ಎಚ್.ಡಿ.ಕೋಟೆಯಲ್ಲಿ ಬಲೆಗೆ ಬಿದ್ದ ಹುಲಿರಾಯ
ಮೈಸೂರು, ಅಕ್ಟೋಬರ್ 10: ಗ್ರಾಮದಲ್ಲಿ ಅಡ್ಡಾಡುತ್ತಾ ರೈತರ ಮೇಲೆ ದಾಳಿ ಮಾಡುತ್ತಾ ಜಾನುವಾರುಗಳಿಗೆ ಕಂಟಕವಾಗಿದ್ದ ಹುಲಿಯನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿರುವ ಘಟನೆ ಮೈಸೂರು ಜಿಲ್ಲೆ, ಎಚ್ ಡಿ ಕೋಟೆ ತಾಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಹೆಡಿಯಾಲ ವಲಯದ ದೊಡ್ಡ ಬರಗಿ ಗ್ರಾಮದಲ್ಲಿ ಅ.9 ರ ಸಂಜೆ ನಡೆದಿದೆ.
ಈ ಹುಲಿ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ಮಹದೇವಮ್ಮ ಎಂಬುವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹುಲಿಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿ ಸ್ಥಳದಲ್ಲಿ ಬೋನು ಇರಿಸಿದ್ದರು. ಅಲ್ಲದೆ ಹುಲಿಯು ಅಡಗಿದ್ದ ಸ್ಥಳದ ಸುತ್ತ ಸಿಬ್ಬಂದಿಗಳನ್ನು ಕಾವಲು ಹಾಕಿ, ಪಶುವೈದ್ಯಾಧಿಕಾರಿಗಳು ಬಂದ ಬಳಿಕ ಕಾರ್ಯಾಚರಣೆ ಆರಂಭಿಸಿದ್ದರು. ಸಂಜೆ 6ರ ಸಮಯದಲ್ಲಿ ಹುಲಿ ಕಾಣಿಸಿಕೊಂಡಾಗ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆ ಹಿಡಿದಿರುವ ಗಂಡು ಹುಲಿ ಸುಮಾರು 9 ವರ್ಷಪ್ರಾಯದ್ದಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಸೆರೆ ಸಿಕ್ಕಿರುವ ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ಕೊಂಡಯ್ಯಲಾಗಿದೆ ಎಂದು ಆರ್ಎಫ್ಒ ಸಂದೀಪ್ ತಿಳಿಸಿದರು. ಕಾರ್ಯಾಚರಣೆಯಲ್ಲಿ ಎಸಿಎಫ್ ಪರಮೇಶ್, ಆರ್ಎಫ್ಒ ಸಂದೀಪ್, ರಾಘವೇಂದ್ರ, ಪಶುವೈದ್ಯರಾದ ಡಾ. ನಾಗರಾಜ್, ಡಾ. ಗೋವಿಂದ, ವನ್ಯಜೀವಿ ಪರಿಪಾಲಕರಾದ ಕೃತಿಕಾ, ಸಿಬ್ಬಂದಿಗಳಾದ ನಿಂಗಪ್ಪ, ರಾಜಪ್ಪ, ಮತ್ತಿತರರು ಇದ್ದರು.












Click it and Unblock the Notifications