ಕಬಿನಿಯಿಂದ ನೀರು ಬಿಡುಗಡೆ, ಮುಳುಗಡೆಯತ್ತಾ ನಂಜನಗೂಡು?
ಮೈಸೂರು, ಜುಲೈ 12: ಕೇರಳದ ವಯನಾಡು ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಪರಿಣಾಮ ಕಬಿನಿ ಜಲಶಾಯಕ್ಕೆ ಒಳಹರಿವು ಹೆಚ್ಚಿದೆ. ಜಲಾಶಯದ ಸುರಕ್ಷೆಯ ಕಾರಣದಿಂದಾಗಿ ಸುಮಾರು 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಇದರಿಂದಾಗಿ ದಕ್ಷಿಣಕಾಶಿ ನಂಜನಗೂಡು ಸೇರಿದಂತೆ ತಗ್ಗು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಮೈಸೂರು- ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ನೂರಾರು ವರ್ಷಗಳ ಇತಿಹಾಸದ ಪುರಾತನ ದಳವಾಯಿ ಸೇತುವೆಯ ಮುಕ್ಕಾಲು ಭಾಗಕ್ಕೆ ನೀರು ಬಂದಿದೆ.
ಮಂಗಳೂರು: 15 ದಿನವಾದರೂ ಇಳಿಯದ ನೆರೆ ನೀರು, ಮನೆಯಿಂದ ಹೊರಬರಬೇಕಾದರೆ ಬೇಕು ಬೋಟ್!
ಕಪಿಲ ನದಿಯ ಹದಿನಾರು ಕಾಲು ಮಂಟಪ ಶೇ 90ರಷ್ಟು ಮುಳುಗಡೆಯಾಗಿದ್ದು, ಇನ್ನಷ್ಟು ನೀರನ್ನು ಜಲಾಶಯದಿಂದ ಬಿಟ್ಟಿದ್ದೇ ಆದರೆ ಸಂಪೂರ್ಣ ಮುಳುಗುವ ಸ್ಥಿತಿ ತಲುಪಿದರೂ ಅಚ್ಚರಿಯಿಲ್ಲ.
ಎರಡು ವರ್ಷಗಳಿಂದ ಶಾಂತವಾಗಿದ್ದ ಕಪಿಲೆ ಈ ವರ್ಷ ಮತ್ತೆ ಮೈದುಂಬಿ ಹರಿಯುತ್ತಿದ್ದು, ಈಗಾಗಲೇ ನದಿಯ ಹೊರ ಹರಿವು ಹೆಚ್ಚಾಗಿ ಮಲ್ಲನ ಮೂಲೆ ಗುರು ಕಂಬಳೀಶ್ವರ ಮಠ, ಮಹದೇವಾ ತಾತಾ ಐಕ್ಯ ಸ್ಥಳ ಸಂಗಮ ಕ್ಷೇತ್ರ, ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಸ್ನಾನ ಘಟ್ಟಗಳು ಸಂಪೂರ್ಣ ಮುಳುಗಡೆಯಾಗಿವೆ.
ಕರಾವಳಿ ಕಡೆಗೆ ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರ: ಇಲ್ಲಿದೆ ಕೆಲ ಸೂಚನೆಗಳು!
ಕಪಿಲೆಯಿಂದ ನಂಜನಗೂಡಿಗೆ ಸಂಕಷ್ಟ
ಪ್ರವಾಹ ಬಂದಾಗಲೆಲ್ಲ ಕಪಿಲಾ ನದಿ ದಡದ ಸಮೀಪದಲ್ಲಿರುವ ನಂಜನಗೂಡಿನ ಸ್ನಾನಘಟ್ಟ, ಮುಡಿಕಟ್ಟೆ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ಕುರುಬರಗೇರಿ, ಗೌರಿಗಟ್ಟೆ, ಹಳ್ಳದಕೇರಿ, ರಾಜಾಜಿ ಕಾಲೋನಿ, ಕುಲಾಕ್ ನ ಹುಂಡಿ ಮುಳುಗಡೆಯಾಗುವುದು ಮಾಮೂಲಿ. ಈ ಬಾರಿಯೂ ಅದೇ ಆಗಲಿದ್ದು, ಜನ ಭಯದಿಂದ ಕಾಲ ಕಳೆಯುತ್ತಿದ್ದು, ತಾಲೂಕು ಆಡಳಿತ ಈಗ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಸರ್ವ ರೀತಿಯಲ್ಲಿ ಸಜ್ಜಾಗುತ್ತಿದೆ.
ಹಾಗೇ ನೋಡಿದರೆ ಕಬಿನಿಯಿಂದ ನೀರು ಬಿಡುಗಡೆ ಮಾಡಿದಾಗಲೆಲ್ಲ ಕಬಿನಿ ಜಲಾಶಯದ ತಳಭಾಗದಲ್ಲಿರುವ ಗ್ರಾಮಗಳು ಹಾಗೂ ನಂಜನಗೂಡು ಪಟ್ಟಣದ ಜನರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತಿದೆ. ಕಳೆದ ಐದು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಪ್ರವಾಹ ಏರ್ಪಡುತ್ತಿದ್ದು, ಪ್ರತಿ ವರ್ಷವೂ ಸಂಕಷ್ಟ ಅನುಭವಿಸುವುದು ತಪ್ಪದಂತಾಗಿದೆ.
ಪ್ರವಾಹದಿಂದ ಈ ಹಿಂದೆ ಹಲವು ಅವಘಡ
ಈ ಹಿಂದೆ ಒಂದು ಲಕ್ಷ ಕ್ಯುಸೆಕ್ ಗಿಂತಲೂ ಹೆಚ್ಚು ನೀರನ್ನು ಹೊರಕ್ಕೆ ಬಿಡಲಾಗಿದೆ. ಆಗ ಪ್ರವಾಹ ಸೃಷ್ಟಿಯಾಗಿ ತಳಭಾಗದಲ್ಲಿ ವಾಸಿಸುತ್ತಿದ್ದ ಜನರ ಮನೆಗೆ ನೀರು ನುಗ್ಗಿದ್ದರಿಂದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡುವಂತಾಗಿತ್ತು. ಈ ಬಾರಿಯೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲಾ ಸಾಧ್ಯತೆಗಳು ಇವೆ. ಪ್ರವಾಹದಿಂದ ಈ ಹಿಂದೆ ಹಲವು ಬಡಾವಣೆಗಳು ಮುಳುಗಡೆಯಾಗಿವೆ. ಆದರೂ ಇಲ್ಲಿನ ಜನ ಸುರಕ್ಷಿತ ಪ್ರದೇಶಗಳತ್ತ ಮುಖ ಮಾಡಿಲ್ಲ.
ಇದೀಗ ಜಲಾಶಯದಿಂದ ಬಿಟ್ಟ ನೀರಿನಿಂದ ಕಪಿಲ ನದಿಯಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ತಗ್ಗು ಪ್ರದೇಶಗಳ ಮನೆಗಳತ್ತ ಪ್ರವಾಹ ನೀರು ನುಗ್ಗುವ ಸ್ಥಿತಿ ನಿರ್ಮಾಣವಾಗಲಿರುವುದರಿಂದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಎಚ್ಚರಿಕೆ ವಹಿಸಿದ್ದಾರೆ.
ಸುರಕ್ಷಿತ ಸ್ಥಳಗಳಿಗೆ ತೆರಳುವುದು ಅನಿವಾರ್ಯ
ಮಳೆಗಾಲದ ಆರಂಭದ ದಿನವೇ ಹೀಗಾದರೆ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಕಪಿಲ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವುದು ಅನಿವಾರ್ಯವಾಗಿದೆ.
ಜಲಾಶಯದಿಂದ ಇನ್ನಷ್ಟು ನೀರು ಹರಿದು ಬಂದಿದ್ದೇ ಆದರೆ, ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಮಲ್ಲನಮೂಲೆ ರಸ್ತೆ ಸಂಪೂರ್ಣ ಜಲಾವೃತವಾಗಲಿದ್ದು, ನಂಜನಗೂಡು ತಾಲೂಕಿನ ಕಣೆನೂರು, ಹುಲ್ಲಹಳ್ಳಿ, ರಾಂಪುರ, ಹಂಡುವಿನಹಳ್ಳಿ, ದೇಬೂರು, ನಂಜನಗೂಡು, ಸುತ್ತೂರು, ವರುಣ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ಜಮೀನುಗಳು ಮುಳುಗಡೆಯಾಗಲಿವೆ.
ಗ್ರಾಮೀಣ ಪ್ರದೇಶದಲ್ಲೂ ಪ್ರವಾಹದ ಭೀತಿ
ಇಷ್ಟೇ ಅಲ್ಲದೆ ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದೇವಾಲಯದ ಬಳಿ ಇರುವ ಪರಶುರಾಮ ದೇವಾಲಯ, ಸ್ಧಾನಘಟ್ಟ, ಒಕ್ಕಲಗೇರಿ, ಸರಸ್ವತಿ ಕಾಲೋನಿ, ತೋಪಿನಬೀದಿಯ ಮನೆಗಳಿಗೂ ನೀರು ನುಗ್ಗಲಿದೆ. ಜತೆಗೆ ನಂಜನಗೂಡು ತಾಲೂಕಿನ ಕುಳ್ಳಂಕನಹುಂಡಿ, ಬೊಕ್ಕಳ್ಳಿ, ಹೆಜ್ಜಿಗೆ, ತೊರೆಮಾವು, ಸುತ್ತೂರು, ಗ್ರಾಮಗಳಲ್ಲಿ ನದಿ ಪಾತ್ರದ ಜಮೀನು, ಮನೆಗಳು ಜಲಾವೃತವಾಗಲಿದೆ. ಆದ್ದರಿಂದ ಜಲಾಶಯದಿಂದ ಇನ್ನಷ್ಟು ನೀರು ಬರುವ ಮುನ್ನ ನದಿ ಪಾತ್ರದ ಜನರು ಅದರಲ್ಲೂ ಪ್ರವಾಹದಿಂದ ಸಂಕಷ್ಟಕ್ಕೊಳಗಾಗುವ ಜನರು ಸುರಕ್ಷಿತ ಸ್ಥಳಗಳತ್ತ ತೆರಳುವುದು ಬಹುಮುಖ್ಯವಾಗಿದೆ.