ನಂಜನಗೂಡು ಶ್ರೀಕಂಠೇಶ್ವರ ದರ್ಶನಕ್ಕೆ ಹರಿದು ಬಂದ ಭಕ್ತರು
ಮೈಸೂರು,ಫೆಬ್ರವರಿ,23: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನಂಜನಗೂಡಿಗೆ ಸೋಮವಾರ ಭಕ್ತ ಸಮೂಹ ಸಾಗರದಂತೆ ಹರಿದು ಬಂದಿತ್ತು. ವ್ಯಾಸ ಹುಣ್ಣಿಮೆ ಹಿನ್ನಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಕಂಠೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಸೋಮವಾರದಂದೇ ಹುಣ್ಣಿಮೆ ಬಂದಿರುವುದರಿಂದ ಭಕ್ತರು ಬಸ್ಸುಗಳಲ್ಲಿ, ರೈಲುಗಳಲ್ಲಿ, ಸ್ವಂತ ವಾಹನಗಳಲ್ಲಿ ದೂರದ ಊರುಗಳಿಂದ ಆಗಮಿಸಿದ್ದರು. ಕಪಿಲಾ ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಉರುಳು ಸೇವೆ, ತುಲಾಭಾರ, ಬೆಳ್ಳಿಯ ಹರಕೆಯನ್ನು ದೇವರಿಗೆ ಸಮರ್ಪಿಸಿದರು.[ಕಣ್ಮನಸೆಳೆದ ಮೈಸೂರಿನ ಬನ್ನೂರು ಬಂಡೀ ಉತ್ಸವ]

ಶ್ರಿ ಶ್ರೀಕಂಠೇಶ್ವರಸ್ವಾಮಿಯ ದರ್ಶನಕ್ಕೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಶ್ರೀ ಸ್ವಾಮಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ವಿವಿಧ ಸೇವೆಗಳಾದ ಎಳನೀರು, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ, ಶಾಲ್ಯಾನ್ನ ಮುಂತಾದ ಸೇವೆಗಳನ್ನು ಸಲ್ಲಿಸಿ ಭಕ್ತಿ ಮೆರೆದರು.[ಮೈಸೂರಲ್ಲಿ 10ನೇ ಮಹಾಕುಂಭಮೇಳ]
ದೇವಸ್ಥಾನದ ಆಸುಪಾಸಿನಲ್ಲಿ ಭಕ್ತರು ಭಗೀರಥ, ಗಂಗಾಮಾತಾ ಮುಂತಾದ ದೇವತೆಗಳ ಭಜನೆ ಮಾಡುತ್ತಿದ್ದುದ್ದು ಕಂಡು ಬಂದಿತು. ಮುಂಜಾನೆಯಿಂದ ರಾತ್ರಿವರೆಗೂ ದೇವಸ್ಥಾನ ಭಕ್ತರಿಂದ ತುಂಬಿ ತುಳುಕುತ್ತಿತ್ತು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ್ ಅವರು ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿಯ ಸೌಕರ್ಯ ಒದಗಿಸಿ ದೇವರ ದರ್ಶನಕ್ಕೆ ಯಾವುದೇ ಕುಂದು ಕೊರತೆಯಾಗದಂತೆ ನೋಡಿಕೊಂಡರು.












Click it and Unblock the Notifications