ಮೈಸೂರು ಮೇಯರ್ ಚುನಾವಣೆ: ನಾಮಪತ್ರ ಸಲ್ಲಿಕೆ ಮುಕ್ತಾಯ
ಮೈಸೂರು, ನವೆಂಬರ್. 17: ಬಹು ನಿರೀಕ್ಷಿತ ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಆವರಣದಲ್ಲಿ ಚುನಾವಣೆ ಆರಂಭಕ್ಕೂ ಮುನ್ನ ಆಗಮಿಸಿದ ಜೆಡಿಎಸ್ ಸದಸ್ಯರಿಗೆ ಪೊಲೀಸರು ತಡೆಯುಂಟು ಮಾಡಿದ್ದು ಕೆಲಕಾಲ ಮಾತಿನ ಚಕಮಕಿ ನಡೆದಿದೆ.
ಪಾಲಿಕೆ ಸದಸ್ಯರ ಹೊರತುಪಡಿಸಿ ಉಳಿದವರಿಗೆ ಪಾಸ್ ವಿತರಣೆ ಮಾಡದ ಹಿನ್ನೆಲೆಯಲ್ಲಿ ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಮಾಜಿ ಮೇಯರ್ ರವಿಕುಮಾರ್ ಮಾತಿನ ಚಕಮಕಿ ನಡೆಸಿದರು. ಚುನಾಯಿತ ಪ್ರತಿನಿಧಿಯನ್ನೇ ಒಳಗೆ ಬಿಡುವುದಿಲ್ಲವೇ ? ಎಂದು ಜಟಾಪಟಿ ನಡೆಸಿದರು.
ಇದರಿಂದಾಗಿ ಪಾಲಿಕೆ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೂ ಆಯುಕ್ತರ ಆದೇಶದಂತೆ ಜೆಡಿಎಸ್ ಮುಖಂಡರು, ಸದಸ್ಯರು ಒಳ ಪ್ರವೇಶಿಸಿದರು.

ಬಹುಮತವಿಲ್ಲದಿದ್ದರೂ ಬಿಜೆಪಿ ನಾಮಪತ್ರ ಸಲ್ಲಿಕೆ
ಇನ್ನು ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಗೆ ಮೈತ್ರಿ ಪಕ್ಷದ ಅಭ್ಯರ್ಥಿಗಳು ಮತ್ತು ಬಹುಮತವಿಲ್ಲದಿದ್ದರೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಮೇಯರ್ ಅಭ್ಯರ್ಥಿಯಾಗಿ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ನ ಶಫಿ ಅಹಮ್ಮದ್ ನಾಮಪತ್ರ ಸಲ್ಲಿಸಿದರು. ಹಾಗೆಯೇ ಬಿಜೆಪಿಯ ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸುನಂದ ಹಾಗೂ ಉಪಮೇಯರ್ ಸ್ಥಾನಕ್ಕೆ ಸತೀಶ್ ನಾಮಪತ್ರ ಸಲ್ಲಿಸಿದ್ದಾರೆ.

ಈಗಾಗಲೇ ಗೆಲುವಿನ ಸಮೀಪದಲ್ಲಿರುವ ಮೈತ್ರಿ ಪಕ್ಷದ ಮೇಯರ್ ಅಭ್ಯರ್ಥಿ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಸಿದ್ದರಾಮಯ್ಯ ಅವರ ಹಠ ಈ ಚುನಾವಣೆಯಲ್ಲಿ ಗೆದ್ದಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಗೆ ಅಧಿಕಾರ ಇರಲಿಲ್ಲ. ಮೈತ್ರಿ ಸರ್ಕಾರದಿಂದ ಈಗ ಮೇಯರ್ ಅಧಿಕಾರ ಸಿಕ್ಕಿದೆ. ಮೇಯರ್ ಆಗಿ ಆಯ್ಕೆಯಾಗಿದ್ದಕ್ಕೆ ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ.
ನಾನು ಉಪ ಮೇಯರ್ ಆಗಿ ಕೂಡ ಕೆಲಸ ಮಾಡಿದ್ದೇನೆ. ನನ್ನ ಮೊದಲ ಆದ್ಯತೆ ಸ್ವಚ್ಛತೆಗೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.











Click it and Unblock the Notifications