''ಹಾವು ಬಿಡ್ತೀನಿ ಅಂತಾ ಹೆದರಿಸ್ಬೇಡಿ, ಬುಟ್ಟಿ ತೆಗಿರಿ ಬಂಡವಾಳ ತಿಳಿಯಲಿ''
ಮೈಸೂರು, ಜನವರಿ 26: ''ಕಾಂಗ್ರೆಸ್ ನಾಯಕರು ಸುಮ್ಮನೆ ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತೀನಿ, ಹಾವು ಬಿಡ್ತೀನಿ ಅಂತಾ ಹೆದರಿಸುತ್ತಿದ್ದಾರೆ. ಬುಟ್ಟಿ ತೆಗೆದರೆ ತಾನೇ ಹಾವು ಬುಸ್ ಅನ್ನುತ್ತೋ ಅಥವಾ ಠುಸ್ ಅನ್ನುತ್ತೋ ಗೊತ್ತಾಗೋದು,'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಲೇವಡಿ ಮಾಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬಿಜೆಪಿ ಶಾಸಕರ ಸಂಪರ್ಕದಲ್ಲಿದ್ದಾರೆಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ನಮಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಕೆಲಸ ಇಲ್ಲದೆ ಅವರು ಏನೇನೋ ಮಾತಾಡುತ್ತಾರೆ. ಆದರೆ ನಮಗೆ ಅಭಿವೃದ್ಧಿ ಮಾಡುವ ಕೆಲಸ ಇದೆ. ಸಿಎಂ ಅವರು ಆಡಳಿತ ಅತ್ಯುತ್ತಮವಾಗಿ ನಡೆಸುತ್ತಿದ್ದು, ಕೆಲಸವಿಲ್ಲದ ಕಾಂಗ್ರೆಸ್ ಸುಮ್ಮನೆ ಮಾತಾಡುತ್ತಿದ್ದಾರೆ,'' ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸೋಮಶೇಖರ್ ವಾಗ್ದಾಳಿ ನಡೆಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೂ ಸೋಮಶೇಖರ್ ಟಾಂಗ್ ನೀಡಿದರು. ಸೋಮಶೇಖರ್ ಹೇಳಿಕೆ ವಿಚಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯೆ
ಅಲ್ಲದೇ ಬಿಜೆಪಿಯ ಹಲವರು ಕಾಂಗ್ರೆಸ್ಗೆ ಬರ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೋಳಿ ಕಾಂಗ್ರೆಸ್ನ 17 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರಿಗೂ ತಳಮಳ ಶುರುವಾಗಿದ್ದು, ಯಾರೂ ಪಕ್ಷಬಿಡದಂತೆ ತಡೆಯಲು ಕಾಂಪಿಟೇಷನ್ ಮೇಲೆ ಹೇಳಿಕೆ ಕೊಡ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಎಸ್ಟಿಎಸ್, ಪಕ್ಷದ ಮೇಲೆ ಹಿಡಿತ ಸಾಧಿಸಲು ಅವರ ಮೇಲಿ ಇವರು, ಇವರ ಮೇಲೆ ಅವರು ಕಾಂಪಿಟೇಷನ್ ಮಾಡಿದ್ದಾರೆ. ಆದರೆ ಪಕ್ಷ ಬಿಟ್ಟು ಹೋಗುವ ಚಿಂತನೆ ಯಾರೂ ಮಾಡಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಮಂತ್ರಿಗಳಾಗಿ ಎರಡು ವರ್ಷ ಸರ್ಕಾರ ಹಾಗೂ ಪಕ್ಷಕ್ಕೆ ಚ್ಯುತಿ ಬರದಂತೆ ಕೆಲಸ ಮಾಡಿದ್ದೇವೆ ಎಂದರು.

ಸಿದ್ದರಾಮಯ್ಯ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ
ಅಲ್ಲದೇ ಕಾಂಗ್ರೆಸ್ನಿಂದ ಹೋದವರು ಒಳ್ಳೆ ಕೆಲಸ ನಾಡುತ್ತಿದ್ದಾರೆ ಎಂಬ ಸಂದೇಶ ರಾಜ್ಯಕ್ಕೆ ಹೊಗುತ್ತಿದೆ. ಇದನ್ನು ಸಿದ್ದರಾಮಯ್ಯ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಸಿದ್ದರಾಮಯ್ಯ ಸದನದ ಒಳಗೆ, ಹೊರಗೆ ಹಾಗೂ ನಮ್ಮ ಕ್ಷೇತ್ರದಲ್ಲಿ ಏನೇನು ಮಾತಾಡಿದ್ದಾರೆ ನಾವು ಮರೆತಿಲ್ಲ. ಕಾಂಗ್ರೆಸ್ನವರು ಏನೆಲ್ಲ ತೇಜೋವಧೆ ಮಾಡಿದ್ದಾರೆ ಎಲ್ಲ ನಮ್ಮ ಮೈಂಡ್ನಿಂದ ಹೋಗಿಲ್ಲ. ಎರಡು ವರ್ಷ ಆದ ಮೇಲೆ ಸಿದ್ದರಾಮಯ್ಯ ವರಸೆ ಯಾಕೆ ಬದಲಾಗಿದೆ ಅಂತ ಅವರೇ ಹೇಳಬೇಕು ಎಂದರು.

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೂ ಟಾಂಗ್
ಇನ್ನೂ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೂ ಟಾಂಗ್ ನೀಡಿದ ಅವರು, ಕೆಲವರು ಈಗಿಂದ ಇಂತಹ ಮಾತು ಹೇಳುತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ಸರ್ಕಾರ ಬಂದಾಗಿದ್ದ ಗೋಲ್ಡನ್ ವರ್ಡ್ಸ್ ಹೇಳುತ್ತಿದ್ದಾರೆ. ಬೊಮ್ಮಾಯಿ ಅವರು ಸಿಎಂ ಆದಾಗಲೂ ಅದನ್ನೇ ಹೇಳುತ್ತಿದ್ದಾರೆ. ಮಂತ್ರಿ ಮಂಡಲ ಇರುವವರೆಗೂ ಗೋಲ್ಡನ್ ವರ್ಡ್ಸ್ ಬರ್ತಾವೆ. ಚುನಾವಣೆ ಘೋಷಣೆ ಆದಾಗ ಗೋಲ್ಡನ್ ವರ್ಡ್ಸ್ ನಿಂತು ಹೋಗ್ತವೆ. ಅಪರೂಪಕ್ಕೆ ಗೋಲ್ಡನ್ ವರ್ಡ್ ಹೇಳಿದ್ರೆ ತೂಕ ಬರುತ್ತೆ. ಹೀಗಾಗಿ ಯತ್ನಾಳ್ ಹೇಳಿಕೆಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ತಮ್ಮದೇ ಪಕ್ಷದ ನಾಯಕನಿಗೆ ತಿರುಗೇಟು ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ತಿರುಗೇಟು
ಈ ನಡುವೆ ಕಾಂಗ್ರೆಸಿಗರಿಗೆ ಕೆಲಸ ಇಲ್ಲ ಸುಮ್ಮನೆ ಮಾತನಾಡುತ್ತಾರೆ ಎಂಬ ಎಸ್.ಟಿ. ಸೋಮಶೇಖರ್ ಹೇಳಿಕೆ ವಿಚಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ತಿರುಗೇಟು ನೀಡಿದ್ದಾರೆ. ನಿಮಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಆಡಳಿತ ಪಕ್ಷ ವೈಫಲ್ಯಗಳಿದ್ದಾಗ ಎಚ್ಚರಿಸುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ನಿಮಗೆ ಮೈಸೂರಿನಲ್ಲಿ ಒಂದೇ ಒಂದು ವಿಧಾನ ಪರಿಷತ್ ಸ್ಥಾನ ಜಿಜೆಪಿ ಗೆಲ್ಲಸೋಕೆ ಆಗಲಿಲ್ಲ. ರಘು ಅವರನ್ನ ಸೋಲಿಸಿದ್ರಿ. ಕಾಂಗ್ರೆಸ್ ಬಗ್ಗೆ ಮಾತನಾಡಲು ನಿನಗೆ ಯಾವ ನೈತಿಕತೆ ಇದೆ?, ಹತಾಶೆಮನೋಭಾವನೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ
ಇನ್ನೂ, ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ರಮೇಶ್ ಜಾರಕಿಹೋಳಿ ಒಬ್ಬ ಕಳಂಕಿತ. ಕಳಂಕಿತರ ಬಾಯಲ್ಲಿ ಹೇಳೋದಕ್ಕೆ ನಾವು ಪ್ರಾಮುಖ್ಯತೆ ಕೊಡಲು ಆಗಿತ್ತಾ? ಮೊದಲು ನಿಮ್ಮ ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳಲಿ. ಬೆಳಗಾಂ ಜಿಲ್ಲೆಯಲ್ಲೇ ಕತ್ತಿ ಮನೆಯಲ್ಲಿ ಅವರದೇ ಪಕ್ಷದ ಮುಖಂಡರು ರಮೇಶ್ ಜಾರಕಿಹೊಳಿ ಬಿಟ್ಟು ಸಭೆ ಮಾಡಿದ್ದಾರೆ. ಇದರ ಅರ್ಥ ಏನು? ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಮೊದಲು ಅದನ್ನು ಸರಿಪಡಿಸಿಕೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ತಿರುಗೇಟು ನೀಡಿದರು.

ಸೋಮಣ್ಣ ಉಸ್ತುವಾರಿ ಆಗಿರುವುದು ಸ್ವಾಗತಾರ್ಹ
ಇದೇ ವೇಳೆ ಸಚಿವ ವಿ.ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಬಗ್ಗೆ ಮಾತನಾಡಿದ ಅವರು, ವಿ. ಸೋಮಣ್ಣ ಉಸ್ತುವಾರಿ ಆಗಿರುವುದನ್ನು ನಾನು ಸ್ವಾಗತಿಸುತ್ತೇನೆ. ಚಾಮರಾಜನಗರವನ್ನು ಬಿಜೆಪಿ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಸೋಮಣ್ಣ ಬಂದರೂ ಏನು ಬದಲಾವಣೆ ಆಗೋದಿಲ್ಲ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೂ ಏನು ಸಮಸ್ಯೆ ಆಗೋದಿಲ್ಲ. ಯಡಿಯೂರಪ್ಪ ಇರುವವರೆಗೂ ವಿ.ಸೋಮಣ್ಣ ಅವರ ಇಲಾಖೆಗೆ ಒಂದು ಅನುಧಾನ ಬಿಡುಗಡೆ ಆಗಿಲ್ಲ. ಈಗ ಬಸವರಾಜ್ ಬೊಮ್ಮಯಿ ಸಿಎಂ ಆದಮೇಲೆ ಅನುದಾನ ಬಿಡುಗಡೆ ಮಾಡಿದ್ದಾರೆ. ನೆನಗುದಿಗೆ ಬಿದ್ದ ಯೋಜನೆಗಳನ್ನು ಸೋಮಣ್ಣ ಮಾಡಲಿ ಎಂದು ಮನವಿ ಮಾಡುತ್ತೇನೆ ಎಂದುಆರ್. ಧ್ರುವನಾರಾಯಣ್ ಹೇಳಿದರು.

ಕಾಂಗ್ರೆಸ್ ನಾಯಕ ವಿರುದ್ದ ಎಫ್ ಐ ಆರ್
ಇನ್ನೂ ಮೇಕೆದಾಟು ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ವಿರುದ್ದ ಎಫ್ ಐ ಆರ್ ದಾಖಲು ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಬಿಜೆಪಿ ಸರ್ಕಾರದ ದ್ವಂದ್ವ ನೀತಿಯಾಗಿದ್ದು, ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರದಲ್ಲಿ 2 ಸಾವಿರ ಜನ ಇದ್ದರು. ಅಲ್ಲಿ ಸಿಎಂ ಇದ್ರು, ಗೃಹ ಸಚಿವರೂ ಇದ್ದರೂ, ರೇಣುಕಾಚಾರ್ಯ, ಗೃಹ ಮಂತ್ರಿಗಳ ಕ್ಷೇತ್ರದಲ್ಲಿ ದೊಡ್ಡ ಜಾತ್ರೆಯೆ ಆಗಿದೆ. ಅವರ ಮೇಲು ಕ್ರಮ ಆಗಬೇಕು ಅಂತ ಕಾಂಗ್ರೆಸ್ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಈಗ ಅಲ್ಲೊಂದು ಇಲ್ಲೊಂದು ಎಫ್ ಐ ಆರ್ ಹಾಕಬೇಕು. ನೆನ್ನೆ ಚಾಮರಾಜನಗರ ಕ್ಕೆ ಸೋಮಣ್ಣ ಬಂದಾಗಲು ಜಾತ್ರೆ ಆಗಿದೆ. ಅವರ ಮೇಲು ಮೊಕದ್ದಮೆ ಹೂಡಬೇಕೆಂದು ಧ್ರುವನಾರಾಯಣ್ ಒತ್ತಾಯಿಸಿದರು.












Click it and Unblock the Notifications