ಭಾರತದಲ್ಲಿ ಗ್ಲೋಬಲ್ ಮಾರ್ಕೆಟ್ ಆಗಬೇಕಿದೆ: ಎಚ್.ವಿಶ್ವನಾಥ್
ಮೈಸೂರು, ಮೇ 13: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ನ್ನು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎಚ್.ವಿಶ್ವನಾಥ್ ಸ್ವಾಗತಿಸಿದ್ದಾರೆ.
ಬುಧವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ""ಥಿಂಕ್ ಗ್ಲೋಬಲಿ, ಆ್ಯಕ್ಟ್ ಲೋಕಲಿ ಅನ್ನುವ ಆಶಯಕ್ಕೂ ಮೋದಿ ನೀರೆರೆದಿದ್ದಾರೆ. ಸ್ಥಳೀಯ ವಾಣಿಜ್ಯ ಚಟುವಟಿಕೆಗೆ ಗ್ಲೋಬಲ್ ಮಾರ್ಕೆಟ್ ಆರಂಭವಾಗಬೇಕಿದೆ. ಈ ವಿಶೇಷ ಪ್ಯಾಕೇಜ್ನಲ್ಲಿ ಎಲ್ಲರಿಗೂ ಅನುಕೂಲ ಆಗಲಿದೆ'' ಎಂದು ಹೇಳಿದರು.
ಇಡೀ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯನ್ನು ಪ್ರಶಂಸಿಸಿದೆ ಎಂದರು. ಈ ಒಲವು ನೋಡಿದರೆ ಈ ಪ್ಯಾಕೇಜ್ ಅನುಷ್ಠಾನ ಆಗುತ್ತೆ ಅನ್ನುವ ನಂಬಿಕೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಆರ್ಥಿಕ ಶಿಸ್ತು ರೂಪಿಸಬೇಕು
ಕರ್ನಾಟಕ ರಾಜ್ಯದಲ್ಲಿ ಆರ್ಥಿಕ ಶಿಸ್ತು ರೂಪಿಸಬೇಕಿದೆ. ನಮ್ಮ ಬಜೆಟ್ ಹಣದಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಬಳಕ್ಕೆ 21% ಹೋಗುತ್ತದೆ. ರಾಜ್ಯದ ಪಿಂಚಣಿದಾರರಿಗೆ 9% ಹಣ ಹೋಗುತ್ತದೆ. ಇದನ್ನೆಲ್ಲ ನಿಯಂತ್ರಣ ಮಾಡಬೇಕಿದೆ ಎಂದರು.
ಹಾಗಂತ ಸಂಬಳ ಕಟ್ ಮಾಡಿ ಅಥವಾ ಪಿಂಚಣಿ ಕಟ್ ಮಾಡಿ ಅಂತ ನಾನು ಹೇಳುವುದಿಲ್ಲ. ಬೇರೆ ಬೇರೆ ರೂಪದಲ್ಲಿ ಅನಗತ್ಯ ಖರ್ಚು ನಿಯಂತ್ರಣ ಮಾಡಬೇಕು. ನಾವೆಲ್ಲರೂ ತ್ಯಾಗ ಮಾಡಲು ಸಿದ್ದರಾಗಬೇಕು. ಇಡೀ ಭಾರತ ತ್ಯಾಗ ಮಾಡಲು ಸಿದ್ದವಾಗಬೇಕು ಎಂದು ತಿಳಿಸಿದರು.

ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು
ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವಿನ ವಾಕ್ಸಮರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ""ಬಹಿರಂಗವಾಗಿ ಅಸಮಾಧಾನ ತೋರಿಸಿಕೊಳ್ಳುವುದು ಬೇಡ, ಅಂತರಂಗದಲ್ಲಿ ಇರಲಿ ಎಂದು ಶಾಸಕ ಹಾಗೂ ಸಂಸದರಿಗೆ ಸಲಹೆ ನೀಡಿದರು.
ನಿಮ್ಮ ಅಸಮಾಧಾನ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿರಲಿ. ಪಕ್ಷದಲ್ಲಿ ಶಾಸಕ ರಾಮದಾಸ್ ಹಿರಿಯರಿದ್ದಾರೆ. ಜಿಲ್ಲಾ ಮಂತ್ರಿಗಳು, ಎಲ್ಲರ ಬಳಿ ಚರ್ಚಿಸಿ ನಿಮ್ಮ ಸಮಸ್ಯೆ ಬಗಹರಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಹುಣಸೂರು ಪ್ರತ್ಯೇಕ ಜಿಲ್ಲೆಗೆ ಒತ್ತಾಯ
ಆಡಳಿತವು ಪರಿಣಾಮಕಾರಿಯಾಗಿ ಮತ್ತು ಚುರುಕಾಗಲು ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕಿದೆ ಎಂದು ಒತ್ತಾಯಿಸಿದರು. ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸ್ ಹೆಸರನ್ನು ಅಜರಾಮರಗೊಳಿಸಲು ಹುಣಸೂರು ಜಿಲ್ಲೆ ಆಗಲೇಬೇಕಿದೆ ಎಂದರು.
ಮೈಮುಲ್ ನಲ್ಲಿ ಅವ್ಯವಹಾರ ಆರೋಪ; ಸಾರಾ ಮಹೇಶ್ ಬೆಂಬಲಿಸಿದ ವಿಶ್ವನಾಥ್
ಇದಕ್ಕಾಗಿ ಕೋವಿಡ್-19 ಮುಗಿದ ನಂತರ ಉನ್ನತ ಹೋರಾಟ ಸಮಿತಿಯನ್ನೂ ರಚನೆ ಮಾಡುತ್ತೇವೆ. ಏಕೆ ಹುಣಸೂರು ಜಿಲ್ಲೆ ಆಗಬೇಕೆಂಬುದನ್ನು ಜನರಲ್ಲಿ ಅಭಿಪ್ರಾಯ ಮೂಡಿಸುತ್ತೇವೆ ಎಂದರು.

ಸೋತವರು ಜನಪರ ಹೋರಾಟ ಮಾಡುವಂತಿಲ್ಲವೇ?
ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವುದಕ್ಕೆ ವಿಶ್ವನಾಥ್ ಯಾರು? ಎಂದು ಶಾಸಕ ಸಾ.ರಾ ಮಹೇಶ್ ಪ್ರಶ್ನೆ ಮಾಡಿದ್ದಾರೆ. ಹಾಗಿದ್ದರೆ ಕೆ.ಆರ್ ನಗರದ ಸಾಲಿಗ್ರಾಮ ಪ್ರತ್ಯೇಕ ತಾಲ್ಲೂಕಿಗೆ ಏಕೆ ಶಿಫಾರಸು ಮಾಡಿದಿರಿ ಎಂದು ಕೇಳಿದರು. ಗೆದ್ದವರು ಮಾತ್ರ ಜನರಿಗೆ ಉತ್ತರದಾಯಿತ್ವವೇ? ಸೋತವರು ಜನಪರ ಹೋರಾಟ ಮಾಡುವಂತಿಲ್ಲವೇ? ಎಂದು ಪ್ರಶ್ನಿಸಿದ ವಿಶ್ವನಾಥ್, ವಕೀಲ, ಶಾಸಕ, ಸಚಿವ, ಸಂಸದನಾಗಿ ನನಗೂ ಅನುಭವಿದೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications