ಜೀವಕ್ಕೇ ಕುತ್ತು ತರುತ್ತಿದ್ದ ರಸ್ತೆಗೆ ಬಿದ್ದ ವಿದ್ಯುತ್ ತಂತಿ
ಮೈಸೂರು, ಜನವರಿ 28: ರಸ್ತೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ತುಂಡಾಗಿ ಬಿದ್ದ ಘಟನೆ ತಿ.ನರಸೀಪುರ ಪಟ್ಟಣದಲ್ಲಿ ನಡೆದಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ತಿ.ನರಸೀಪುರ ಪಟ್ಟಣದ ಸೇಂಟ್ ಮೇರೀಸ್ ರಸ್ತೆ ಮಧ್ಯದಲ್ಲಿ ಈ ಘಟನೆ ನಡೆದಿದ್ದು, ಮಾಲೀಕರೊಬ್ಬರು ಮಣ್ಣನ್ನು ಟಿಪ್ಪರ್ ಮೂಲಕ ಸುರಿಯುವ ಸಂದರ್ಭದಲ್ಲಿ ವಿದ್ಯುತ್ ಕಂಬಕ್ಕೆ ವಾಹನ ತಾಗಿ ಈ ಘಟನೆ ಸಂಭವಿಸಿದೆ.
ಈಶ್ವರಿ ಕಾಂಪ್ಲೆಕ್ಸ್ ಮಾಲೀಕರು ಸಮುಚ್ಚಯದ ಮುಂಭಾಗ ಸಮತಟ್ಟು ಮಾಡಿಸುವ ಸಲುವಾಗಿ ಶನಿವಾರ ಬೆಳಗ್ಗೆ ಟಿಪ್ಪರ್ ನಲ್ಲಿ ಮಣ್ಣು ತಂದು ಸುರಿಯುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ಕಂಬದ ಮುಖ್ಯ ತಂತಿಗೆ ಟಿಪ್ಪರ್ ತಗುಲಿ, ಅದು ತುಂಡಾಗಿ ಬಿದ್ದಿದೆ. ಬೆಳಗ್ಗೆ 7.45ರ ವೇಳೆಯಲ್ಲಿ ಘಟನೆ ನಡೆದಿದ್ದರಿಂದ ರಸ್ತೆಯಲ್ಲಿ ಜನ, ವಾಹನ ಸಂಚಾರವಾಗಲೀ ವಿರಳವಾಗಿತ್ತು. ಹೀಗಾಗಿ ಭಾರೀ ಅನಾಹುತವೊಂದು ತಪ್ಪಿದೆ.

ಕೂಡಲೇ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಒಂದು ವೇಳೆ ತಂತಿ ತುಂಡಾಗಿ ಟಿಪ್ಪರ್ ಮೇಲೆ ಬಿದ್ದಿದ್ದರೂ ಅದು ಸುಟ್ಟು ಭಸ್ಮವಾಗುವ ಸಾಧ್ಯತೆ ಹೆಚ್ಚಿತ್ತು. ಕಾಂಪ್ಲೆಕ್ಸ್ ಮಾಲೀಕರ ಬೇಜವಾಬ್ದಾರಿತನವೇ ಘಟನೆಗೆ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.

ರಸ್ತೆ ಮಧ್ಯದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವುದು ಗೊತ್ತಿದ್ದರೂ ಕಾಂಪ್ಲೆಕ್ಸ್ ಮಾಲೀಕರು ಮುಂಜಾಗ್ರತೆ ವಹಿಸದೆ ಟಿಪ್ಪರ್ ಮೂಲಕ ಮಣ್ಣು ಸುರಿಯಲು ಮುಂದಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯ ರಮೇಶ್ ಆರೋಪಿಸಿದ್ದಾರೆ.












Click it and Unblock the Notifications