ಕುಕ್ಕರಹಳ್ಳಿ ಕೆರೆಯಲ್ಲೂ ಕಾಣಿಸಿಕೊಂಡಿದೆ ನೊರೆ...ಮುಂದೇನು?
ಮೈಸೂರು, ಜುಲೈ 12: ಬೆಂಗಳೂರಿನ ಬೆಳ್ಳಂದೂರು ಕೆರೆ ಅತಿಯಾಗಿ ಕಲುಷಿತಗೊಂಡು ನೊರೆ ಉಕ್ಕಿ ಬೆಂಕಿ ಹೊತ್ತುಕೊಂಡ ಪ್ರಸಂಗ ಇನ್ನೂ ಕಣ್ಣಮುಂದಿದೆ. ಈ ನಡುವೆಯೇ ಮೈಸೂರಿನ ಕುಕ್ಕರಹಳ್ಳಿಯ ಕೆರೆಯಲ್ಲೂ ನೊರೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಎರಡು ದಿನಗಳ ಹಿಂದೆ ಮೈಸೂರಿನ ಪ್ರಾಚೀನ ಕುಕ್ಕರಹಳ್ಳಿ ಕೆರೆಯಲ್ಲಿ ನೊರೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ನೀರಿನ ಮಾದರಿಯನ್ನು ಪಡೆದುಕೊಂಡು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ನಗರದ ಪ್ರಮುಖ ಕೆರೆಯಲ್ಲೊಂದಾದ ಕುಕ್ಕರಹಳ್ಳಿ ಕೆರೆಗೆ ತನ್ನದೇ ಇತಿಹಾಸವಿದೆ. ಆದರೆ ಈ ಪ್ರಾಚೀನ ಕೆರೆಯಲ್ಲಿ ನೊರೆ ಕಾಣಿಸಿಕೊಂಡಿರುವುದು ಕಪ್ಪು ಚುಕ್ಕೆಯಾದಂತಿದೆ.

ಹಲವು ವರ್ಷಗಳಿಂದ ಕೆರೆಗೆ ಮಲಿನ ನೀರು ಸೇರಿಕೊಂಡಿದ್ದು, ಕೆರೆ ಕೆಳಭಾಗದಲ್ಲಿ ಅವೆಲ್ಲವೂ ಶೇಖರವಾಗಿದೆ. ಇದೀಗ ನೊರೆ ಮೂಲಕ ಅದು ಹೊರಬರುತ್ತಿದೆ. ನೊರೆಯ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಪರಿಸರಪ್ರೇಮಿಗಳಲ್ಲಿ ಇದು ಆತಂಕ ಮೂಡಿಸಿದೆ. ಜೊತೆಗೆ ಕೆರೆ ದಡದಲ್ಲಿ ನೊರೆ ಸಂಗ್ರಹವಾಗುತ್ತಿದ್ದು, ಪಕ್ಷಿ ಹಾಗೂ ಜಲಚರಗಳಿಗೆ ಮಾರಕವಾಗುವ ಲಕ್ಷಣವೂ ಗೋಚರಿಸುತ್ತಿದೆ.
ಕಳೆದ ವರ್ಷ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿಯೂ ಇದೇ ರೀತಿ ನೊರೆ ಉತ್ಪತ್ತಿಯಾಗಿ ಸುದ್ದಿಯಾಗಿತ್ತು. ನಂತರ ಅಗರ ಕೆರೆಯಲ್ಲೂ ನೊರೆ ಸಮಸ್ಯೆ ಕಾಣಿಸಿಕೊಂಡಿತ್ತು. ಇದೀಗ ಕುಕ್ಕರಹಳ್ಳಿ ಕೆರೆ ಸರದಿ. ಆದರೆ ಆರಂಭಿಕ ಹಂತದಲ್ಲಿಯೇ ಕಟ್ಟೆಚ್ಚರ ವಹಿಸಿ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಈ ಕೆರೆ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿದೆ. ಇನ್ನು 8 ರಿಂದ 10 ದಿನದೊಳಗಾಗಿ ವರದಿ ಬರಲಿದ್ದು, ಆ ನಂತರ ನೊರೆ ಉತ್ಪತ್ತಿಗೆ ನೈಜ ಕಾರಣವನ್ನು ತಿಳಿದುಕೊಂಡು ಪರಿಹಾರವನ್ನು ಕಂಡುಕೊಳ್ಳಬೇಕಿದೆ.
ಪಡವರ ಹಳ್ಳಿ, ಜಯಲಕ್ಷ್ಮಿಪುರಂ ಅಕ್ಕಪಕ್ಕದ ಭಾಗಗಳಲ್ಲಿ ಅನೇಕ ಕ್ಲಿನಿಕ್ ಹಾಗೂ ವಾಹನಗಳ ಸರ್ವಿಸ್ ಸ್ಟೇಷನ್ ಸೇರಿದಂತೆ ಹಲವು ಕಡೆಯಿಂದ ನೀರು ಚರಂಡಿ ಮೂಲಕ ಕೆರೆ ಸೇರುತ್ತಿರುವುದು ಈ ಘಟನೆಗೆ ಕಾರಣ ಎಂಬುದು ಕೆಲ ಸ್ಥಳೀಯರ ಅಭಿಪ್ರಾಯ.
ಕುಕ್ಕರಹಳ್ಳಿ ಕೆರೆಗೆ ಒಳಚರಂಡಿ ನೀರು ಸೇರುವುದನ್ನು ತಡೆಯಲು ವಿಫಲವಾದ ಪರಿಣಾಮ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಒಂದೂವರೆ ವರ್ಷದ ಹಿಂದೆಯೇ ಮುಡಾ ಹಾಗೂ ನಗರ ಪಾಲಿಕೆ ವಿರುದ್ಧ ಮೊಕದ್ದಮೆ ದಾಖಲಿಸಿತ್ತು. ಅದಿನ್ನೂ ವಿಚಾರಣೆ ಹಂತದಲ್ಲಿದೆ. ಈ ಸಂದರ್ಭದಲ್ಲೇ ನೊರೆ ಕಾಣಿಸಿಕೊಂಡಿರುವುದು ಪರಿಸರಪ್ರೇಮಿಗಳಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ.












Click it and Unblock the Notifications