ಹಾಡಿ ನಿವಾಸಿಗೆ ಗುಂಡೇಟು; ಅರಣ್ಯ ಇಲಾಖೆ ವಿರುದ್ಧ ಚೇತನ್ ಆಕ್ರೋಶ
ಮೈಸೂರು, ಡಿಸೆಂಬರ್ 02; ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪ ಬಳಿಯ ರಾಣಿಗೇಟ್ ಜೇನು ಕುರುಬರ ಹಾಡಿ ನಿವಾಸಿ ಬಸವ ಎಂಬ ವ್ಯಕ್ತಿಗೆ ಗುಂಡೇಟು ಹೊಡೆದಿರುವ ಅರಣ್ಯ ಇಲಾಖೆ ವಿರುದ್ಧ ನಟ ಚೇತನ್ ಅಹಿಂಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಪ್ರಕರಣವನ್ನು ತಿರುಚುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ಆದಿವಾಸಿಗಳ ಬವಣೆಗೆ ಕೊನೆ ಇಲ್ಲದಂತಾಗಿದೆ. ಅರಣ್ಯ ಇಲಾಖೆ ದಬ್ಬಾಳಿಕೆಯಿಂದ ಒಬ್ಬ ಆದಿವಾಸಿ ಯುವಕನಿಗೆ ಗುಂಡೇಟು ಹೊಡೆದು, ಆ ಪ್ರಕರಣವನ್ನು ತಿರುಚುವ ಕೆಲಸ ಆಗುತ್ತಿದೆ" ಎಂದು ದೂರಿದರು.
"ಇದರ ವಿರುದ್ಧ ಹೋರಾಡಿ ನ್ಯಾಯಾ ಕೊಡಿಸಲು ಮೈಸೂರಿಗೆ ಬಂದಿದ್ದೇನೆ. ನಮ್ಮ ಮನವಿಯಂತೆ ಅರಣ್ಯ ಇಲಾಖೆ ಮೇಲೆ ಎಫ್ಐಆರ್ ದಾಖಲಿಸಿ, ನಿಷ್ಪಕ್ಷಪಾತ ತನಿಖೆಯಾಗದಿದ್ದರೆ ಮೈಸೂರಿನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು. ಆದಿವಾಸಿ ಯುವಕನ ನ್ಯಾಯಾಕ್ಕಾಗಿ ರೈತ ಸಂಘ, ಮಹಿಳಾ, ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳನ್ನು ಸೇರಿ ಬೃಹತ್ ಹೋರಾಟ ನಡೆಸಲಿವೆ" ಎಂದು ಹೇಳಿದರು.

ಆದಿವಾಸಿಗಳೊಂದಿಗೆ ಕಾರ್ಯ ನಿರ್ವಹಿಸುವ ಗ್ರೀನ್ ಇಂಡಿಯಾ ನಿರ್ದೇಶಕ ಮಹೇಂದ್ರ ಕುಮಾರ್ ಮಾತನಾಡಿ, "ಕ್ಷುಲಕ ಕಾರಣಕ್ಕಾಗಿ ಅರಣ್ಯ ಇಲಾಖೆ ವಾಚ್ ಮ್ಯಾನ್ ಹಾಡಿ ನಿವಾಸಿ ಬಸವ ಅವರಿಗೆ ಗುಂಡು ಹಾರಿಸಿರುವುದು ಖಂಡನೀಯ. ಬಸವ ಗಂಧದ ಮರ ಕಡಿದು ಸಾಗಿಸುತ್ತಿದ್ದ ಎಂಬ ಅರಣ್ಯ ಇಲಾಖೆಯ ಆರೋಪ ನಿರಾಧಾರ. ಆ ಜಾಗದ ಸುತ್ತಮುತ್ತ ಎಲ್ಲಿಯೂ ಗಂಧದ ಮರ ಬೆಳೆದಿಲ್ಲ" ಎಂದರು.
"ಹೀಗಿದ್ದರೂ ಆತನ ಮೇಲೆ ಸುಳ್ಳು ಆರೋಪ ಹೊರಿಸಿ ಆತನ ಮೇಲೆಯೇ ಎಫ್ಐಆರ್ ದಾಖಲಿಸಿದ್ದಾರೆ. ನಾವು ದೂರು ನೀಡಿದರೆ ಸ್ವೀಕರಿಸುತ್ತಿಲ್ಲ. ಇದು ಏಕಮುಖದ ತನಿಖೆಯಾಗುತ್ತಿದೆ. ಎರಡು ಬದಿಯಿಂದ ತನಿಖೆಯಾಗಬೇಕಾದರೆ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧವೂ ಎಫ್ಐಆರ್ ದಾಖಲಾಗಬೇಕು. ಸಮಗ್ರವಾಗಿ ತನಿಖೆಯಾಗಬೇಕೆಂದು" ಎಂದು ಆಗ್ರಹಿಸಿದರು.
ಘಟನೆ ಹಿನ್ನೆಲೆ; ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ರಾಣಿ ಗೇಟ್ ಜೇನು ಕುರುಬರ ಹಾಡಿ ನಿವಾಸಿ ಬಸವ ಎಂಬಾತ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಜೋಳ ಕಟಾವು ಮಾಡಿ, ಪಕ್ಕದ ಜಮೀನಿಗೆ ಬಹಿರ್ದೆಸೆಗೆ ಹೋಗಿದ್ದಾಗ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.
ಅರಣ್ಯ ಇಲಾಖೆ ವಾಚ್ ಮನ್ ಸುಬ್ರಮಣಿ ಸೇರಿ ಮೂವರಿಂದ ಕೊಲೆಗೆ ಯತ್ನ ಆರೋಪ ಕೇಳಿಬಂದಿದ್ದು, ತನ್ನ ಪತಿಯನ್ನು ಕೊಲೆ ಮಾಡಲು ಯತ್ನಿಸಿದ್ದಾರೆಂದು ಗಾಯಾಳು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಬಸವ ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications