Get Updates
Get notified of breaking news, exclusive insights, and must-see stories!

ಪಿರಿಯಾಪಟ್ಟಣದಲ್ಲಿ ಪೊಲೀಸ್ ಠಾಣೆಯೇರಿದ ಕೈ-ತೆನೆ ಕಿತ್ತಾಟ!

ಮೈಸೂರು, ಡಿಸೆಂಬರ್ 30 : ಅದ್ಯಾಕೋ ಗೊತ್ತಿಲ್ಲ ರಾಜ್ಯದಲ್ಲಿ ಬಿಜೆಪಿಯನ್ನು ಹೊರಗಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಉತ್ತಮ ಆಡಳಿತ ನಡೆಸುತ್ತೇವೆಂದು ಅಧಿಕಾರದ ಚುಕ್ಕಾಣಿ ಹಿಡಿದ ನಾಯಕರು ರಾಜ್ಯಮಟ್ಟದಲ್ಲಿ ಒಂದಷ್ಟು ಅಸಮಾಧಾನವಿದ್ದರೂ ಅಧಿಕಾರದ ದುರಾಸೆಯಿಂದ ಒಗ್ಗೂಡಿಕೊಂಡು ಮುನ್ನಡೆಯುತ್ತಿದ್ದರೂ ತಾಲೂಕು ಮಟ್ಟದಲ್ಲಿ ಮಾತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗದೆ ಕಿರಿಕ್ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಇದಕ್ಕೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕೈನ ಮಾಜಿ ಶಾಸಕ ಮತ್ತು ಜೆಡಿಎಸ್ ನ ಹಾಲಿ ಶಾಸಕರ ಕಿತ್ತಾಟ ಸಾಕ್ಷಿಯಾಗಿದೆ.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ವಿರೋಧಿಗಳಾಗಿದ್ದು, ಇಲ್ಲಿ ಗ್ರಾಮಪಂಚಾಯಿತಿಯಿಂದ ಆರಂಭವಾಗಿ ಲೋಕಸಭೆವರೆಗೂ ಇವೆರಡು ಪಕ್ಷಗಳು ಪ್ರಬಲ ಪೈಪೋಟಿ ನೀಡುತ್ತಲೇ ಬಂದಿವೆ. ಹೀಗಾಗಿ ರಾಜ್ಯಮಟ್ಟದಲ್ಲಿ ನಾಯಕರು ಅನಿವಾರ್ಯತೆಯಿಂದ ಒಂದಾಗಿದ್ದರೂ ಇಲ್ಲಿ ಕಾರ್ಯಕರ್ತರು ಮತ್ತು ನಾಯಕರು ಮಾತ್ರ ಮಾನಸಿಕವಾಗಿ ಒಂದಾಗುತ್ತಿಲ್ಲ.

ಇದೀಗ ಮೈತ್ರಿ ಸರ್ಕಾರವಿದ್ದರೂ ಯಾವುದೇ ಕಾರ್ಯಕ್ರಮಗಳಿರಲಿ ಅಥವಾ ಮುಖ್ಯಮಂತ್ರಿಗಳು, ಸಚಿವರು ಆಗಮಿಸಲಿ ಯಾವುದಕ್ಕೂ ಎರಡು ಪಕ್ಷದ ನಾಯಕರಂತು ಆಗಮಿಸುವುದೇ ಇಲ್ಲ. ಆಯಾಯ ಪಕ್ಷದವರು ಮಾತ್ರ ಇರುತ್ತಾರೆ. ಹೀಗಾಗಿ ಎರಡು ಪಕ್ಷದ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ಒಂದಾಗಿ ಮುನ್ನಡೆಯುತ್ತಿರುವುದಂತು ಮೈಸೂರು ಜಿಲ್ಲೆಯ ಯಾವುದೇ ತಾಲೂಕಿಗೆ ಹೋದರೂ ಕಂಡು ಬರುತ್ತಿಲ್ಲ. ಮುಂದೆ ಓದಿ...

ಪಿರಿಯಾಪಟ್ಟಣದಲ್ಲಿ ಭುಗಿಲೆದ್ದ ಕಿತ್ತಾಟ

ಪಿರಿಯಾಪಟ್ಟಣದಲ್ಲಿ ಭುಗಿಲೆದ್ದ ಕಿತ್ತಾಟ

ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ತಿ.ನರಸೀಪುರ, ಕೆ.ಆರ್.ನಗರ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರನ್ನು ಮಣಿಸಿ ಜೆಡಿಎಸ್ ಅಧಿಪತ್ಯ ಸಾಧಿಸಿದೆ. ಇಲ್ಲಿ ಯಾವುದೇ ಕಾರಣಕ್ಕೂ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ಒಂದಾಗುವುದು ಅಸಾಧ್ಯವೇ. ಹೀಗಾಗಿ ಇಲ್ಲಿ ಆಗಾಗ್ಗೆ ಜಟಾಪಟಿಗಳು ನಡೆಯುತ್ತಲೇ ಇರುತ್ತವೆ. ಒಂದು ವೇಳೆ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ ಎಂಬ ಕಾರಣಕ್ಕೆ ಇವರೇನಾದರೂ ಒಂದಾಗಿ ಮೌನಕ್ಕೆ ಶರಣಾಗಿ ಬಿಟ್ಟರೆ ಇಲ್ಲಿ ಬಿಜೆಪಿ ಬೆಳೆದು ನಿಂತು ಬಿಡುತ್ತದೆ. ಈ ಭಯ ತಳಮಟ್ಟದ ನಾಯಕರಲ್ಲಿದೆ. ಹೀಗಾಗಿ ಒಬ್ಬರನೊಬ್ಬರು ದೋಸ್ತಿಯಾಗಿ ನೋಡುವ ಯಾವ ಲಕ್ಷಣಗಳು ಇಲ್ಲಿ ಕಾಣುತ್ತಿಲ್ಲ. ಜತೆಗೆ ಮಾನಸಿಕವಾಗಿ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಹುಣಸೂರು, ಪಿರಿಯಾಪಟ್ಟಣ ತಿ.ನರಸೀಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಆಧಿಪತ್ಯ ಸಾಧಿಸಿದ್ದರು. ಆದರೆ ಅದನ್ನು ಕಿತ್ತುಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಹೀಗಾಗಿ ಇಲ್ಲಿ ಮಾಜಿ ಮತ್ತು ಹಾಲಿ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದ್ದು ಆ ಪೈಕಿ ಪಿರಿಯಾಪಟ್ಟಣದಲ್ಲಂತು ಕಿತ್ತಾಟ ಭುಗಿಲೆದ್ದಿದೆ.

ಕೆಟ್ಟಿದ ಕ್ಷೇತ್ರದ ಜನರ ನೆಮ್ಮದಿ

ಕೆಟ್ಟಿದ ಕ್ಷೇತ್ರದ ಜನರ ನೆಮ್ಮದಿ

ಇಲ್ಲಿನ ಮಾಜಿ ಶಾಸಕ ಕಾಂಗ್ರೆಸ್‌ನ ವೆಂಕಟೇಶ್ ಮತ್ತು ಹಾಲಿ ಶಾಸಕ ಜೆಡಿಎಸ್ ನ ಕೆ.ಮಹದೇವ್ ನಡುವೆ ಬಹಿರಂಗ ಹೇಳಿಕೆಗಳು ಮುಂದುವರೆದು ಇದೀಗ ಸುಮೋಟೋ ಕಾಯಿದೆಯಡಿ ಎಫ್‌ಐಆರ್ ದಾಖಲಿಸುವ ಮಟ್ಟಿಗೆ ಬಂದು ನಿಂತಿದೆ. ಹಿಂದೆ ವೆಂಕಟೇಶ್ ಅವರ ಕಾಲದಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿಗೆ ಮಹದೇವ್ ಅವರು ಮತ್ತೆ ಭೂಮಿ ಪೂಜೆ ಮಾಡುವ ಮೂಲಕ ಟಾಂಗ್ ನೀಡಿದ್ದರು. ಜತೆಗೆ ಬೈದಾಡಿಕೊಂಡಿದ್ದರು. ಇವರ ಜಗಳ ನೋಡಿದ ಜನ ಇವರು ಕ್ಷೇತ್ರದ ಅಭಿವೃದ್ಧಿ ಮಾಡುವ ಬದಲು ಜಗಳದಲ್ಲೇ ಕಾಲ ಕಳೆಯುತ್ತಾರೆ ಎಂದು ಮಾತಾಡಿಕೊಳ್ಳುತ್ತಿದ್ದರು ಅದು ಈಗ ನಿಜವಾಗುತ್ತಿದೆ. ಇದೀಗ ಇಬ್ಬರು ನಾಯಕರು ಜಿದ್ದಾಜಿದ್ದಿಗೆ ಬಿದ್ದಿದ್ದರಿಂದ ಅವರ ಹಿಂಬಾಲಕರು ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆ ಸಮಾರಂಭ ಮತ್ತು ರಾಜಕೀಯ ಪಕ್ಷದ ಕಾರ್ಯಕರ್ತರ ಸಭೆಗಳಲ್ಲಿ ಹಾಲಿ ಶಾಸಕರಾದ ಕೆ.ಮಹದೇವ ಮತ್ತು ಮಾಜಿ ಶಾಸಕರಾದ ಕೆ.ವೆಂಕಟೇಶ್‌ರವರು ಮಾಡಿರುವ ಭಾಷಣದಲ್ಲಿನ ಅವಾಚ್ಯ ಪದಗಳು ಮತ್ತು ಆಕ್ರೋಶಕಾರಿ ಹೇಳಿಕೆಗಳನ್ನು ಹುಡುಕಿಕೊಂಡು ಅದರ ಆಧಾರದಲ್ಲಿ ದೂರು ದಾಖಲಿಸುವ ಕೆಲಸಕ್ಕೆ ಮುಂದಾಗಿದ್ದು, ರಾಜಕೀಯ ಮೇಲಾಟಗಳು ಕ್ಷೇತ್ರದ ಜನರ ನೆಮ್ಮದಿಯನ್ನು ಕೆಡಿಸಲಾರಂಭಿಸಿದೆ.

ಶಾಸಕ ಮಹದೇವ್ ವಿರುದ್ಧ ಎಫ್‌ಐಆರ್ ದಾಖಲು

ಶಾಸಕ ಮಹದೇವ್ ವಿರುದ್ಧ ಎಫ್‌ಐಆರ್ ದಾಖಲು

ಹಾಲಿ ಶಾಸಕ ಕೆ.ಮಹದೇವ್ ಅವರು ಕೆಲವು ದಿನಗಳ ಹಿಂದೆ ಭೂಮಾಪನ ಇಲಾಖೆಯ ಅಧಿಕಾರಿ ಮಂಜೇಗೌಡ ಎಂಬುವರಿಗೆ ದೂರವಾಣಿ ಕರೆ ಮಾಡಿ ಮಾಜಿ ಶಾಸಕರಾದ ಕೆ.ವೆಂಕಟೇಶ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದ್ದು, ಆ ಧ್ವನಿ ಸುರುಳಿಯನ್ನು ಆಧಾರವಾಗಿಟ್ಟುಕ್ಕೊಂಡು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯ್‌ಕುಮಾರ್ ಶಾಸಕ ಕೆ.ಮಹದೇವ್ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಲ್ಲದೆ, ಡಿ.29ರ ಶನಿವಾರದಂದು ಪಿರಿಯಾಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಸಂಬಂಧ ಶಾಸಕ ಮಹದೇವ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಒಂದೇ ದಿನದಲ್ಲಿ ದೂರು ದಾಖಲು

ಒಂದೇ ದಿನದಲ್ಲಿ ದೂರು ದಾಖಲು

ಯಾವಾಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯ್‌ಕುಮಾರ್ ಕೆ.ಮಹದೇವ್ ವಿರುದ್ಧ ದೂರು ನೀಡಿರುವುದು ತಿಳಿಯುತ್ತಿದ್ದಂತೆಯೇ ಜೆಡಿಎಸ್ ಕೈಕಟ್ಟಿ ಕೂರದೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್.ರವಿ ಅವರು ಮಾಜಿ ಶಾಸಕ ಕಾಂಗ್ರೆಸ್‌ನ ಕೆ.ವೆಂಕಟೇಶ್ ಅವರ ವಿರುದ್ಧ ಈ ಹಿಂದೆ ಅವರು ಸಭೆ ಸಮಾರಂಭಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಬಗ್ಗೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ ಎಂಬ ಅವಹೇಳನಕಾರಿ, ಪ್ರಚೋದನಕಾರಿ ಭಾಷಣ ಮಾಡಿರುವುದನ್ನು ಗುರುತಿಸಿ ಅದನ್ನೇ ಆಧಾರವಾಗಿಟ್ಟುಕೊಂಡು ಪಿರಿಯಾಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಒಂದೇ ದಿನದಲ್ಲಿ ಮಾಜಿ ಮತ್ತು ಹಾಲಿ ಶಾಸಕರ ವಿರುದ್ಧ ದೂರು ದಾಖಲಾಗಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾಗುತ್ತಾ ಬಂದಿದೆ. ಆದರೆ ಪಿರಿಯಾಪಟ್ಟಣದಲ್ಲಿ ಮಾತ್ರ ಪರ ವಿರೋಧದಲ್ಲಿಯೇ ದಿನ ಕಳೆಯುತ್ತಿದ್ದು ಕ್ಷೇತ್ರದ ಅಭಿವೃದ್ಧಿಗಿಂತ ಕಿತ್ತಾಟವೇ ಜಾಸ್ತಿಯಾಗಿದೆ. ಇದರಿಂದ ಮತ ಹಾಕಿದ ಮತದಾರರು ಬಡಪಾಯಿಗಳಾಗುತ್ತಿದ್ದಾರೆ. ಜತೆಗೆ ಮೂಕಪ್ರೇಕ್ಷಕರಾಗುತ್ತಿದ್ದಾರೆ. ಇವರಿಗೆ ಯಾವಾಗ ಬುದ್ದಿ ಬರುತ್ತೋ? ಎಂದು ಕಾದು ನೋಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+