು ಶಿವನ ದೇವಸ್ಥಾನ ಇಲ್ಲಿನ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು. ಹೀಗಿದ್ದರೂ ಬೂಕನಕೆರೆ ಅಭಿವೃದ್ಧಿ ಅಂತ ಕಂಡಿರುವುದು ಇತ್ತೀಚಿನ ದಿನಗಳಲ್ಲಿ. ಇಲ್ಲಿನ ಗ್ರಾಮಸ್ಥರ ಪ್ರಕಾರ ಆಧುನಿಕ ಅಭಿವೃದ್ಧಿಗೆ ಬೂಕನಕೆರೆ ಎದುರಾಗಿದ್ದಕ್ಕೆ ಕಾರಣ ಯಡಿಯೂರಪ್ಪ. ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದನ್ನು ಇಲ್ಲಿನ ಜನರು ಈಗಲೂ ಸ್ಮರಿಸಿ ಅವರಿಗೆ ಧನ್ಯವಾದ ಅರ್ಪಿಸುತ್ತಾರೆ.
ತಂದೆ ಬಿ. ಎಸ್. ಸಿದ್ದಲಿಂಗಪ್ಪ, ತಾಯಿ ಪುಟ್ಟತಾಯಮ್ಮನವರ ಮೊದಲ ಮಗ ಬಿ.ಎಸ್. ಯಡಿಯೂರಪ್ಪ. ಹುಟ್ಟಿನಿಂದಲೂ ಶಿಸ್ತು. ಇವರಿಗೆ ಪಿ.ಎಸ್.ಪ್ರೇಮ ಹೆಸರಿನ ತಂಗಿ ಇದ್ದಾರೆ. ಇವರ ತಂದೆ ಸಿದ್ದಲಿಂಗಪ್ಪ ಅವರಿಗೆ ಪುಟ್ಟತಾಯಮ್ಮ ಎರಡನೇ ಹೆಂಡತಿ. ಮೊದಲ ಹೆಂಡತಿಗೆ ಮೂವರ ಮಕ್ಕಳು. ಅನಿವಾರ್ಯ ಸಂದರ್ಭದಲ್ಲಿ ಕಷ್ಟದ ದಿನಗಳು ಎದುರಾದಾಗ ಜಮೀನನ್ನು ಕಳೆದುಕೊಂಡು ವ್ಯಾಪಾರಕ್ಕೆ ಇಳಿದವರು ಸಿದ್ದಲಿಂಗಪ್ಪನವರು. ತಂದೆ ನಿಂಬೆಹಣ್ಣು ವ್ಯಾಪಾರ ಮಾಡುವಾಗ ಯಡಿಯೂರಪ್ಪ ಸಹಾಯ ಮಾಡುತ್ತಿದ್ದದ್ದನ್ನು ಬೂಕನಕೆರೆಯ ಅವರ ಸ್ನೇಹಿತರು ಇವತ್ತಿಗೂ ಮರೆತಿಲ್ಲ.
"ನನ್ನ ಮೈದುನನ ನಾಮಕರಣ ಶಿವನ ದೇವಸ್ಥಾನದಲ್ಲಿ ನಡೆಯಿತು. ಅವರ ಪೋಷಕರು ಸಿದ್ದಲಿಂಗೇಶ್ವರನನ್ನು ನಂಬಿದ್ದರು. ಹಾಗಾಗಿ ಅವನಿಗೆ ಯಡಿಯೂರಪ್ಪ ಎಂದು ಹೆಸರಿಟ್ಟರು. ಅವರ ತಾಯಿ ನಾಲ್ಕು ವರ್ಷದವರಿದ್ದಾಗಲೇ ತೀರಿ ಹೋದರು. ನಂತರ ಅವನನ್ನು ನೋಡಿಕೊಂಡದ್ದು ನಮ್ಮ ಅತ್ತೆ. ಅಂದರೆ ಅವರ ಮೊದಲ ಅಮ್ಮ. ನಮ್ಮ ಯಜಮಾನರು ಮಹದೇವಪ್ಪ ಅವರ ಅಣ್ಣ" ಎಂದು ಮಾಹಿತಿ ನೀಡುತ್ತಾರೆ ಯಡಿಯೂರಪ್ಪ ಅವರ ಅತ್ತಿಗೆ ಶಾರದಮ್ಮನವರು.

ಬಾಲ್ಯದ ದಿನಗಳಲ್ಲಿ ಕೆಂಪಗೆ - ಗುಂಡು ಗುಂಡಾಗಿ ಇದ್ದ ಯಡಿಯೂರಪ್ಪ ಗ್ರಾಮದಲ್ಲಿ ಎಲ್ಲರ ಮುದ್ದಿನ ಮಗುವಾಗಿಯೇ ಬೆಳೆದರು. ಯಡಿಯೂರಪ್ಪನವರು ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದಂತೆ. ಸರ್ಕಾರಿ ಪ್ರಾಥಮಿಕ ಶಾಲೆ ಬೂಕನಕೆರೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ನಂತರದ ಶಿಕ್ಷಣವನ್ನು ಪಡೆದುಕೊಳ್ಳಲು ತೆರಳಿದ್ದು ಮಂಡ್ಯ, ಮೈಸೂರಿಗೆ.
ದೈವಭಕ್ತಿ ಯಡಿಯೂರಪ್ಪನವರ ಕುಟುಂಬದಲ್ಲಿ ಹೆಚ್ಚಿತ್ತು. ಎಲ್ಲಾ ಹಬ್ಬವನ್ನು ಆಚರಿಸುತ್ತಿದ್ದರು. ಮನೆ ದೇವರು ಸ್ವತಂತ್ರ ಸಿದ್ದಲಿಂಗೇಶ್ವರ ಹಾಗೂ ಅಕ್ಕತಾಯಮ್ಮನನ್ನು ಪೂಜಿಸಿಕೊಂಡ ಬಂದವರು. "ಇಂದಿಗೂ ಹಿರಿಯರ ಪೂಜೆಯ ದಿನದಂದು ಅವನು ಕುಟುಂಬ ಸಮೇತ ಬರುತ್ತಾನೆ. ನಮಗೆ ಸಂಸತವಾಗುತ್ತದೆ. ಅವನು ಎಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ನಮ್ಮನ್ನು ಸಮಾನವಾಗಿ ಕಾಣುತ್ತಾನೆ. ಮನೆಗೆ ಹೋದರೆ ಚೆನ್ನಾಗಿ ಉಪಚರಿಸುತ್ತಾನೆ. ನನಗೆ ಬೂಕನಕೆರೆ ನೆನಪಾಗುತ್ತದೆ ಎನ್ನುತ್ತಾನೆ," ಎಂದು ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾರೆ ಅತ್ತಿಗೆ ಶಾರದಮ್ಮ.

"ನಮ್ಮ ಯಡಿಯೂರಪ್ಪಂಗೆ ಬೆಣ್ಣೆ ಹಾಕಿದ ಮಸಾಲೆ ರೊಟ್ಟಿ ಅಂದ್ರೆ ಪಂಚ ಪ್ರಾಣ. ಎಲ್ಲವೂ ಕ್ಲೀನ್ ಆಗಿರಬೇಕು ಎನ್ನುವುದು ಅವನ ರೂಲ್ಸ್. ಎಷ್ಟೇ ದೊಡ್ಡವನಾದರೂ ನಮ್ಮ ಬೂಕನಕೆರೆ ನೆಂಟಸ್ಥನ ಹೋಗಬಾರದು ಅಂತ ಅವನ ಮಗಳನ್ನು ನಮ್ಮ ಬೂಕನಕೆರೆ ಹುಡುಗನಿಗೆ ಮದುವೆ ಮಾಡಿಕೊಟ್ಟರು. ದೊಡ್ಡವರು ಹೇಳಿದ ಮಾತನ್ನು ಎಂದೂ ಮೀರಲ್ಲ. ಇನ್ನಾದರೂ ಅವನ ಆಯಸ್ಸು ಆರೋಗ್ಯ ಹೆಚ್ಚಾಗಲಿ, ಚೆನ್ನಾಗಿ ಆಡಳಿತ ನಡೆಸಲಿ. ಬಡವರಿಗೆ ಸಹಾಯ ಮಾಡಲಿ ಎಂಬುದೇ ನಮ್ಮ ಹಾರೈಕೆ," ಎನ್ನುತ್ತಾರೆ ಅವರು.
"ನಮ್ಮ ಊರಿಗೆ ಯಡಿಯೂರಪ್ಪ ಬಂದಾಗೆಲ್ಲ ಏನೋ ಒಂದು ಖುಷಿ, ಸಂಭ್ರಮ ಮನೆ ಮಾಡುತ್ತದೆ. ಎಲ್ಲಾ ಹಿರಿಯರು ಹೋಗಿ ಯಡಿಯೂರಪ್ಪನವರ ಹತ್ರ ನೀನು ನಮ್ಮ ಮನೆಗೆ ಬರ್ತಿದ್ದೆ, ರೊಟ್ಟಿ, ಮುದ್ದೆ ತಿಂತಿದ್ದೆ ಎಂದು ಹೇಳ್ತಾರೆ. ಆಗ ಯಡಿಯೂರಪ್ಪ ಕೂಡ ನೆನಪಿಸಿಕೊಳ್ಳುತ್ತಾರೆ" ಎಂದು ಸಂತಸದಿಂದ ಹೇಳುತ್ತಾರೆ ತಾಲೂಕು ಯಡಿಯೂರಪ್ಪ ಅಭಿಮಾನಿ ಬಳಗದ ಅಧ್ಯಕ್ಷರಾದ ಮಧುಸೂದನ್.

ಬಿಎಸ್ವೈ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಬೂಕನಕೆರೆಗೆ 20 ಕೋಟಿ ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದಾರೆ. ಸಮುದಾಯ ಭವನವನ್ನು ನಿರ್ಮಿಸಿದ್ದಾರೆ. ಕುಡಿಯುವ ನೀರಿನ ಯೋಜನೆಯನ್ನು 21 ಹಳ್ಳಿಗಳಿಗೆ ನೀಡುವಂತೆ ಸೂಚಿಸಿದ್ದರು. ಸುವರ್ಣ ಗ್ರಾಮ ಯೋಜನೆಯಡಿ ಕಾಂಕ್ರೀಟ್ ರಸ್ತೆ ನಿರ್ಮಿಸಿದರು. ಕಾಲೇಜು ಹಾಗೂ ಶಾಲೆಯನ್ನು ಬೂಕನಕೆರೆಯಲ್ಲಿ ಆರಂಭಿಸಿದ್ದಾರೆ. "ಇಲ್ಲಿನ ಜನರ ಸಮಸ್ಯೆಯನ್ನು ಬಹು ಬೇಗ ಆಲಿಸುತ್ತಾರೆ" ಎನ್ನುತ್ತಾರೆ ಮಧುಸೂದನ್.
ನಾಯಕ ಯಡಿಯೂರಪ್ಪ ಹುಟ್ಟಿ ಬೆಳೆದ ಮನೆಯನ್ನು ಇವತ್ತಿಗೆ ತೆಗೆಯಲಾಗಿದೆ, ಆ ಜಾಗದಲ್ಲಿ ಕಾಂಕ್ರೀಟ್ ಮನೆ ನಿರ್ಮಾಣವಾಗಿದೆ. ಸದ್ಯ ಅಲ್ಲಿಯೇ ಅವರ ಅಣ್ಣ ಮಹದೇವಪ್ಪನವರ ಕುಟುಂಬ ವಾಸವಾಗಿದ್ದಾರೆ. ಇಂದಿಗೂ ಯಡಿಯೂರಪ್ಪನವರು ಊರಿಗೆ ಬಂದರೆ ಬೂಕನಕೆರೆಗೆ ಬರದೆ ಇರಲಾರರು. ಅವರ ಬಾಲ್ಯದ ನಂಟನ್ನು ನೆನಪಿನ ಪುಟದಲ್ಲಿ ಉಳಿಸಿಕೊಳ್ಳಲು ಇಲ್ಲಿಯ ಹಲವು ಜಾಗಗಳನ್ನು ಸಾಕ್ಷಿಯಾಗಿಸಿಕೊಂಡಿದ್ದಾರೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications