ಡಿಕೆ ಶಿವಕುಮಾರ್ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ: ಸಿಎಂ ಬೊಮ್ಮಾಯಿ ವ್ಯಂಗ್ಯ
ಮೈಸೂರು, ಜುಲೈ 20: "ಡಿ.ಕೆ. ಶಿವಕುಮಾರ್ ಬಹಳ ವರ್ಷಗಳಿಂದ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಲು ಅವರ ಪಕ್ಷದವರೇ ಬಿಡುತ್ತಿಲ್ಲ" ಎಂದು ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಬುಧವಾರ ಕಬಿನಿ ಮತ್ತು ಕೆಆರ್ಎಸ್ ಜಲಾಶಯಗಳಿಗೆ ಬಾಗಿನ ಅರ್ಪಿಸಲು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಕ್ಕಲಿಗರು ಜೆಡಿಎಸ್ ಪರ ಎಂದ ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ತಿರುಗೇಟು
ಈ ಸಂದರ್ಭದಲ್ಲಿ ಡಿ. ಕೆ. ಶಿವಕುಮಾರ್ರ ರಿಮೋಟ್ ಕಂಟ್ರೋಲರ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, "ಸಿದ್ದರಾಮಯ್ಯಮತ್ತು ಡಿ. ಕೆ. ಶಿವಕುಮಾರ್ ನಾನೊಂದು ತೀರ ನೀನೊಂದು ತೀರ ಎನ್ನುವಂತಿದ್ದಾರೆ. ಶಿವಕುಮಾರ್ ಪಾಪ ಬಹಳ ವರ್ಷಗಳಿಂದ ಸಿಎಂ ಆಗಬೇಕೆಂದು ಒದ್ದಾಡುತ್ತಿದ್ದಾರೆ. ಆದರೆ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಮೊದಲು ಅವರ ತಟ್ಟೆಯಲ್ಲಿ ಏನಿದೆ? ಎಂದು ನೋಡಿಕೊಳ್ಳಲಿ" ಎಂದು ತಿರುಗೇಟು ನೀಡಿದರು.
"ಚಾಮುಂಡೇಶ್ವರಿ ಆಶೀರ್ವಾದ ಪಡೆದು, ಕಬಿನಿ ಕೆಆರ್ ಎಸ್ ಜಲಾಶಯಗಳಿಗೆ ಬಾಗಿನ ಅರ್ಪಣೆ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಆಷಾಢ ಮಾಸದಲ್ಲಿಯೇ ಎಲ್ಲಾ ಜಲಾಶಯಗಳು ತುಂಬಿರುವುದು ಖುಷಿಯ ವಿಚಾರ. ಈ ಬಾರಿ ಮಳೆ ಚೆನ್ನಾಗಿ ಆಗಿದೆ. ರೈತರು ಉತ್ತಮ ಫಸಲು ತೆಗೆಯಲು ಅನುಕೂಲವಾಗಿದೆ. ತಾವು ಚಾಮುಂಡೇಶ್ವರಿ ವರ್ದಂತಿಯಲ್ಲಿ ಭಾಗವಹಿಸಲಿದ್ದೇನೆ" ಎಂದರು.
Mysore Dasara 2022: ಅದ್ಧೂರಿಯಾಗಿ ಮೈಸೂರು ದಸರಾ ಆಚರಿಸಲು ತೀರ್ಮಾನ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ
ಒಪ್ಪಂದದ ಪ್ರಕಾರ ರಾಜ್ಯಕ್ಕೆ ಜಿಎಸ್ಟಿ ಪಾಲು ಸಿಕ್ಕಿದೆ
"ರಾಜ್ಯದ ಪಾಲಿನ ಜಿಎಸ್ಟಿ ಮೊತ್ತ 8,800 ಕೋಟಿ ಇತ್ತೀಚೆಗೆ ಬಂದಿದೆ. ಜಿಎಸ್ಟಿ ಒಪ್ಪಂದದ ಪ್ರಕಾರ ಐದು ವರ್ಷ ಕಾಲ ಮಾತ್ರ ಮರಳಿ ಕೊಡಬೇಕು ಎಂದಿದೆ. ಕಳೆದೆರಡು ವರ್ಷ ಕೋವಿಡ್ ಸಂದರ್ಭದಲ್ಲಿ ತೆರಿಗೆ ಸಂಗ್ರಹ ಆಗಿದಿದ್ದರೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್ಟಿ ಪಾವತಿಸಿದೆ. ಹಾಗಾಗಿ ಜಿಎಸ್ಟಿ ಬಂದಿಲ್ಲ ಎಂಬ ಆರೋಪ ಸರಿಯಲ್ಲ" ಎಂದರು.
ಧರ್ಮಪತ್ನಿಯೊಂದಿಗೆ ಬಾಗಿನ ಅರ್ಪಿಸಿದ ಸಿಎಂ
ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಕಬಿನಿ ಜಲಾಶಯದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಸವರಾಜ ಬೊಮ್ಮಾಯಿ ಧರ್ಮಪತ್ನಿ ಜೊತೆ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಅವರು ಕಬಿನಿ ಜಲಾಶಯದ ಉದ್ಯಾನವ ಸ್ವಲ್ಪ ಗೊಂದಲದಲ್ಲಿದೆ. ಈ ಒಂದು ಗೊಂದಲವನ್ನು ಆದಷ್ಟು ಬೇಗ ನಿವಾರಣೆ ಮಾಡಿ ಇದೇ ವರ್ಷ ಕಬಿನಿ ಜಲಾಶಯದ ಉದ್ಯಾನವನದ ಕಾಮಗಾರಿ ಆರಂಭಿಸುತ್ತೇವೆ ಎಂದು ತಿಳಿಸಿದರು.
ಮಳೆಹಾನಿಗೊಳಗಾದವರಿಗೆ ಶೀಘ್ರದಲ್ಲೆ ಪರಿಹಾರ
ಎಚ್. ಡಿ. ಕೋಟೆ ತಾಲೂಕು ನಂಜುಂಡಪ್ಪ ವರದಿಯಲ್ಲೂ ಹಿಂದುಳಿದ ತಾಲೂಕು ಅಂತ ಇದೆ. ಅದರ ಸಮಗ್ರ ಅಭಿವೃದ್ಧಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಿದ್ದೇವೆ. ವಿಶೇಷವಾಗಿ ಶಿಕ್ಷಣದಲ್ಲಿ ಅತಿ ಹೆಚ್ಚು ಶಾಲಾ ಕಟ್ಟಡ ತೆಗೆದುಕೊಳ್ಳುತ್ತೇವೆ. ಪಿಹೆಚ್ಸಿ ಸೆಂಟರ್ ಅಭಿವೃದ್ಧಿ ಮಾಡಲಾಗುವುದು. ಶಾಸಕರಿಗೆ ಈಗಾಗಲೇ ಅನುದಾನ ನೀಡಿದ್ದೇನೆ. ಇನ್ನು ಕೆಲವು ಅನುದಾನ ರಸ್ತೆಗಳು, ಮಳೆ ಬಂದಾಗ ಮನೆ ಬಿದ್ದಿರುವುದಕ್ಕೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಆದೇಶಿಸಿ ಪರಿಹಾರ ನೀಡುವ ಏರ್ಪಾಡು ಮಾಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ಅದ್ದೂರಿ ದಸರಾಗೆ ಆಚರಣೆಗೆ ತೀರ್ಮಾನ
ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚಾಮುಂಡೇಶ್ವರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬೊಮ್ಮಾಯಿ, ಕನ್ನಡ ನಾಡಿಗೆ ಸುಬೀಕ್ಷೆ, ಅಭಿವೃದ್ಧಿ ಕೊಡಲಿ. ಎಲ್ಲರ ಬದುಕಿನಲ್ಲಿ ಸುಖಶಾಂತಿ ನೆಲೆಸಲಿ ಎಂದು ಇಡೀ ರಾಜ್ಯದ ಜನರ ಪರವಾಗಿ ಚಾಮುಂಡಿ ತಾಯಿಗೆ ಪ್ರಾರ್ಥಿಸಿದ್ದೇನೆ. ಕೋವಿಡ್ನಿಂದ ಕಳೆದೆರಡು ವರ್ಷಗಳು ಕೇವಲ ಸಾಂಪ್ರದಾಯಿಕ ದಸರಾ ಆಚರಣೆಗೆ ಮಾತ್ರ ಸೀಮಿತವಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಈ ಸಾಲಿನ ದಸಾರಕ್ಕೆ ಹೊಸ ಆಯಾಮ ಸಿಗಲಿದೆ. ಉದ್ಘಾಟಕರ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಎಲ್ಲರ ಅಭಿಪ್ರಾಯ ಪಡೆದು, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ ಎಂದರು.