ಫೆಬ್ರವರಿ 18ರಂದು ಕರ್ನಾಟಕದಲ್ಲಿ ರೈಲು ತಡೆ ಚಳವಳಿ
ಮೈಸೂರು, ಫೆಬ್ರವರಿ 16; " ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ರೈತ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಇದನ್ನು ಖಂಡಿಸಿ ಫೆಬ್ರವರಿ18ರಂದು ರೈಲು ತಡೆ ಚಳವಳಿ ನಡೆಸಲಾಗುವುದು" ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಎಮ್ಮೆ ಚರ್ಮದ ಸರ್ಕಾರ. ಮಳೆ, ಚಳಿ, ಗಾಳಿ, ಬಿಸಿಲು ಯಾವುದಕ್ಕೂ ಪ್ರತಿಕ್ರಿಯೆ ಇಲ್ಲ. ಪ್ರಧಾನಿ ಮೋದಿಯವರು ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿ ಮಾಡಿದಂತೆ ಕಾಣುತ್ತಿದೆ" ಎಂದು ಆರೋಪಿಸಿದರು.
"ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶ ರಂಜನ್ ಗೂಗಯ್ ಹೇಳಿರುವುದು ಬಡಜನರಿಗೆ ದುಡಿಯುವ ವರ್ಗಕ್ಕೆ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದು ಕಷ್ಟಕರವಾಗಿದೆ. ಪ್ರಜಾಪ್ರಭುತ್ವ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಾಗುತ್ತಿದೆ, ಬಂಡವಾಳಶಾಹಿಗಳ, ಶ್ರೀಮಂತರ ವಶಕ್ಕೆ ಸಿಲುಕುತ್ತಿದೆ. ಈ ಹೇಳಿಕೆಯ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕಾಗಿದೆ" ಎಂದರು.

"ರೈತ ಉತ್ಪನ್ನಗಳಿಗೆ ಕನಿಷ್ಠ ಶಾಸನಬದ್ಧಬೆಲೆ ಖಾತ್ರಿಗೊಳಿಸದ ಸರ್ಕಾರ. ಕೃಷಿ ಉತ್ಪನ್ನ ಖರೀದಿಸಲು ಯಾವುದೇ ನಿಯಂತ್ರಣವಿಲ್ಲದ, ರಹದಾರಿ ಇಲ್ಲದವರು, ಎಷ್ಟು ಬೇಕಾದರೂ ಎಲ್ಲಿ ಬೇಕಾದರೂ ಖರೀದಿಸಬಹುದು ಎನ್ನುವ ವ್ಯಾಪಾರಕ್ಕೆ ಕಾನೂನು ಮೂಲಕ ಖಾಸಗಿಯವರಿಗೆ ಅವಕಾಶ ಕೊಡಲಾಗಿದೆ" ಎಂದು ದೂರಿದರು.
"ಯಾವುದೇ ಅನುಮತಿ ಇಲ್ಲದವರು ವ್ಯಾಪಾರ ಮಾಡುವಾಗ ರೈತರಿಗೆ ವಂಚನೆ ಮಾಡಿದಾಗ ಅವರ ಮೇಲೆ ಕ್ರಮ ಕೈಗೊಳ್ಳುವುದು, ನ್ಯಾಯಾಲಯಕ್ಕೆ ಹೋಗುವುದನ್ನು ಕಿತ್ತು ಹಾಕಲಾಗಿದೆ, ಇದೆಲ್ಲಾ ಜನಪ್ರತಿನಿಧಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ" ಎಂದು ಪ್ರಶ್ನಿಸಿದರು.
"ರಾಜ್ಯ ಸರ್ಕಾರ ಮಂಡಿಸುವ ಮುಂದಿನ ಬಜೆಟ್ನಲ್ಲಿ ಕಬ್ಬಿನ ಎಫ್ ಆರ್ ಪಿ ಬೆಲೆಯನ್ನು ರೈತರ ಹೊಲದಲ್ಲಿನ ದರ ಎಂದು ರಾಜ್ಯ ಸರ್ಕಾರವೇ ನಿಗದಿ ಮಾಡುವಂತಾಗಬೇಕು. ಕಬ್ಬಿನ್ನು ಫಸಲ್ ಭೀಮಾ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕು.
ಹಣ್ಣು-ತರಕಾರಿ ಎಲ್ಲ ಬೆಳೆಗಳಿಗೆ ಶಾಸನಬದ್ಧ ಖಾತ್ರಿ ಕನಿಷ್ಠ ಬೆಂಬಲ ಬೆಲೆ ನಿಗದಿಮಾಡುವ ಮಾನದಂಡ ಜಾರಿಗೆ ಬರಬೇಕು" ಎಂದು ಒತ್ತಾಯಿಸಿದರು.
"ರಾಜ್ಯದಲ್ಲಿ ಆರು ತಿಂಗಳಿಗೊಮ್ಮೆ ಸಕ್ಕರೆ ಸಚಿವರು, ಸಕ್ಕರೆ ಅಭಿವೃದ್ಧಿ ಆಯುಕ್ತರು ಬದಲಾಗುತ್ತಿರುವುದಕ್ಕೆ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗಲು ಕಷ್ಟವಾಗುತ್ತಿದೆ. ಕಬ್ಬು ಬೆಳೆಗಾರರಿಗೆ 4000 ಕೋಟಿ ಕಬ್ಬಿನ ಹಣ ಬಾಕಿ ಬರಬೇಕಾಗಿದೆ. ಇದನ್ನು ಕೊಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.












Click it and Unblock the Notifications