ಕಾಡಿನಿಂದ ನಾಡಿಗೆ ಬಂದು ಜಾರಿ ಬಿದ್ದ ಕಾಡಾನೆ
ಬೂದಿತಿಟ್ಟು, ಜುಲೈ 10: ಮೇವು ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಯೊಂದು ಸಾಕಷ್ಟು ಬೆಳೆ ನಾಶ ಮಾಡಿದ್ದಲ್ಲದೆ, ಗ್ರಾಮಸ್ಥರಿಗೆ ಪುಕ್ಕಟೆ ಮನರಂಜನೆ ನೀಡಿ, ಜಾರಿ ಬಿದ್ದು, ಕೊನೆಗೂ ಸಾಕಾನೆ ಹಾಗೂ ಅರಣ್ಯ ಸಿಬ್ಬಂದಿ ನೆರವಿನಿಂದ ಕಾಡು ಸೇರಿದ ಘಟನೆ ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನದ ಕೊಳುವಿಗೆಯಲ್ಲಿ ನಡೆದಿದೆ.
ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನದ ಕೊಳುವಿಗೆಯ ರಾಮಲಿಂಗೇಶ್ವರ ದೇವಾಲಯ ಬಳಿಯ ರೈಲ್ವೆ ಹಳಿ ತಡೆಗೋಡೆಯ ಗೇಟ್ನಿಂದ ಹೊರದಾಟಿರುವ ಹೆಣ್ಣಾನೆ ಅಲ್ಲಲ್ಲಿ ಬೆಳೆ ತಿಂದು ಗೋಡೆ ದಾಟಿ ಹೊರಹೋಗಲಾಗದೆ ಅತ್ತಿಂದಿತ್ತ ಓಡಾಡಿದೆ. ಹೊರ ಹೋಗಲಾರದೇ ಹೆಣಗಾಡಿ ಕೊನೆಗೆ ಬೆಳಕು ಹರಿದಿದೆ. ಮುಂಜಾನೆ ವೇಳೆಗೆ ಮುದುಗನೂರಿನ ಜಮೀನಿನ ಬಳಿ ಅಡ್ಡಾಡುತ್ತಿದ್ದು, ರೈತರು ತಮ್ಮ ಜಮೀನಿನ ಬಳಿ ಕಾಡಾನೆ ಇರುವುದನ್ನು ಕಂಡು ಗಾಬರಿಗೊಂಡು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.
ಕಾಡಾನೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿ, ಆನೆಯನ್ನು ಕಾಡಿಗಟ್ಟಲು ಪ್ರಯತ್ನಿಸಿದರು. ಆದರೆ ಆನೆ ಜನರನ್ನು ಕಂಡು ಗಾಬರಿಯಾಗಿ ಅತ್ತಿಂದಿತ್ತ ಓಡುತ್ತಾ ಜನರಿಗೆ ಪುಕ್ಕಟೆ ಮನರಂಜನೆ ನೀಡಿತು. ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಮುದುಗನೂರು ಕೆರೆ ಏರಿ ಮೇಲಿದ್ದ ಆನೆಯು ಜನರ ಕೂಗಾಟದಿಂದ ಹೆದರಿ ಆಯತಪ್ಪಿ ಏರಿಯಿಂದ ಕಾಲುವೆಯೊಳಕ್ಕೆ ಜಾರಿ ಬಿದ್ದಿತು, ಈ ವೇಳೆ ಆನೆಗೇನೋ ಆಗಿರಬಹುದೆಂದು ಜನರು, ಅರಣ್ಯ ಸಿಬ್ಬಂದಿ ಗಾಬರಿಗೊಂಡಿದ್ದರು. ಆದರೆ ಕೆಲಹೊತ್ತು ಸಾವರಿಸಿಕೊಂಡ ಆನೆಯು ನಿಧಾನವಾಗಿ ಹಿಮ್ಮುಖವಾಗಿ ಚಲಿಸಿ, ಕಾಲುವೆಯಿಂದ ಹೊರಬಂದಿತು. ಆಗ ಅರಣ್ಯ ಸಿಬ್ಬಂದಿ ನಿಟ್ಟುಸಿರುಬಿಟ್ಟರು.
ಆನೆಯನ್ನು ಅಟ್ಟಾಡಿಸುತ್ತಿದ್ದ ಜನರನ್ನು ನಿಯಂತ್ರಿಸಿದ ಸಿಬ್ಬಂದಿ ಕೊನೆಗೆ ಸಾಕಾನೆ ಗೋಪಾಲಸ್ವಾಮಿಯನ್ನು ಕರೆತಂದು ಪಟಾಕಿ ಸಿಡಿಸುತ್ತಾ, ಚಿಕ್ಕಹೆಜ್ಜೂರು ಹಾಡಿ ಮೂಲಕ ತಡೆಗೋಡೆ ಅಂಚಿನಲ್ಲೇ ಕರೆತಂದು ವೀರನಹೊಸಹಳ್ಳಿಯ ಮುಖ್ಯದ್ವಾರದ ಮೂಲಕ ಉದ್ಯಾನ ಸೇರಿಸುವಲ್ಲಿ ಯಶಸ್ವಿಯಾದರು.
ಎ.ಸಿ.ಎಫ್.ಪ್ರಸನ್ನಕುಮಾರ್, ವೀರನಹೊಸಹಳ್ಳಿ ಆರ್.ಎಫ್.ಓ.ರವೀಂದ್ರ ನೇತೃತ್ವದಲ್ಲಿ ಪಶುವೈದ್ಯ ಡಾ. ಮುಜೀಬ್ ರೆಹಮಾನ್, ಎಸ್.ಟಿ.ಎಫ್.ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications