ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ವಧು-ವರರಿಗೆ ಕಿವಿಮಾತು ಹೇಳಿದ ಮಾಜಿ ಸಿಎಂ
ಮೈಸೂರು, ಫೆಬ್ರವರಿ 9: ನೂತನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ವಧು-ವರರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶುಭಕೋರಿದರು. ಮೈಸೂರಿನ ಶ್ರೀಕ್ಷೇತ್ರ ಸುತ್ತೂರಿನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾವೆಲ್ಲ ಮನುಷ್ಯರು, ಮನುಷ್ಯನಾಗಿ ಹುಟ್ಟಬೇಕು ಮನುಷ್ಯನಾಗಿ ಸಾಯಬೇಕು. ಮನುಷ್ಯ ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟಿ, ಬೆಳೆಯುತ್ತ ಅಲ್ಪ ಮಾನವನಾಗಿ ಆಗಿ ಬೀಡುತ್ತಾನೆ ಎಂದರು.
ನಾವೆಲ್ಲ ಕುವೆಂಪು ಅವರ ಆಶಯದಂತೆ ವಿಶ್ವಮಾನವರಂತಾಗಬೇಕು. ಸರಳವಾಗಿ ಮದುವೆ ಆಗಬೇಕು, ಈಗಿನವರು ಕೋಟಿಗಟ್ಟಲೆ ಮದುವೆಗೆ ಖರ್ಚು ಮಾಡುತ್ತಾರೆ. ನಮ್ಮ ಮನೆಯಲ್ಲಿ ಹಳೆ ಸಂಪ್ರದಾಯದಂತೆ ಸರಳವಾಗಿ ಮದುವೆ ಮಾಡ್ತೀವಿ, ನಮ್ಮ ಕುಟುಂಬದ ಮದುವೆನಾ ನಮ್ಮ್ ಊರಿನಲ್ಲೇ ಮಾಡಿದ್ದೇನೆ ಎಂದರು.
ಮೈಸೂರಲ್ಲಿ ಉದ್ಘಾಟನೆಯಾಯ್ತು ರಾಗಿ ಬೆಂಬಲ ಬೆಲೆ ಕೇಂದ್ರ
ಎಲ್ಲರೂ ಸರಳ ಮದುವೆಯಾಗಬೇಕು
ನನ್ ತಮ್ಮ, ಅಣ್ಣನ ಮಕ್ಕಳು ಸೇರಿದಂತೆ ಎಲ್ಲರ ಮದುವೆಯನ್ನು ನಮ್ಮ ಊರಿನಲ್ಲೇ ಸರಳವಾಗಿ ಮಾಡಿದ್ದೇನೆ, ಎಲ್ಲೂ ಹೊರಗಡೆ ಮಾಡಿಲ್ಲ. ಎಲ್ಲರೂ ಸರಳ ಮದುವೆಯಾಗಬೇಕು ಎಂದು ಕಿವಿಮಾತು ಹೇಳಿದರು. ಎಲ್ಲ ವಧು-ವರರಿಗೂ ಒಳ್ಳೆಯದಾಗಲಿ, ಮಕ್ಕಳನ್ನು ಕಡಿಮೆ ಮಾಡಿಕೊಳ್ಳಿ, ಮಕ್ಕಳಿಗೆಲ್ಲ ಶಿಕ್ಷಣ ಕೊಡಿಸಿ ಎಂದು ಹೇಳುವ ಮೂಲಕ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನಗೆ ಚಟಾಕಿ ಹಾರಿಸಿದರು. ನಾನು ಒಂದು ಗಂಟೆ ತಡವಾಗಿ ಬಂದಿದ್ದೇನೆ. ಸಂಘಟಕರಿಗೆ ತಿಳಿಸಿದ್ದೆ, ನಾನು ತಡವಾಗಿ ಬರುತ್ತೇನೆಂದು ಸ್ವಾಮಿಜಿಗಳಿಗೂ ತಿಳಿಸಿ ಎಂದಿದ್ದೆ. ನಾನು ಪ್ರತಿ ವರ್ಷ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಬರುತ್ತಿದ್ದೆ. ಈ ವರ್ಷ ಕೊರೊನಾ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಯಿತು. ಆದ್ದರಿಂದ ನಾನು ಬರಲು ಸಾಧ್ಯವಾಗಲಿಲ್ಲ. ಇಂದಿನ ಸರಳ ಕಾರ್ಯಕ್ರಮಕ್ಕೆ ಬರಲು ಹಿಂದೇಟು ಹಾಕಿದ್ದೆ, ಆದರೆ ಬೇರೆ ಕಾರ್ಯಕ್ರಮ ರದ್ದು ಮಾಡಿ ಬಂದಿದ್ದೇನೆ ಎಂದು ತಿಳಿಸಿದರು.
ಸುತ್ತೂರು ಮಠ ನನ್ನ ಆತ್ಮೀಯ ಮಠಗಳಲ್ಲಿ ಒಂದು
ವರುಣಾ ನನ್ನ ಕ್ಷೇತ್ರ ಅಂದುಕೊಂಡಿದ್ದೇನೆ. ಈ ಕ್ಷೇತ್ರದಿಂದಲೇ ನಾನು ಗೆದ್ದು ಸಿಎಂ ಆಗಿದ್ದು, ಈಗ ನನ್ನ ಮಗ ಪ್ರತಿನಿಧಿಸುತ್ತಿದ್ದಾನೆ. ಸುತ್ತೂರು ಶ್ರೀಗಳು ನನ್ನನ್ನು ಯಾವಾಗಲೂ ಪ್ರೀತಿ ವಿಶ್ವಾಸದಿಂದ ಮತನಾಡಿಸುತ್ತಾರೆ. ಸುತ್ತೂರು ಶ್ರೀಗಳು ನನ್ನನ್ನು ಎಲ್ಲಿ ಕಂಡರೂ ಮಠಕ್ಕೆ ಬನ್ನಿ ಎಂದು ಹೇಳುತ್ತಾರೆ. ಒಳ್ಳೆಯ ಸಲಹೆಗಳನ್ನು ಕೊಡುತ್ತಾರೆ. ಸುತ್ತೂರು ಮಠ ನನ್ನ ಆತ್ಮೀಯ ಮಠಗಳಲ್ಲಿ ಒಂದು, ಹಾಗೆಯೇ ಸಿದ್ಧಗಂಗಾ ಮಠವು ನನ್ನನ್ನು ಆತ್ಮೀಯವಾಗಿ ಮತನಾಡಿಸುತ್ತಾರೆ ಎಂದು ಹೇಳಿದರು.
ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ
ಸುತ್ತೂರು ಮಠಕ್ಕೂ, ಸಿದ್ದೇಶ್ವರ ಮಠಕ್ಕೂ ಅಂದಿನಿಂದ ಅವಿನಾಭಾವ ಸಂಬಂಧ ಇದೆ ಎಂದು ಹೇಳುವಾಗ, ನಾನು ದೀರ್ಘವಾಗಿ ಭಾಷಣ ಮಾಡಲ್ಲ, ತಡವಾಗಿ ಬಂದಿರುವುದರಿಂದ ನವ ವಧು-ವರರಿಗೆ ತೊಂದರೆಯಾಗಿ ಬಿಡುತ್ತದೆ ಎಂದು ಹೇಳಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಹಾಸ್ಯ ಚಟಾಕಿ ಹಾರಿಸಿದರು. ಸರಳ ವಿವಾಹಗಳ ಜೊತೆಗೆ ಅಂತರ್ಜಾತಿ ವಿವಾಹಗಳಾದರೆ ಇನ್ನೂ ಸ್ವಾಗತ. ಜಾತಿರಹಿತ ಸಮ ಸಮಾಜದ ನಿರ್ಮಾಣಕ್ಕೆ ಜಾತ್ಯತೀತ ರಾಜ್ಯ, ರಾಷ್ಟ್ರ ಕಟ್ಟುವುದಕ್ಕೆ ಈ ರೀತಿಯ ಅಂತರ್ಜಾತೀಯ ಮದುವೆಗಳು ಬಹಳ ಅಗತ್ಯವೆಂದರು.
ಒಂದೇ ಕಡೆ ಕುಳಿತುಕೊಳ್ಳುವುದೇ ಸಮಸಮಾಜ
ಬಸವಣ್ಣನವರು ಮೇಲ್ಜಾತಿ ಮತ್ತು ಅಸ್ಪೃಶ್ಯ ಜಾತಿಗಳ ನಡುವೆ ಅಂದು ಮದುವೆ ಮಾಡಿಸಿದರು. ಅವರ ದೂರ ದೃಷ್ಟಿಯನ್ನು ಅರ್ಥಮಾಡಿಕೊಳ್ಳಲೇಬೇಕು. ಜನಪ್ರತಿನಿಧಿಗಳ ಸಭೆಯನ್ನು ಅನುಭವ ಮಂಟಪವಾಗಿ ನಡೆಸಿದರು. ಬಸವಣ್ಣನವರ ಅನುಭವ ಮಂಟಪ ಮಾಡಲು ಸರ್ಕಾರ ಮುಂದಾಗಿದೆ ಅದು ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟರು. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ನಾಲ್ಕು ವರ್ಣಗಳನ್ನು ಮಾಡಿದ್ದಾರೆ. ಪುಷ್ಪಾ ಶೆಡ್ಯೂಲ್ ಕ್ಯಾಸ್ಟ್ ನವರು, ಸೋಮಶೇಖರ್ ಒಕ್ಕಲಿಗ, ನಾನು ಕುರುಬ ಎಲ್ಲರೂ ಒಟ್ಟಾಗಿ ಕುಳಿತಿದ್ದೇವೆ. ಯಾವುದೇ ವ್ಯತ್ಯಾಸಗಲಿಲ್ಲದೆ ಒಂದೇ ಕಡೆ ಕುಳಿತುಕೊಳ್ಳುವುದೇ ಸಮಸಮಾಜ ಎಂದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನೆನಪುಗಳನ್ನು ಮೆಲುಕು ಹಾಕಿದ ಮಾಜಿ ಸಿಎಂ
ಸುತ್ತೂರು ರಾಜೇಂದ್ರ ಶ್ರೀಗಳನ್ನು ಮೊದಲು ಭೇಟಿ ಮಾಡಿದ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ, ""ಬೆಳಗುಂದಕ್ಕೆ ನಾನು ಕುಣಿಯೋದಕ್ಕೆ ಬಂದಿದ್ದೇ, ಆಗ ಮೊಟ್ಟ ಮೊದಲು ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೆ. ವೀರಮಕ್ಕಳ ಕುಣಿತದಲ್ಲಿ ನಾನು ಮುಂದೆ ಇದ್ದೆ. ಸ್ವಾಮಿಜಿಗಳ ಮುಂದೆ ವೀರ ಕುಣಿತ ಮಾಡಿದ್ದೆ, ಆಗ ಸ್ವಾಮಿಜಿಗಳು ನನಗೆ 5 ರೂ. ನೀಡಿದರು. 5 ರೂ. ನಲ್ಲಿ ಕುರಿ ತೆಗೆದುಕೊಂಡಿದ್ದೆ. ಅದಾದ ಬಳಿಕ ನಾನು ಎಂಎಲ್ಎ ಆದ ನಂತರ ಸ್ವಾಮೀಜಿಗಳನ್ನು ಭೇಟಿ ಮಾಡಿದೆ. ದೇಶಿಕೇಂದ್ರ ಸ್ವಾಮೀಜಿಗಳು ನನಗೆ ಯಾವಾಗಲೂ ಪ್ರೀತಿ ವಿಶ್ವಾಸ ತೋರಿಸುತ್ತಾರೆ, ನನಗೆ ಯಾವಾಗಲೂ ಸಹಕಾರ ನೀಡುತ್ತಾರೆ'' ಎಂದು ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು.