PWD ಎಂಜಿನಿಯರ್ ಮನೆಮೇಲೆ ದಾಳಿ, ಸಿಕ್ಕಾಪಟ್ಟೆ ವಶ!
ಮೈಸೂರು, ಫೆಬ್ರವರಿ 7 : ಪಿಡಬ್ಲ್ಯುಡಿ ಸಹಾಯಕ ಅಭಿಯಂತ ಕಾಳೇಗೌಡ ನಿವಾಸದ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿಟ್ಟಿದ್ದ ದಾಖಲೆ ಪತ್ರಗಳು ಹಾಗೂ ನಗದು, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಮಂಡ್ಯದಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಳೇಗೌಡ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ಸಾರ್ವಜನಿಕ ದೂರಿನ ಹಿನ್ನೆಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದರು.
ಸದರ್ನ್ ರೇಂಜ್ ಎಸಿಬಿ ಎಸ್ಪಿ ಕವಿತಾ ಅವರಿಗೆ ದೂರು ಬಂದ ಹಿನ್ನೆಲೆಯಲ್ಲಿ ಮಂಡ್ಯ ನಗರದ ಕಲ್ಲಹಳ್ಳಿ ವಿವಿ ನಗರದ 23ನೇ ಕ್ರಾಸ್ ನಲ್ಲಿರುವ ಕಾಳೇಗೌಡ ನಿವಾಸಕ್ಕೆ ದಾಳಿ ನಡೆಸಿದ ತಂಡ ಮೈಸೂರು, ಮಂಡ್ಯ, ಮಾರಗೌಡನಹಳ್ಳಿಯ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ಮೈಸೂರಿನ ರಾಜಕುಮಾರ್ ರಸ್ತೆಯಲ್ಲಿರುವ ರವಿಶಂಕರ ಬಡಾವಣೆಯಲ್ಲಿಯೂ ದಾಳಿ ನಡೆದಿದೆ ಎನ್ನಲಾಗಿದೆ.
ದಾಳಿಯ ಸಂದರ್ಭ ನಿವಾಸದಲ್ಲಿದ್ದ ಅಪಾರ ಪ್ರಮಾಣದ ದಾಖಲಾತಿ, ಚಿನ್ನ, ಬೆಳ್ಳಿ, 2000, 500 ಮುಖ ಬೆಲೆಯ ಹೊಸ ನೋಟು, ಕೋಟ್ಯಾಂತರ ರು. ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಡಿವೈಎಸ್ಪಿ ಶೈಲೇಂದ್ರ, ಸಿಬ್ಬಂದಿ ಅನಿಲ್, ಪ್ರಶಾಂತ್, ಮಧು ಇತರರಿದ್ದರು.