"ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ಬಗ್ಗೆ ಜಾಸ್ತಿ ಮಾತಾಡ್ತಾರೆ"
ಮೈಸೂರು, ಫೆಬ್ರವರಿ 3: ಜೆಡಿಎಸ್ ಒಂದು ಪೊಲಿಟಿಕಲ್ ಪಾರ್ಟಿನೆ ಅಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಪೊಲಿಟಿಕಲ್ ಪಾರ್ಟಿ ಅಲ್ಲದ ಮೇಲೆ ಪದೇ ಪದೇ ಜೆಡಿಎಸ್ ಬಗ್ಗೆ ಯಾಕೆ ಮಾತನಾಡುತ್ತಾರೆ, ಮಾತನಾಡುವ ಅವಶ್ಯಕತೆಯೇ ಇಲ್ಲವಲ್ಲ. ಸಿದ್ದರಾಮಯ್ಯಗೆ ಅವರ ಪಕ್ಷಕ್ಕಿಂತ ಜೆಡಿಎಸ್ ಬಗ್ಗೆ ಮಾತನಾಡೋದೆ ಜಾಸ್ತಿ ಆಗಿದೆ ಎಂದರು.
ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲ!
ನಮಗೆ ಐಡಿಯಾಲಾಜಿ ಇದೆ ಅವರಿಗೆ ಐಡಿಯಾಲಾಜಿ ಕೊರತೆ ಇದೆ. ಜೆಡಿಎಸ್ ನ ಶಕ್ತಿ ಏನು ಎಂದು ನಮ್ಮ ಕಾರ್ಯಕರ್ತರು ತಿಳಿಸಿದ್ದಾರೆ ಎಂದು ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು. ಇದೇ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡರ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಜನರಿಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ. ಇವರ ಪಕ್ಷ ನಿಷ್ಠೆ ಎಷ್ಟಿದೆ ಅಂತ ಕಾರ್ಯಕರ್ತರಿಗೆ ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದರು.
ಜಿ.ಟಿ ದೇವೇಗೌಡರ ಬಗ್ಗೆ ತೀರ್ಮಾನ ಮಾಡಿಲ್ಲ
ಜಿ.ಟಿ ದೇವೇಗೌಡರ ಬಗ್ಗೆ ನಾವು ಏನನ್ನು ತೀರ್ಮಾನ ಮಾಡಿಲ್ಲ. ಅವರೇ ಹೇಳಿದ್ದರು, ಪಕ್ಷ ಸಂಘಟನೆಗೆ ಸಮಯ ಕೊಟ್ಟಿರಲಿಲ್ಲ ಅಂತ. ಈಗ ಸಚಿವ ಸ್ಥಾನ ಇಲ್ಲ ಅದಕ್ಕೆ ಕ್ಷೇತ್ರದ ಕೆಲಸ ಮಾಡುತ್ತಿದ್ದಾರೆ. ಮಾಡಿಕೊಂಡು ಇರಲಿ, ಅವರ ಬಗ್ಗೆ ನಾನೇನು ವ್ಯಂಗ್ಯ ಮಾಡ್ತಿಲ್ಲ ಎಂದರು. ಮೈದಾನ ದೊಡ್ಡದಾಗಿದೆ ಯಾರಾದರೂ ಕಾರ್ಯಕ್ರಮ ಮಾಡಬಹುದು. ಆದರೆ ಪ್ರತಿ ದಿನ ಹೂ ಮೂಡಿಸಲು ಆಗೋಲ್ಲ. ಸಾ.ರಾ ಮಹೇಶ್ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿ ಜೊತೆ ಮೆರವಣಿಗೆ ಹೋಗ್ತಾರೆ. ಹಾಗಾದರೆ ಇವರಿಗೆ ಪಕ್ಷ ನಿಷ್ಠೆ ಎಷ್ಟಿದೆ ಅಂತ ಕಾರ್ಯಕರ್ತರು ಮಾತನಾಡುವುದಿಲ್ಲವಾ. ಅವರದ್ದೆ ದೊಡ್ಡ ಶಕ್ತಿ ಇದೆ. ಅವರು ಶಕ್ತಿ ಪ್ರದರ್ಶನ ಮಾಡಿಕೊಂಡು ಅವರ ದಾರಿಯಲ್ಲಿ ಹೋಗಲಿ. ನಾವು ನಮ್ಮ ದಾರಿಯಲ್ಲಿ ಹೋಗ್ತಿವಿ ಎಂದು ಜಿಡಿಟಿ ವಿರುದ್ಧ ಕಿಡಿಕಾರಿದರು.
ನಾನು ಜೆಡಿಎಸ್ ಗೆ ಜಿಟಿಡಿ ಅವರನ್ನು ಸೇರಿಸಲ್ಲ
ಜಿಟಿ ದೇವೇಗೌಡರು ಬೆಳಗ್ಗೆ ಎದ್ದು ಕಾಂಗ್ರೆಸ್, ಮಧ್ಯಾಹ್ನ ಜೆಡಿಎಸ್ ಹಾಗೂ ಸಂಜೆಯಾಗುತ್ತಲೇ ಬಿಜೆಪಿ ಕಡೆ ಹೋಗುತ್ತಾರೆ. ಕೊನೆಗೆ ಎಲ್ಲೂ ಗೀಟಲಿಲ್ಲ ಅಂದರೆ ಮತ್ತೆ ಜೆಡಿಎಸ್ ಬಾಗಿಲಿಗೆ ಬರುತ್ತಾರೆ, ಅದು ಚೆನ್ನಾಗಿ ಗೊತ್ತು. ನನ್ನ ಕಾರ್ಯಕರ್ತರ ಪರಿಸ್ಥಿತಿ ಏನಾಗಬೇಕು. ನಾನು ರಾಜಕೀಯದಲ್ಲಿ ಇರುವವರೆಗೂ ಮತ್ತೆ ಜಿಟಿಡಿನ ಪಕ್ಷಕ್ಕೆ ಸೇರಿಕೊಳ್ಳೋದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
ಬಿಜೆಪಿ ಪಕ್ಷಕ್ಕೆ ಕಂಬಳಿ ಹಾಸಿದ ಕುಮಾರಸ್ವಾಮಿ; ಹೆಚ್. ವಿಶ್ವನಾಥ್
ಅವರು ಸ್ವತಂತ್ರ ಎಲ್ಲಿ ಬೇಕಾದರೂ ಹೋಗಬಹುದು
ಮೈಸೂರು ಜಿಲ್ಲೆಯನ್ನು ನಿಮ್ಮ ಮುಂದಾಳತ್ವದಲ್ಲಿ ನಡೆಸಿ ಎಂದು ಸಾ.ರಾ ಮಹೇಶ್ ಹೋಗಿ ಮಾತನಾಡಿದ್ದರು. ಭೇಟಿ ಮಾಡಿದ್ದ ವಿಷಯ ನನಗೂ ಗೊತ್ತು. ಸಾ.ರಾ ಕೂಡ ಏನಾದರೂ ಮಾಡಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಅವರು ಈಗ ಸ್ವತಂತ್ರ ಎಲ್ಲಿ ಬೇಕಾದರೂ ಹೋಗಬಹುದು, ಈ ವಿಷಯವನ್ನು ಇನ್ನು ಎಳೆದುಕೊಂಡು ಹೋಗಲ್ಲ ಎಂದು ಎಚ್ಡಿಕೆ ಟಾಂಗ್ ನೀಡಿದರು.
ಶಾಸಕರಿಗೆ ಆಹ್ವಾನ ನೀಡಬೇಕು
ನಾನು ಪಕ್ಷಕ್ಕಿಂತ ಬೆಳೆದಿದ್ದೇನೆ ಅಂತ ಅವರು ಅಂದುಕೊಂಡಿದ್ದಾರೆ. ಆದರೆ ಪಕ್ಷಕ್ಕಿಂತ ಬೆಳೆಯೋಕೆ ಅವರಿಗೂ ಆಗಲ್ಲ, ನನಗೂ ಆಗಲ್ಲ. ಕೆ.ಆರ್.ನಗರದಲ್ಲಿ ಸಹಕಾರಿ ಬ್ಯಾಂಕಿನ ಕಾರ್ಯಕ್ರಮ ಆಗಿದ್ದರೂ, ಬ್ಯಾಂಕಿಗೆ ಸರ್ಕಾರದ ಷೇರು ಇರುತ್ತದೆ. ಹಾಗಾದರೆ ಆ ಸರ್ಕಾರಿ ಕಾರ್ಯಕ್ರಮಕ್ಕೆ ಶಾಸಕರಿಗೆ ಆಹ್ವಾನ ನೀಡಬೇಕು. ಮೊನ್ನೆ ಶರತ್ ಬಚ್ಚೇಗೌಡರ ಕಾರ್ಯಕ್ರಮದ ಹಕ್ಕುಚ್ಯುತಿ ನೋಡಿಲ್ಲವೇ? ಎಂದು ಪ್ರಶ್ನಿಸಿದರು.
ಡ್ಯಾಮೆಜ್ ಯಾರಿಗೆ ಆಯ್ತು ಅಂತ ಇತಿಹಾಸ ಇದೆ
ಅವರು ಬೆಳೆದಿದ್ದಾರೆ, ಅವರಿಲ್ಲದಿದ್ದರೆ ಜಿಲ್ಲೆಯ ರಾಜಕಾರಣವೇ ನಡೆಯೋಲ್ಲ ಅಂದುಕೊಂಡಿದ್ದಾರೆ. ಅವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗೋಲ್ಲ. 2008ರಲ್ಲಿ ಏನಾಯ್ತು ಅಂತ ಗೊತ್ತಿಲ್ಲವೇ. ಡ್ಯಾಮೆಜ್ ಆಗಿದ್ದು ಪಕ್ಷಕ್ಕಲ್ಲ, ಡ್ಯಾಮೆಜ್ ಯಾರಿಗೆ ಆಯ್ತು ಅಂತ ಇತಿಹಾಸ ಇದೆ ಎಂದು ಎಚ್ಡಿ ಕುಮಾರಸ್ವಾಮಿ ಅವರು ಜಿಟಿಡಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ಉಚ್ಚಾಟಿಸಿದರೆ ಅನುಕಂಪ ಗಿಟ್ಟಿಸಿಕೊಳ್ಳುತ್ತಾರೆ
ಜೆಡಿಎಸ್ನಿಂದ ಜಿಟಿಡಿ ಅವರನ್ನು ಉಚ್ಚಾಟನೆ ಮಾಡುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಚ್.ಡಿ ಕುಮಾರಸ್ವಾಮಿ, ಉಚ್ಚಾಟಿಸಿದರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಆದರೆ ಮೈಸೂರು ಭಾಗದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪಕ್ಷದ ಕಾರ್ಯಕರ್ತರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ. ನಾನು ಉಚ್ಚಾಟನೆ ಮಾಡಿದರೆ ಜನರ ಅನುಕಂಪದ ಲಾಭ ಗಿಟ್ಟಿಸಬಹುದೆಂದು ಕಾಯುತ್ತಿದ್ದಾರೆ. ಯಾವಾಗ ಕ್ರಮ ತೆಗೆದುಕೊಳ್ಳಬೇಕು ಅವಾಗ ತೆಗೆದುಕೊಳ್ಳುತ್ತೇನೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದರು.