ಮೈಸೂರು ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ
ಮೈಸೂರು, ಜುಲೈ 27: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ, ಕೆಲ ಯುವಕರಿಂದ ಹಣ ವಸೂಲಿ ಮಾಡಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಉದ್ಯೋಗ ಕೊಡಿಸುವ ನೆಪದಲ್ಲಿ ಮೊದಲೇ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಏಜೆಂಟರು, ತಾವು ಏರ್ ಪೋರ್ಟ್ ಸಿಬ್ಬಂದಿಯೊಂದಿಗೆ ಈಗಾಗಲೇ ಮಾತನಾಡಿದ್ದು, ಅವರನ್ನು ಭೇಟಿಯಾಗಲು ತಿಳಿಸಿ ಯುವಕರನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸುತ್ತಿದ್ದಾರೆ. ಪ್ರತಿ ದಿನ 10 ರಿಂದ 15 ಮಂದಿ ಕೆಲಸ ಕೇಳಿಕೊಂಡು ಬರುತ್ತಿರುವುದಾಗಿ ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.
ಐಎಂಎ ಹಗರಣ: ಜಮೀರ್ ಅಹ್ಮದ್, ರೋಷನ್ ಬೇಗ್ಗೆ ಎಸ್ಐಟಿ ನೋಟಿಸ್
"ಈಗಾಗಲೇ ಖಾಸಗಿ ಎಂಪ್ಲಾಯ್ಮೆಂಟ್ ಬ್ಯೂರೋಗಳು ನಿರುದ್ಯೋಗ ಯುವಕ-ಯುವತಿಯರಿಂದ ಹಣ ಪಡೆದು ನಮ್ಮ ಬಳಿಗೆ ಕಳುಹಿಸುತ್ತಿದ್ದಾರೆ. ಹೈದರಾಬಾದ್, ಮಂಗಳೂರು, ಚೆನ್ನೈ ನಿಂದಲೂ ಜನ ಕೆಲಸ ಅರಸಿ ಬರುತ್ತಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಯಾವುದೇ ಕೆಲಸ ಖಾಲಿ ಇಲ್ಲ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ನೇಮಕಾತಿ ಪ್ರಕ್ರಿಯೆ ನಡೆಸುತ್ತದೆ. ಈ ನೆಪದಲ್ಲಿ ಯಾರೂ ವಂಚನೆಗೊಳಗಾಗಬೇಡಿ" ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಮೈಸೂರು ವಿಮಾನ ನಿಲ್ದಾಣದಿಂದ ಹೆಚ್ಚುವರಿ ವಿಮಾನಗಳ ಹಾರಾಟ ಆರಂಭಗೊಂಡಿದೆ. ಜೊತೆಗೆ ಪ್ರವಾಸಿಗರೂ ಹೆಚ್ಚಾಗಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ವಂಚಕರು ಅಮಾಯಕರಿಂದ ಹಣ ಪೀಕಿಸಿ ವಂಚಿಸುತ್ತಿದ್ದಾರೆ. ಪೊಲೀಸರೂ ಈ ಕುರಿತು ಕ್ರಮ ಕೈಗೊಳ್ಳಬೇಕಿದೆ.