ಮೈಸೂರು ದೇವರಾಜ ಮಾರುಕಟ್ಟೆ ಹೂವಿನ ಅಂಗಡಿಗಳು ಬಂದ್
ಮೈಸೂರು, ಜುಲೈ 29 : ಕೋವಿಡ್ - 19 ಭೀತಿಯ ನಡುವೆಯೇ ಶ್ರಾಮಣ ಮಾಸ ಬಂದಿದ್ದು ಹಬ್ಬಗಳು ಆರಂಭವಾಗಿವೆ. ಜನರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗಳಿಗೆ ಬರುತ್ತಿದ್ದು, ಜನರ ದಟ್ಟಣೆ ಕಡಿಮೆ ಮಾಡುವುದು ಸ್ಥಳೀಯ ಆಡಳಿತಕ್ಕೆ ಸವಾಲಾಗಿದೆ.
Recommended Video
ಮೈಸೂರು ನಗರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜುಲೈ 31ರಂದು ವರಮಹಾಲಕ್ಷ್ಮೀ ಹಬ್ಬ ಇರುವುದರಿಂದ ಹೂವಿನ ವ್ಯಾಪಾರಕ್ಕಾಗಿ ದೇವರಾಜ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.
ಮಾರುಕಟ್ಟೆಯಲ್ಲಿ ಹೆಚ್ಚು ಜನರು ಸೇರುವುದನ್ನು ತಪ್ಪಿಸಲು ಜುಲೈ 29 ರಿಂದ 31ರ ತನಕ ಮೂರು ದಿನಗಳ ಕಾಲ ದೇವರಾಜ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲು ಆದೇಶ ನೀಡಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರಸ್ಥರ ಹಾಗೂ ಜನತೆಯ ಅನುಕೂಲಕ್ಕಾಗಿ ಪರ್ಯಾಯವಾಗಿ, ಈ ಮೂರು ದಿನಗಳು ರೈಲ್ವೆ ನಿಲ್ದಾಣದ ಬಳಿ ಇರುವ ಜೆ. ಕೆ. ಗ್ರೌಂಡ್ನಲ್ಲಿ ಹೂವಿನ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಮಂಗಳವಾರ ಮೈಸೂರು ನಗರದಲ್ಲಿ 220 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,383. ಇದುವರೆಗೂ 123 ಜನರು ಮೃತಪಟ್ಟಿದ್ದಾರೆ.












Click it and Unblock the Notifications