Muda Scam: ಸಿಎಂ ಸಿದ್ದರಾಮಯ್ಯ ಪತ್ನಿಗೆ ಇಡಿ ನೋಟಿಸ್ ಜಾರಿ ಸಾಧ್ಯತೆ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮುಡಾ ಮೇಲೆ ದಾಳಿ ನಡೆಸಿದೆ. 50:50 ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಇಡಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾಜಿ ಆಯುಕ್ತರಾದ ಡಿ.ಬಿ.ನಟೇಶ್, ಜಿ.ಟಿ.ದಿನೇಶ್ ಕುಮಾರ್ ಅವರಿಗೂ ದಾಖಲೆ ಪರಿಶೀಲನೆ ವೇಳೆ ಹಾಜರಿರುವಂತೆ ಬುಲಾವ್ ನೀಡಲಾಗಿದೆ. ಶನಿವಾರ ಕೂಡ ಆಗಮಿಸುವ ಸಾಧ್ಯತೆ ಇದೆ. ನಜರ್ಬಾದ್ನಲ್ಲಿರುವ ತಾಲೂಕು ಕಚೇರಿಗೂ ಇಡಿಯ ಮತ್ತೊಂದು ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಕಚೇರಿ ತೆರೆಯುತ್ತಿದ್ದಂತೆ ಮುಡಾವನ್ನು ತಮ್ಮ ವಶಕ್ಕೆ ತೆಗೆದುಕೊಂಡ ಇಡಿ ಅಧಿಕಾರಿಗಳು ಸಾರ್ವಜನಿಕರನ್ನು ಹೊರಗೆ ಕಳುಹಿಸಿದರು. ವೈಟ್ನರ್ ಹಾಕಿದ್ದಾರೆ ಎನ್ನಲಾದ ದಾಖಲೆ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ವೈಟ್ನರ್ ಹಾಕಿದ್ದ ಮೂಲ ದಾಖಲೆ ಎಲ್ಲಿದೆ? ಯಾರು ಹಾಕಿದ್ದು? ಮೂಲ ದಾಖಲೆಯಲ್ಲೇ ವೈಟ್ನರ್ ಹಾಕಲು ಹೇಗೆ ಸಾಧ್ಯ? ಎಂದು ಮುಡಾ ಅಧಿಕಾರಿಗಳನ್ನು ಇಡಿ ಅಧಿಕಾರಿಗಳು ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಮುಡಾ ಆಯುಕ್ತ ರಘುನಂದನ್ ಕಚೇರಿಯಲ್ಲಿ ಕುಳಿತ ಇಡಿ ಅಧಿಕಾರಿಗಳು ಬೆಂಗಳೂರಿನಿಂದ ಪಟ್ಟಿ ಮಾಡಿಕೊಂಡು ಬಂದಿದ್ದ ಕ್ರಮಸಂಖ್ಯೆಯ ಕಡತಗಳನ್ನು ಪಡೆದುಕೊಂಡರು. 50:50 ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ಪ್ರತಿಯೊಂದು ಕಡತಗಳ ವಿವರ ಕೇಳಿದರು. ಸತತ 6 ಗಂಟೆಗಳ ಕಾಲ 60 ಪ್ರಶ್ನೆಗಳನ್ನು ಮುಡಾ ಅಧಿಕಾರಿಗಳಿಗೆ ಕೇಳಿದರು.
ಇನ್ಸ್ಪೆಕ್ಟರ್ ಬಿ.ಎಸ್.ರವಿಶಂಕರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ಇದರಿಂದ ಕೇವಲ ಮೈಸೂರು ಮಾತ್ರವಲ್ಲದೆ ರಾಜ್ಯದ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಮಂದಿಯೂ ಯಾವುದೇ ಕೆಲಸ ಆಗದೆ ಹಿಂತಿರುಗಬೇಕಾಯಿತು. ದಿಢೀರ್ ದಾಳಿಯಿಂದಾಗಿ ಮುಡಾ ಅಧಿಕಾರಿಗಳು ಹಾಗೂ ನೌಕರರು ಗೊಂದಲಕ್ಕೆ ಒಳಗಾದರು.












Click it and Unblock the Notifications