ಸಿಎಂ ಸಿದ್ದರಾಮಯ್ಯಗೆ ಪುಕ್ಕಲುತನ: ಪ್ರತಾಪ್ ಸಿಂಹ ಹೀಗೆ ಹೇಳಿದ್ಯಾಕೆ?, ಇಲ್ಲಿದೆ ವಿವರ
ಮೈಸೂರು, ಜೂನ್, 19: ನಾನೇ ಐದು ವರ್ಷ ಪೂರ್ಣಾವಧಿ ಸಿಎಂ ಎಂದು ಸಿದ್ದರಾಮಯ್ಯ ಅವರು ಹೇಳಲಿ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಸವಾಲು ಹಾಕಿದರು. ಅಲ್ಲದೆ ಸಿದ್ದರಾಮಯ್ಯ ಅವರಿಗೆ ಪುಕ್ಕಲುತನ ಇದೆ ಎಂದು ವ್ಯಗ್ಯವಾಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಎಂ.ಬಿ. ಪಾಟೀಲ್ ಇಬ್ಬರು 5 ವರ್ಷವೂ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಸಿದ್ದರಾಮಯ್ಯಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಸಿದ್ದರಾಮಯ್ಯ ತಮ್ಮ ಚೇಲಾ ಪಡೆ ಮೂಲಕ ತಾವೂ ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಸುತ್ತಿದ್ದಾರ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯಗೆ ತಾವೇ ಪೂರ್ಣವಧಿ ಸಿಎಂ ಅಂತಾ ನೇರವಾಗಿ ಹೇಳುವ ಧೈರ್ಯವಿಲ್ಲ. ಅವರಿಗೆ ಪುಕ್ಕಲತನ. ಚುನಾವಣೆ ಗೆಲ್ಲಲು ಡಿ.ಕೆ.ಶಿವಕುಮಾರ್ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಮಾಡಿದೆ. ಸಿದ್ದರಾಮಯ್ಯಗೆ ಆ ಧಾರಾಳತನ ಮತ್ತು ಉದಾರತನದ ಮನಸ್ಸು ಇಲ್ಲ ಎಂದು ಹೇಳಿದರು.
ಅಲ್ಲದೆ ನಮ್ಮ ಪಕ್ಷದಲ್ಲಿ ಶೀಘ್ರವೇ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ. ಎದೆಗಾರಿಕೆ ಇರುವ ನಾಯಕ ಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಹಿರಿಯ ನಾಯಕ ಬಸವಗೌಡ ಪಾಟೀಲ್ ಯತ್ನಾಳ್ ಹೆಸರು ಎಲ್ಲಾ ಕಡೆಯೂ ಕೇಳಿ ಬರುತ್ತಿದೆ. ರಾಷ್ಟ್ರೀಯತೆ, ಹಿಂದುತ್ವ ಎಲ್ಲವನೂ ಯತ್ನಾಳ್ ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ಯತ್ನಾಳ್ ಅಂದರೆ ಒಂದು ಹವಾ ಇದೆ ಎಂದರು.
ಇನ್ನು ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಬಿಜೆಪಿ ಒತ್ತಡ ತರಲಿ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, 5 ಕೆಜಿ ಅಕ್ಕಿ ಕೊಡುವುದು ಕೇಂದ್ರ ಸರ್ಕಾರ ಎಂಬ ಸತ್ಯ ಹೇಳಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಮೋದಿ ಅವರ ಐದು ಕೆಜಿಗೆ 10 ಕೆ.ಜಿ. ಸೇರಿಸಿ ಕೊಡಬೇಕು ಎಂದರು. ಅಲ್ಲದೆ ಮೋದಿ ಅವರು ಅಕ್ಕಿ ಕೊಡಬೇಕು, ನೀವು ಚುನಾವಣೆ ಗೆದ್ದು ಬರಬೇಕಾ? ಜುಲೈ ತಿಂಗಳಿನಿಂದ ತಲಾ 10 ಕೆ.ಜಿ. ಅಕ್ಕಿ ಕೊಡಲಾಗದಿದ್ದರೆ ಗಂಡನ ಖಾತೆಗೆ ಅಕ್ಕಿ ಹಣ ಜಮೆ ಮಾಡುವಂತೆ ಆಗ್ರಹಿಸಿದರು.
ತೆಲಂಗಾಣ, ಮಧ್ಯಪ್ರದೇಶ, ರಾಜಸ್ತಾನ ಎಲ್ಲಾ ಕಡೆ ಚುನಾವಣೆ ಇದೆ. ಅಲ್ಲೂ ನೀವು ಉಚಿತ ಅಕ್ಕಿ ಘೋಷಣೆ ಮಾಡಿದರೆ ಅಕ್ಕಿ ಕೊಡಲಾಗುತ್ತದೆಯೇ? ಈ ವರ್ಷ ಮುಂಗಾರು ಕೈ ಕೊಟ್ಟಿದೆ. ನೆರೆ ಬಂದ ಪ್ರದೇಶಗಳಿಗೆ ಅಕ್ಕಿ ಕೊಡಬೇಕಾದರೆ ಕೇಂದ್ರ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಹಾಗೆಯೇ ಮತ್ತೊಂದೆಡೆ ವಿದ್ಯುತ್ ದರ ಯದ್ವತದ್ವಾ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನರಿಗೆ ಕರೆಂಟ್ ಶಾಕ್ ನೀಡಿದೆ. ಕೈಗಾರಿಕೆಗಳಿಗೆ ಬರೆ ಹಾಕುವ ಕೆಲಸಕ್ಕೆ ಮುಂದಾಗಿದ್ದರಿಂದ ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ರಾಜ್ಯದ ಜನರು ಕೈಗಾರಿಕೋದ್ಯಮಿಗಳು ಕರೆ ಕೊಟ್ಟ ಕರ್ನಾಟಕ ಬಂದ್ಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಗೃಹ ಜ್ಯೋತಿ ಯೋಜನೆಯಡಿ ನಿಮ್ಮದು ದೋಖಾ ಸರ್ಕಾರ ಎಂಬುದು ಸಾಬೀತಾಗಿದೆ. ಉಚಿತ ಯೋಜನೆಗಳು ಒಂಥರ ಗಂಡನ ದರೋಡೆ ಮಾಡಿ, ಪತ್ನಿಗೆ ಕೊಟ್ಟಂತಾಗಿದೆ. ಗಂಡನ ಜೇಬಿಗೆ ಕತ್ತರಿ ಹಾಕಿ ಪತ್ನಿಗೆ ಕೊಡುವುದರಲ್ಲಿ ಏನೂ ಅರ್ಥ ಇದೆ ಹೇಳಿ? ಎಂದು ಕುಟುಕಿದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಎಂ.ಬಿ. ಪಾಟೀಲ್ ವ್ಯಂಗ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿ.ಎಲ್. ಸಂತೋಷ್ ಬಗ್ಗೆ ಪದೇ ಪದೇ ಯಾಕೆ ಮಾತಾಡುತ್ತೀರಿ?. ಬ್ರಾಹ್ಮಣರನ್ನು ದಿನವೂ ಯಾಕೆ ಬೈಯುತ್ತೀರಿ?. ಬ್ರಾಹ್ಮಣರ ಮೇಲೆ ನಿಮಗೇ ಯಾಕೇ ದ್ವೇಷ. ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರು ಅಲ್ವಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವಗ್ದಾಳಿ ನಡೆಸಿದರು.












Click it and Unblock the Notifications