ನಾಗರಹೊಳೆಯಲ್ಲಿ ಆನೆ ದಾಳಿ; ಅರಣ್ಯ ವೀಕ್ಷಕ ಸಾವು
ಮೈಸೂರು, ಡಿಸೆಂಬರ್ 25: ನಾಗರಹೊಳೆ ಉದ್ಯಾನದಲ್ಲಿ ಆನೆ ಹಠಾತ್ ದಾಳಿ ನಡೆಸಿದ ಪರಿಣಾಮ ಒಬ್ಬರು ಬಲಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಬೀಟ್ಗೆ ತೆರಳುತ್ತಿದ್ದ ವೇಳೆ ಸಲಗ ಮೂವರ ಮೇಲೆ ದಾಳಿ ಮಾಡಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ಅರಣ್ಯ ವೀಕ್ಷಕ ಗುರುರಾಜ್ (52) ಆನೆಯ ದಾಳಿಯಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಾಚರ್ ಅಶೋಕ ಸಲಗದ ದಾಳಿಯಿಂದ ಗಾಯಗೊಂಡಿದ್ದು, ಕೊಡಗಿನ ಕುಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಮಧ್ಯಾಹ್ನ ನಾಗರಹೊಳೆ ಡಾರ್ಮೆಂಟ್ರಿ ಬಳಿಯಿಂದ ಮೂವರು ಬೀಟ್ ಆರಂಭಿಸಿದ್ದರು. ಒಂದು ಕಿ. ಮೀ. ದೂರದ ಬೈಸನ್ ಹಡ್ಲು ಎಂಬ ಪ್ರದೇಶದಲ್ಲಿ ಮೂವರ ಮೇಲೆ ಸಲಗ ದಿಢೀರ್ ದಾಳಿ ನಡೆಸಿದೆ.

ದಂತದ ತಿವಿತ, ಹೊಟ್ಟೆಯ ಭಾಗವನ್ನು ಆನೆ ತುಳಿದಿದ್ದರಿಂದ ಗುರುರಾಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಶೋಕ್ ಅವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಣಸೂರಿನಲ್ಲಿ ವಾಸವಾಗಿದ್ದ ಗುರುರಾಜ್ 1991ರಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕ್ಷೇಮಾಭಿವೃದ್ಧಿ ನೌಕರರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
"ಗುರುರಾಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಶೋಕ್ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ" ಎಂದು ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ.
ನಾಗರಹೊಳೆ ಹುಲಿ ರಕ್ಷಿತಾರಣ್ಯದ ನಿರ್ದೇಶಕರಾಗಿದ್ದ ಮಣಿಕಂಠನ್ 2018ರಲ್ಲಿ ಕಾಡನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.











Click it and Unblock the Notifications