ರಾಜ್ಯದ ಭೀಕರ ಬರಗಾಲದ ನಡುವೆ ಕೇರಳಕ್ಕೆ ಹಸಿರು ಮೇವು ಸಾಗಾಟ: ರೈತರ ಆಕ್ರೋಶ
ಮೈಸೂರು, ಮಾರ್ಚ್ 11: ರಾಜ್ಯದಲ್ಲಿ ಬರ ಕಾಣಿಸಿಕೊಂಡಿರುವ ಕಾರಣ ರೈತಾಪಿ ವರ್ಗ ನೀರಿಲ್ಲದೆ ಕೃಷಿಗೆ ಪರದಾಡುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಜಾನುವಾರುಗಳಿಗೆ ಮೇವು ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದರ ನಡುವೆ ರಾಜ್ಯದ ಮೇವು ಕೇರಳದ ಪಾಲಾಗುತ್ತಿರುವುದು ಎದ್ದು ಕಾಣಿಸುತ್ತಿದೆ.
ದಿನ ಕಳೆದಂತೆ ಜಾನುವಾರುಗಳಿಗೆ ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದರೂ ಅಧಿಕ ಬೆಲೆ ಸಿಗುತ್ತದೆ ಎಂಬ ಕಾರಣದಿಂದ ಕೇರಳಕ್ಕೆ ಹಸಿರು ಮೇವುಗಳನ್ನು ಸಾಗಾಟ ಮಾಡುತ್ತಿರುವುದು ಮಾತ್ರ ಬೇಸರದ ಸಂಗತಿಯಾಗಿದೆ. ಇದನ್ನು ನೋಡಿಯೂ ಸಂಬಂಧಿಸಿದವರು ಮೌನಕ್ಕೆ ಶರಣಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಿಂದ ಮೇವನ್ನು ಮೈಸೂರು ಹೆಚ್.ಡಿ.ಕೋಟೆ ಮೂಲಕ ಕೇರಳಕ್ಕೆ ಸಾಗಿಸುತ್ತಿರುವುದು ಈಗ ಕಂಡು ಬರುತ್ತಿರುವ ದೃಶ್ಯಗಳಾಗಿವೆ.

ಹೆಚ್ಚಿನ ಮೇವು ಗಡಿ ತಾಲೂಕು ಹೆಚ್.ಡಿ.ಕೋಟೆ ವ್ಯಾಪ್ತಿಯಿಂದಲೇ ಹೋಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಕಳೆದ ವರ್ಷ ಪೂರ್ವ ಮುಂಗಾರು ಕೈಕೊಟ್ಟ ಪರಿಣಾಮ ಎಚ್.ಡಿ.ಕೋಟೆ ತಾಲೂಕು ಬರಪಿಡಿತ ತಾಲೂಕು ಎಂದು ಸರ್ಕಾರ ಘೋಷಣೆ ಮಾಡಿದೆ. ಹೀಗಿರುವಾಗ ಇಲ್ಲಿಂದಲೇ ಕೇರಳಕ್ಕೆ ಸಾಗಾಟವಾಗುತ್ತಿದ್ದು, ಇದನ್ನು ತಡೆಯದಿದ್ದರೆ ಸಂಕಷ್ಟ ಎದುರಾಗುವುದಂತು ನಿಜ.
ಮೇವು ಕಿಟ್ ದುರುಪಯೋಗ?
ಇನ್ನು ಕೇರಳದಲ್ಲಿ ಹಸಿರು ಮೇವಿಗೆ ಹೆಚ್ಚಿನ ಬೇಡಿಕೆಯಿದೆ ಹೀಗಾಗಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರು ಮೇವನ್ನು ಕೇರಳಕ್ಕೆ ಸಾಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಕೃಷಿ ಮತ್ತು ಪಶುಸಂಗೋಪನಾ ಇಲಾಖೆಯಿಂದ ದೊರೆಯುವ ಮೇವು ಕಿಟ್ ನ ದುರುಪಯೋಗವಾಗುತ್ತಿದೆ ಎಂಬ ಆರೋಪವೂ ಇಲ್ಲದಿಲ್ಲ.
ಮೊದಲೇ ಬೇಸಿಗೆಯ ರಣ ಬಿಸಿಲಿಗೆ ಅಂರ್ತಜಲ ಮಟ್ಟ ಕುಸಿತದಿಂದಾಗಿ ರೈತರ ಬೋರ್ ವೆಲ್ ಗಳ ನೀರಿನ ಮಟ್ಟ ಕುಸಿಯುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಈ ನಡುವೆ ತಾಲೂಕಿನಲ್ಲಿ ಮೇವಿನ ಕೊರತೆ ಇದ್ದರೂ ಪ್ರತಿನಿತ್ಯ ಟ್ರಕ್, ಕ್ಯಾಂಟರ್, ಟಾಟಾ ಏಸ್ನಂತಹ ಖಾಸಗಿ ವಾಹನಗಳಲ್ಲಿ ಮೇವು ಕೇರಳದ ಕಡೆಗೆ ಹೋಗುತ್ತಿರುವುದು ಕಂಡು ಬರುತ್ತಿದೆ.

ಚೆಕ್ ಪೋಸ್ಟ್ ಮೂಲಕ ಸಾಗಾಟ
ತಾಲೂಕಿನಲ್ಲಿ ಮೇವಿನ ಕೊರತೆ ಕಾಣಿಸಿಕೊಂಡಿದ್ದರೂ ರೈತರು ತಮ್ಮ ಜಾನುವಾರುಗಳ ಹೊಟ್ಟೆ ತುಂಬಿಸಲು ಬೆಳೆದ ಮೇವನ್ನು ಮಧ್ಯವರ್ತಿಗಳ ಸಹಕಾರದಲ್ಲಿ ಕೇರಳ ರಾಜ್ಯದ ಜನರು ಬಂದು ಟನ್ ಮೇವಿಗೆ ದುಪ್ಪಟ್ಟು ಬೆಲೆ ನೀಡಿ ಖರೀದಿ ಮಾಡಿಕೊಂಡು ವಾಹನಗಳಲ್ಲಿ ತುಂಬಿಕೊಂಡು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಗುಂಡತ್ತೂರು, ಬಳ್ಳೆ ಹಾಗೂ ಗಡಿಭಾಗದ ಬಾವಲಿ ಚೇಕ್ ಪೋಸ್ಟ್ ಗಳ ಮೂಲಕ ಸಾಗಿಸುತ್ತಾರೆ.
ತಾಲೂಕಿನಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಇರುವುದರಿಂದ ತಾಲೂಕಿನಲ್ಲಿ ಮೇವು ಬೆಳೆದಿರುವ ರೈತರು ಯಾವುದೇ ಕಾರಣಕ್ಕೂ ಅಂತರ ರಾಜ್ಯ ಹಾಗೂ ಅಂತರ ಜಿಲ್ಲೆಗಳಿಗೆ ಮೇವು ಸಾಗಣೆ ಮಾಡಬಾರದು ಎಂದು ತಹಶೀಲ್ದಾರ್ ಶ್ರೀನಿವಾಸ್ ಅವರು ಕೆಲ ದಿನಗಳ ಹಿಂದಷ್ಟೇ ಆದೇಶ ಹೊರಡಿಸಿದ್ದರು. ಆದರೂ ಮೇವು ಕೇರಳ ರಾಜ್ಯಕ್ಕೆ ನಿತ್ಯ ಸಾವಿರಾರು ಟನ್ ಅಕ್ರಮವಾಗಿ ಚೇಕ್ ಪೋಸ್ಟ್ ದಾಟಿ ನೆರೆ ರಾಜ್ಯ ಸೇರುತ್ತಿರುವ ಬಗ್ಗೆ ಇಲ್ಲಿನ ರೈತರು, ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೂಡಲೇ ತಡೆಯುವಂತೆ ಆಗ್ರಹಿಸುತ್ತಿದ್ದಾರೆ.
ಮೇವಿನ ಬಗ್ಗೆ ಎಚ್ಚರ ವಹಿಸುವುದು ಅಗತ್ಯ
ತಾಲೂಕಿನಲ್ಲಿ ಈ ವರ್ಷ ಭೀಕರ ಬರ ಆವರಿಸಿದೆ, ಜತೆಗೆ ಬೇಸಿಗೆಯ ರಣ ಬಿಸಿಲಿಗೆ ದಿನೇ ದಿನೇ ಅತ್ಯಧಿಕ ಉಷ್ಣಾಂಶದಿಂದ ತಾಪಮಾನ ಹೆಚ್ಚಾಗುತ್ತಿರುವುದರಿಂದ ತಾಲೂಕಿನ ನದಿ ಕೆರೆ ಕಟ್ಟೆಗಳು ಬತ್ತಿ ಹೋಗುತ್ತಿವೆ, ಇದರಿಂದ ರೈತರ ಬೋರ್ ಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ಹೀಗಾಗಿ ಮುಂದೆ ಮಳೆ ಬಾರದೆ ಹೋದರೆ ರೈತರು ಕುಡಿಯುವ ನೀರಿನ ಜತೆಗೆ ಜಾನುವಾರುಗಳ ಮೇವಿಗೂ ಪರದಾಡ ಬೇಕಾದ ಸ್ಥಿತಿ ಎದುರಾದರೆ ಅಚ್ಚರಿ ಪಡಬೇಕಾಗಿಲ್ಲ.
ಮುಂದಿನ ದಿನಗಳಲ್ಲಿ ಭೀಕರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುವಾಗ ಈಗಲೇ ಮೇವಿನ ಬಗ್ಗೆ ಎಚ್ಚರ ವಹಿಸುವುದು ಬಹುಮುಖ್ಯವಾಗಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದೇ ಆದರೆ ಅದಕ್ಕೆ ಕಂದಾಯ ಕಟ್ಟಬೇಕಾದ ಪರಿಸ್ಥಿತಿ ಒದಗಿ ಬಂದರೂ ಬರಬಹುದು. ಹಾಗಾಗದಂತೆ ಈಗಿನಿಂದಲೇ ಎಚ್ಚರ ವಹಿಸುವುದು ಬಹುಮುಖ್ಯವಾಗಿದೆ.












Click it and Unblock the Notifications