ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯತಿ ದರದ ಸೀರೆ ಸಿಗುವುದು ಡೌಟು?
ವರಮಹಾಲಕ್ಷ್ಮಿ ಹಬ್ಬಕ್ಕೆ ರೇಷ್ಮೆ ಸೀರೆ, ಅದರಲ್ಲೂ ಮೈಸೂರು ಸಿಲ್ಕ್ ರಿಯಾಯಿತಿ ದರದ ಮಾರಾಟ ಕೊಡುಗೆ ನೀಡುವುದಾಗಿ ರಾಜ್ಯ ಸರಕಾರ ಘೋಷಣೆ ಮಾಡಿದೆ. ಅದಕ್ಕೂ ಮುಂಚೆ ಅಂದರೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್ 15ರಿಂದ 24ರ ವರೆಗೆ ಶೇಕಡಾ ಐವತ್ತರಷ್ಟು ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಗಳನ್ನು ಮಾರಾಟ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು.
ಆದರೆ, ಖರೀದಿಗೆ ತೆರಳಿದ್ದ ಸಾರ್ವಜನಿಕರು ಬರಿಗೈನಲ್ಲಿ ಹಿಂತಿರುಗಿದರು. ಇದೇ ಪರಿಸ್ಥಿತಿ ವರಮಹಾಲಕ್ಷ್ಮಿ ದಿನದಂದು ಆಗಬಹುದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಇರುವುದರಿಂದ ರಿಯಾಯಿತಿ ಮಾರಾಟವನ್ನು ಆಗಸ್ಟ್ 15ರಂದು ಮುಂದೂಡಲಾಯಿತು.
ರಿಯಾಯಿತಿ ದರದ ರೇಷ್ಮೆ ಸೀರೆ: ನಂಬಿ ಹೋದವರು ಬೇಸ್ತು
ಆದರೆ, ಎಲ್ಲರ ಮುಂದಿರುವ ಪ್ರಶ್ನೆ ಏನೆಂದರೆ ಚುನಾವಣೆಗೆ 15 ದಿನ ಮುಂಚೆಯೇ ಈ ಹಣೆಬರಹವಾದರೆ, ಚುನಾವಣೆಗೆ ಇನ್ನೊಂದು ವಾರವಿದ್ದಾಗ ಏನು ಕಥೆ? ಮೊದಲಿನಿಂದಲೂ ಸ್ವಾತಂತ್ರ್ಯೋತ್ಸವಕ್ಕೆ ರೇಷ್ಮೆ ಸೀರೆ ಮಾರಾಟ ಮಾಡುವುದಾಗಿ ಪ್ರಚಾರ ಮಾಡಿ, ಅಂತಿಮ ಹಂತದಲ್ಲಿ ನೀತಿ ಸಂಹಿತೆ ಕಾರಣಕ್ಕೆ ರಿಯಾಯಿತಿ ಮಾರಾಟ ರದ್ದುಪಡಿಸಿರುವುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದೆ ಇರುವುದೇ ಈ ಗೊಂದಲಕ್ಕೆ ಕಾರಣವಾಗಿದೆ.
ಆಗಸ್ಟ್ 21ರಂದು ಕುಮಾರಸ್ವಾಮಿಯಿಂದ ಚಾಲನೆ
ಆಗಸ್ಟ್ 21ರಂದು ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಮಾಡುವುದಕ್ಕೆ ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಈಗಾಗಲೇ ಸಚಿವ ಸಾರಾ ಮಹೇಶ್ ಘೋಷಿಸಿದ್ದಾರೆ. ಆದರೆ ಈ ಮಧ್ಯೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿರುವ ಕಡೆ ಈ ಕಾರ್ಯಕ್ರಮದ ಜಾರಿ ಅನುಮಾನ ಮೂಡುತ್ತಿದೆ.
ಚುನಾವಣೆ ಆಯೋಗ ಏನು ಹೇಳುತ್ತದೆ?
ಏಕೆಂದರೆ, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆಯೇ ಎಂಬ ಪ್ರಶ್ನೆ ಸರಕಾರವನ್ನು ಕಾಡಿದೆ. ಹೀಗಾಗಿ, ಚುನಾವಣಾ ಆಯೋಗದಿಂದ ಸ್ಪಷ್ಟೀಕರಣ ಕೂಡ ಬಯಸಿದೆ. ಹಬ್ಬದ ವೇಳೆ ಮೈಸೂರು ರೇಷ್ಮೆ ಸೀರೆಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ರೇಷ್ಮೆ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಈ ಹಿಂದೆ ಪ್ರಕಟಿಸಿದ್ದರು.
ಕುಟುಂಬಕ್ಕೊಂದೇ ರಿಯಾಯ್ತಿ ದರದ ಮೈಸೂರು ಸಿಲ್ಕ್ ರೇಷ್ಮೆ ಸೀರೆ!
ಅನುಮತಿ ಪಡೆಯಲು ಜಿಲ್ಲಾಧಿಕಾರಿಗೆ ಸೂಚನೆ
ವರಮಹಾಲಕ್ಷ್ಮಿ ಹಬ್ಬ ಹತ್ತಿರ ಆಗುತ್ತಿರುವುದರಿಂದ ಸೀರೆ ಮಾರಾಟಕ್ಕೆ ಅನುಮತಿ ನೀಡುವ ಕುರಿತು ಚುನಾವಣಾ ಆಯೋಗದಿಂದ ಅನುಮತಿ ಪಡೆದುಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗೆ ಸಚಿವ ಸಾ.ರಾ.ಮಹೇಶ್ ಈಗಾಗಲೇ ನಿರ್ದೇಶನ ನೀಡಿದ್ದಾರೆ. ಹಬ್ಬ ಇರುವ ಕಾರಣ ಜನರು ಸೀರೆ ಖರೀದಿಸುವುದರಿಂದ ಅದಕ್ಕೆ ಅನುಮತಿ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಕೂಡ ತಿಳಿಸಿದ್ದಾರೆ.
ಚುನಾವಣೆ ಇರುವ ಕಡೆ ಮಾರಾಟ ಅನುಮಾನ
ರೇಷ್ಮೆ ಸೀರೆಯ ರಿಯಾಯಿತಿ ಮಾರಾಟವು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆಯೇ ಎಂಬ ಬಗ್ಗೆ ರಾಜ್ಯ ಚುನಾವಣಾ ಆಯೋಗದಿಂದ ಸ್ಪಷ್ಟೀಕರಣ ಕೇಳಲಾಗಿದೆ. ಒಂದು ವೇಳೆ ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಯೋಗ ಸೂಚಿಸಿದರೆ ಆಗ ಚುನಾವಣೆ ಘೋಷಣೆಯಾಗಿರುವ ಕಡೆ ಮಾರಾಟ ನಡೆಯುವುದು ಅನುಮಾನವೇ ಸರಿ.