ಮಳೆಗಾಗಿ ಕುಂತಮ್ಮನ ಬೆಟ್ಟ ಹತ್ತಿದ ಭಕ್ತರು...
ಮೈಸೂರು, ಜುಲೈ 11: ಆಷಾಢ ಬಂದರೂ ಬಹಳಷ್ಟು ಕಡೆಗಳಲ್ಲಿ ಮಳೆ ಬಾರದಿರುವುದು ರೈತಾಪಿ ಜನರನ್ನು ಆತಂಕಕ್ಕೆ ತಳ್ಳಿದೆ. ಮುಂಗಾರು ಮಳೆಯನ್ನು ನಂಬಿ ಕೃಷಿ ಮಾಡುವ ಕೃಷಿಕರು ಒಂದೆಡೆಯಾದರೆ, ಮತ್ತೊಂದೆಡೆ ಮಳೆ ಬಾರದೆ ಕೆರೆಕಟ್ಟೆಗಳು ತುಂಬದಿದ್ದರೆ ಜನ ಜಾನುವಾರುಗಳ ಗತಿಯೇನು ಎಂಬ ಭಯವೂ ಕಾಡುತ್ತಿದೆ.
ಇದಕ್ಕಾಗಿ ಹಲವು ಗ್ರಾಮಗಳಲ್ಲಿ ಇವತ್ತಿಗೂ ಮಳೆಗಾಗಿ ಪೂಜೆ, ಪುನಸ್ಕಾರ ಮಾಡುವುದನ್ನು ನೋಡಬಹುದು. ಅದರಂತೆ ಹುಣಸೂರು ತಾಲ್ಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಮಹಿಳೆಯರು ಹಾಗೂ ಪುರುಷರು ಮಳೆಗಾಗಿ ಕುಂತಮ್ಮ ದೇವರನ್ನು ಪ್ರಾರ್ಥಿಸುತ್ತಾ ಬರಿಗಾಲಿನಲ್ಲಿ ಕುಂತಿಬೆಟ್ಟವನ್ನೇರಿ ಮಳೆಗಾಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ದೇವರಿಗೆ ಅರ್ಪಿಸಿದ್ದಾರೆ.
ಕುಂತಿಬೆಟ್ಟವು ಹಿರೀಕ್ಯಾತನಹಳ್ಳಿ ಗ್ರಾಮದಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ನೆಲೆನಿಂತಿರುವ ಕುಂತಮ್ಮ ದೇವಿ ಆರಾಧ್ಯ ದೈವವಾಗಿದ್ದು, ಮಳೆಗಾಗಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಜನರು ನಡೆಸಿಕೊಂಡು ಬಂದಿದ್ದಾರೆ.

ಇಲ್ಲಿ ಕುಂತಮ್ಮ ದೇವಿಯನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬ ಪ್ರತೀತಿಯಿದೆ. ಹೀಗಾಗಿ ಪ್ರತಿವರ್ಷವೂ ಸುತ್ತಮುತ್ತಲಿನ ಗ್ರಾಮಗಳ ಜನ ಇಲ್ಲಿಗೆ ಬಂದು ಮಳೆ ಬೆಳೆಯಾಗಿ ಬೇಡಿ ನಾಡು ಸಮೃದ್ಧಿಯಾಗುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡು ಹೋಗುತ್ತಾರೆ.
ಈ ಬಾರಿ ಮುಂಗಾರು ಪೂರ್ವ ಮಳೆಯೂ ಸರಿಯಾಗಿ ಸುರಿದಿಲ್ಲ. ಮುಂಗಾರು ಕೂಡ ದುರ್ಬಲವಾಗಿದೆ. ಇದರಿಂದ ಕೃಷಿಯನ್ನು ನಂಬಿ ಬದುಕುವ ರೈತರ ಸ್ಥಿತಿ ಡೋಲಾಯಮಾನವಾಗಿದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲ. ಜನಜಾನುವಾರು, ಪ್ರಾಣಿಪಕ್ಷಿಗಳು ನೀರಿಲ್ಲದೆ ಪರದಾಡುವಂತಾಗಿದೆ. ಆದ್ದರಿಂದ ಮಳೆ ಸುರಿಸುವಂತೆ ಪ್ರಾರ್ಥಿಸಿ ಕುಂತಮ್ಮ ದೇವಿಗೆ ಬೆಟ್ಟದಲ್ಲೇ ನೈವೇದ್ಯ ತಯಾರಿಸಿ ಸಲ್ಲಿಸಿದರು. ಹಲಸಿನಹಣ್ಣು ಬಾಳೆಹಣ್ಣು ತುಪ್ಪ ನೈವೇದ್ಯ, ಬೆಲ್ಲದ ಅನ್ನ, ಪಾಯಸದ ಸಿಹಿ ಊಟದ ಅಡುಗೆ ಮಾಡಿ ದೇವರಿಗೆ ಅರ್ಪಿಸಿ ಎಲ್ಲರೂ ಒಂದೆಡೆ ಕುಳಿತು ಬಾಳೆಎಲೆಯಲ್ಲಿ ಊಟ ಮಾಡಿದರು.
ಪೂಜೆ ನಡೆಯುವ ವೇಳೆ ಕೊಂಬು ಕಹಳೆ, ಮಂಗಳವಾದ್ಯ, ತಮಟೆ ವಾದ್ಯಗಳೊಂದಿಗೆ ಯುವಕರು ಕುಣಿದು ಕುಪ್ಪಳಿಸಿ ದೇವರ ದರ್ಶನ ಪಡೆಯುತ್ತಾರೆ. ಪೂಜೆ ಮಾಡಿದ ದಿನವೇ ಮಳೆ ಸುರಿಯುತ್ತದೆ ಎಂಬ ಪ್ರತೀತಿಯಿದೆ.












Click it and Unblock the Notifications