ಜನರನ್ನು ಮೂರ್ಖರು ಎಂದುಕೊಳ್ಳಬೇಡಿ: ಸಿಎಂ ಗೆ ವಿಶ್ವನಾಥ್ ಎಚ್ಚರಿಕೆ
ಮೈಸೂರು, ಫೆಬ್ರವರಿ 22: "ಅಹಿಂದ ವರ್ಗದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿಎಂ ಶಾಶ್ವತ ಕಾರ್ಯಕ್ರಮ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಮೈಸೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
'ಮಾತೆತ್ತಿದರೆ ಅನ್ನಭಾಗ್ಯ, ಕ್ಷೀರ ಭಾಗ್ಯ ಅಂತ ಭಾಗ್ಯಗಳನ್ನು ಹೇಳುತ್ತೀರಿ. ಆದರೆ ಹಿಂದುಳಿದ ವರ್ಗಗಳು ನಿಮ್ಮ ಮೇಲೆ ಇಟ್ಟುಕೊಂಡಿದ್ದ ವಿಶ್ವಾಸ ಕಳೆದುಕೊಂಡಿವೆ. ಕಾಂಗ್ರೆಸ್ ನಾಯಕರಿಂದಲೇ ಕಾನೂನು ಉಲ್ಲಂಘನೆ ಆಗುತ್ತಿದೆ. ಗೃಹ ಮಂತ್ರಿಗೂ ಬೆಲೆ ಇಲ್ಲ. ಅಧಿಕಾರ ನಡೆಸುತ್ತಿರುವವರೇ ಬೇರೆ" ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
"ಒಬ್ಬ ಎಂಎಲ್ಎ ಮಗ ಹಫ್ತಾ ವಸೂಲು ಮಾಡುತ್ತಾರೆ ಎಂದರೆ ಏನರ್ಥ? ಕಾನೂನು ಸುವ್ಯವಸ್ಥೆ ಹಾಳಾದರೆ ಕೈಗಾರಿಕೋದ್ಯಮ, ಪ್ರವಾಸೋದ್ಯಮ ಕುಸಿಯುತ್ತದೆ. ಇದರ ಬಗ್ಗೆ ಮಾತನಾಡದ ಸಿಎಂ ಸಿದ್ದರಾಮಯ್ಯ, ಭಾಗ್ಯಗಳ ಬಗ್ಗೆ ಮಾತನಾಡುತ್ತಾರೆ" ಎಂದು ದೂರಿದರು.

"ಬಜೆಟ್ ನಲ್ಲಿ 100 ಹೊಸ ಪಬ್ಲಿಕ್ ಶಾಲೆ ಆರಂಭಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಆದರೆ ತಲಾ 5 ಲಕ್ಷ ರೂ. ಮೀಸಲು ಇಟ್ಟಿದ್ದೀರಿ. 5 ಲಕ್ಷ ರೂ.ಗಳಲ್ಲಿ ಪಬ್ಲಿಕ್ ಶಾಲೆ ತೆರೆಯಲು ಸಾಧ್ಯವೇ ? ಜನರನ್ನು ನೀವು ಮೂರ್ಖರು ಅಂದುಕೊಂಡಿದ್ದೀರಾ? ಮುಖ್ಯಮಂತ್ರಿಯೊಂದಿಗೆ ಸಾಮಾನ್ಯ ಕುರುಬ ಇಲ್ಲ. ಇವರ ಜತೆ ಫೈವ್ ಸ್ಟಾರ್ ಕುರುಬರು ಇದ್ದಾರೆ. ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಗೃಹಮಂತ್ರಿಗಳಿಗೆ ಅಧಿಕಾರ ಇಲ್ಲದಂತೆ ಆಗಿದೆ. ರಾಜ್ಯದ ಸುರಕ್ಷತೆ ಬಗ್ಗೆ ಅವರಿಗೆ ಗಮನ ಇಲ್ಲ ಎಂದು ಅವರು ಗುಡುಗಿದರು.
ಫೆ.24ರಂದು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಜೆಡಿಎಸ್ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆ ಆಯೋಜನೆಯಾಗಿದ್ದು, ಬೆಳಗ್ಗೆ 11ಕ್ಕೆ ನಡೆವ ಈ ಸಭೆಯಲ್ಲಿ ನಡೆಯುವ ಸಭೆಯಲ್ಲಿ ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ, ಬಂಡೆಪ್ಪ ಕಾಶಂಪೂರ್, ಶಾಸಕ ಮಧು ಬಂಗಾರಪ್ಪ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.












Click it and Unblock the Notifications