ಆನೆದಂತದಲ್ಲಿ ದೇವರ ಕೆತ್ತನೆ; ಮೂವರನ್ನು ಬಂಧಿಸಿದ ಅರಣ್ಯ ಇಲಾಖೆ
ಮೈಸೂರು, ಡಿಸೆಂಬರ್ 25 : ಆನೆ ದಂತದಲ್ಲಿ ವಿವಿಧ ದೇವರ ಚಿತ್ರಗಳನ್ನು ಕೆತ್ತನೆ ಮಾಡಿ ಮಾರಾಟ ಮಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ಆಲ್ಟೋ ಕಾರು, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಮೈಸೂರಿನ ನಾಯ್ಡು ನಗರದ ಬಳಿ ಮೂವರು ಆನೆ ದಂತವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಅರಣ್ಯ ಇಲಾಖೆಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿದರು.
ಪರಿಶೀಲನೆ ನಡೆಸಿದಾಗ ಮಾರುತಿ ಆಲ್ಟೋ ಕಾರಿನಲ್ಲಿ ಕೆತ್ತನೆ ಮಾಡಿರುವ ಆನೆಯ ಮೂರು ದಂತ ಇರುವುದು ಬೆಳಕಿಗೆ ಬಂದಿದೆ. ಕೂಡಲೇ ಕಾರಿನಲ್ಲಿದ್ದ ಮೈಸೂರಿನ ನಾಯ್ಡು ನಗರದ ನಿವಾಸಿ ಮನೋಹರ್ (40), ಸುಮಂತ್ (26) ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಶಿವದಾಸ್ (55) ಬಂಧಿಸಲಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆ ದಂತಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ ಒಂದು ಮಾರುತಿ ಆಲ್ಟೋ ಕಾರ್ ಮತ್ತು ಒಂದು ಬೈಕ್ ಸಹ ವಶಕ್ಕೆ ಪಡೆಯಲಾಗಿದೆ. ತನಿಖೆಯನ್ನು ಮುಂದುವರೆಸಲಾಗಿದೆ.

ಆರೋಪಿಗಳ ಬಳಿ ಇದ್ದ ಆನೆಯ 3 ದಂತಗಳ ಮೇಲೆ ಆಕರ್ಷಕವಾಗಿ ಕೆತ್ತನೆ ಮಾಡಲಾಗಿದೆ. ಕೆತ್ತನೆಯಲ್ಲಿ ಪರಿಣಿತರಾಗಿರುವ ಕಲಾವಿದರೇ ಕೆತ್ತನೆ ಮಾಡಿರುವ ಶಂಕೆ ಇದೆ. ಎರಡು ದಂತಗಳು ಅಂದಾಜು ಒಂದೂವರೆ ಅಡಿ ಎತ್ತರದ್ದಾಗಿದ್ದರೆ, ಮತ್ತೊಂದು ಒಂದು ಅಡಿ ಎತ್ತರವಿದೆ.












Click it and Unblock the Notifications