ತಿ ನರಸೀಪುರದ ಬಳಿ ಲಾರಿ- ಬೈಕ್ ಗಳ ನಡುವೆ ಅಪಘಾತ: ನಾಲ್ವರ ಸಾವು
ಮೈಸೂರು, ಜುಲೈ 24: ಲಾರಿ ಮತ್ತು ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಬೈಕ್ ಸವಾರರು ಮೃತಪಟ್ಟ ಘಟನೆ ತಿ.ನರಸೀಪುರ ತಾಲೂಕಿನ ಇಂಡವಾಳು ಗ್ರಾಮದ ಬಳಿ ಬುಧವಾರ ನಡೆದಿದೆ.
ಎಚ್.ಡಿ.ಕೋಟೆ ತಾಲೂಕಿನ ಕಂದೇಗಾಲ ನಿವಾಸಿ ರಾಘವೇಂದ್ರ (25), ಕಂಚಮಳ್ಳಿ ನಿವಾಸಿ ಮಧುಕುಮಾರ್ (19) ಹಾಗೂ ನಂಜನಗೂಡು ತಾಲೂಕಿನ ಹುರಾ ಗ್ರಾಮದ ಮಧು, ಒಡಿಶಾ ಮೂಲದ ಅಹಮ್ಮದ್ ಖಾನ್ ಮೃತ ದುರ್ದೈವಿಗಳು.
ಮೈಸೂರು- ತಿ.ನರಸೀಪುರ ಹೆದ್ದಾರಿಯಲ್ಲಿ ಲಾರಿ ಮತ್ತು ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನಾಲ್ವರು ಯುವಕರು ಎರಡು ದ್ವಿಚಕ್ರ ವಾಹನಗಳಲ್ಲಿ ಸ್ನೇಹಿತನ ಮನೆಗೆ ಹಬ್ಬಕ್ಕೆಂದು ಬಂದಿದ್ದರು. ಸ್ನೇಹಿತನ ಮನೆಯಲ್ಲಿ ಹಬ್ಬದೂಟ ಮುಗಿಸಿಕೊಂಡು ವಾಪಸ್ ಬೈಕಿನಲ್ಲಿ ಹೊರಟಿದ್ದರು. ತಿ.ನರಸೀಪುರದ ಇಂಡವಾಳು ಬಳಿ ತಡರಾತ್ರಿ ಲಾರಿ ಮತ್ತು ಬೈಕ್ ಗಳ ನಡುವೆ ಅಪಘಾತವಾಗಿದೆ. ಮೃತರೆಲ್ಲರೂ ಮೈಸೂರಿನ ಹೋಟೆಲ್ ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications