ತಗ್ಗಿದ ಕಪಿಲೆಯ ಅಬ್ಬರ, ಕುಡಿಯುವ ನೀರಿಗೆ ಹಾಹಾಕಾರ
ಮೈಸೂರು, ಆಗಸ್ಟ್. 13 : ದಕ್ಷಿಣ ಕಾಶಿ ಖ್ಯಾತಿಯ ಶ್ರೀಕಂಠೇಶ್ವರನ ಸನ್ನಿಧಿ ಪಟ್ಟಣವನ್ನು ಪ್ರವಾಹದಲ್ಲಿ ಭಾಗಶಃ ಮುಳುಗಿಸಿದ್ದ ಕಪಿಲೆ, ಸ್ವಲ್ಪ ಮಟ್ಟಿಗೆ ಶಾಂತಳಾಗಿದ್ದು, ನೆರೆ ಪರಿಸ್ಥಿತಿ ಇಳಿಮುಖವಾಗಿದೆ.
ಆದರೆ, ಪಟ್ಟಣದ ಹಳ್ಳದ ಕೇರಿಯಲ್ಲಿ ಮಾತ್ರ ಆಳುದ್ದ ನೀರು ನಿಂತಿದ್ದು, ನಿವಾಸಿಗಳೆಲ್ಲರೂ ಗಂಜಿಕೇಂದ್ರದಲ್ಲಿಯೇ ಉಳಿದು, ಅಲ್ಲೇ ಊಟ ಉಪಾಹಾರ ಸೇವಿಸುತ್ತಿದ್ದಾರೆ.
"ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಈಗಲೂ ಜಲಾವೃತವಾಗಿಯೇ ಇದೆ. ಅಲ್ಲಿಂದ ನೀರು ಹಿಂದೆ ಸರಿಯುವವರೆಗೂ ಆ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ ಮುಂದುವರಿಯಲಿದೆ.
ಬೆಂಗಳೂರು-ಊಟಿ ಸಂಪರ್ಕಿಸುವ ಹೆದ್ದಾರಿ ಆಧುನೀಕರಣ ನಂತರ ಇದೇ ಪ್ರಥಮ ಬಾರಿಗೆ ಜಲಾವೃತವಾಗಿದೆ. ಪರಿಸ್ಥಿತಿ ಅವಲೋಕಿಸಿ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು" ಎಂದು ತಹಸೀಲ್ದಾರ್ ದಯಾನಂದ ಹೇಳಿದ್ದಾರೆ.

ಕುಡಿಯಲು ನೀರಿಲ್ಲ
ನಂಜನಗೂಡಿನ ಮಡಿಲಲ್ಲೇ ಹರಿಯುತ್ತಿರುವ ಕಪಿಲೆ, ಪಟ್ಟಣದ ಅನೇಕ ಸ್ಥಳಗಳಿಗೆ ನುಗ್ಗಿ ಸಾಕಷ್ಟು ಹಾನಿ ಮಾಡುತ್ತಿದ್ದಾಳೆ. ಸುತ್ತಲೂ ನೀರಿದ್ದರೂ ಪಟ್ಟಣದ ಅನೇಕ ಬಡಾವಣೆಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ.
ನಗರಸಭೆ ವ್ಯಾಪ್ತಿ ಪ್ರದೇಶಗಳಿಗೆ ಹಾಗೂ ಗುಂಡ್ಲುಪೇಟೆ ಪುರಸಭೆಗೆ ನೀರು ಸರಬರಾಜು ಮಾಡುವ ನಂಜನಗೂಡು ತಾಲೂಕಿನ ದೇಬೂರು ಬಳಿಯ ಪಂಪ್ ಹೌಸ್ ಕಪಿಲಾ ನದಿಯ ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿದೆ. ಹಾಗಾಗಿ ಎರಡೂ ಪಟ್ಟಣಗಳಿಗೆ ನೀರು ಸರಬರಾಜು ಸ್ಥಗಿತಗೊಂಡಿದೆ.

ಕೊಳವೆ ಬಾವಿಗಳು ಇರುವೆಡೆಯಷ್ಟೇ ಕುಡಿಯಲು ನೀರು ಸಿಗುತ್ತಿದೆ. ನಗರದ ಬಹುತೇಕ ಕಡೆ ಜನ ಕುಡಿವ ನೀರಿಗಾಗಿ ಪರದಾಡುತ್ತಿದ್ದಾರೆ. ನಗರ ಸಭೆಯಿಂದ ಸದ್ಯ 2 ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡುತ್ತಿದ್ದು, ಅದು ಯಾತಕ್ಕೂ ಸಾಲದಂತಾಗಿದೆ.
ಕಪಿಲಾನದಿ ಪ್ರವಾಹದಿಂದಾಗಿ ತಾಲೂಕಿನ ಛತ್ರ ಹೋಬಳಿಯ ಶೇ.50 ಭಾಗ ಜಲಾವೃತವಾಗಿದೆ. ಕಳೆದ 60 ವರ್ಷಗಳಲ್ಲಿ ಇಂಥ ಪರಿಸ್ಥಿತಿ ಉಂಟಾಗಿರಲಿಲ್ಲ. ಪ್ರವಾಹದಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಹೋಬಳಿಯ ಬಹಳಷ್ಟು ಗಾಮಗಳ ನೂರಾರು ಎಕರೆ ಕೃಷಿಭೂಮಿ ಮುಳುಗಡೆಯಾಗಿ ರೈತರಿಗೆ ಭಾರಿ ನಷ್ಟವಾಗಿದೆ.

ಮತ್ತೆ ಭತ್ತ ನಾಟಿ ಮಾಡಿದರೂ ಬೆಳೆ ಬರುವ ಭರವಸೆ ಇಲ್ಲವಾಗಿದೆ. ಬೊಕ್ಕಳ್ಳಿಯಲ್ಲಿ 400 ಎಕರೆ, ಇಮ್ಮಾವುನಲ್ಲಿ 200 ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ. 15 ರಿಂದ 20 ಮನೆಗಳು ನೀರಿನಲ್ಲಿ ಮುಳುಗಿವೆ. ನೂರಾರು ಮಂದಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.











Click it and Unblock the Notifications